ಶಿರಸಿ: ಸರ್ಕಾರಿ ಬೆಟ್ಟಗಳನ್ನು ದುರುಪಯೋಗ ಪಡಿಸಿಕೊಂಡವರನ್ನು ‘ಭೂ ಕಳ್ಳರು’ ಎಂದೇ ಕರೆಯುತ್ತೇವೆ ಎಂದು ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಸ್ಪಷ್ಟಪಡಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಹೇಳಿದಂತೆ ‘ಆಪರೇಷನ್ ಬೆಟ್ಟ’ ಯಾವತ್ತೂ ನಿಲ್ಲುವುದಿಲ್ಲ. ಭಾಗಾಯ್ತು ಎಂದು ನೀಡಿರುವ ಸರ್ಕಾರಿ ಬೆಟ್ಟಗಳಲ್ಲಿ ಅನಧಿಕೃತವಾಗಿ ಬೇಲಿ ಹಾಕುವುದು, ಮರಗಳನ್ನು ಕಡಿದು ತೋಟ ನಿರ್ಮಾಣ ಮಾಡುವುದು ಮುಂತಾದ ಕ್ರಮಗಳು ಸವಲತ್ತಿನ ದುರುಪಯೋಗವಾಗಿವೆ” ಎಂದು ಆರೋಪಿಸಿದರು.
ಈ ರೀತಿಯ ಚಟುವಟಿಕೆಗಳಿಂದ ಅರಣ್ಯ ನಾಶ ಹೆಚ್ಚುತ್ತಿದೆ. ಇಂತಹ ಲೂಟಿಕೋರರ ವಿರುದ್ಧವೇ ನಮ್ಮ ಹೋರಾಟ ಮುಂದುವರಿದಿದೆ ಎಂದು ಹೇಳಿದರು. “ಅರಣ್ಯ ನಾಶದ ಪ್ರಮಾಣದಲ್ಲಿ ಕರ್ನಾಟಕ ರಾಜ್ಯವು ಎರಡನೇ ಸ್ಥಾನಕ್ಕೇರಲು ಇಂತಹ ದುರುಪಯೋಗವೇ ಕಾರಣವಾಗಿದೆ.
ಇಂತಹವರನ್ನು ‘ಭೂ ಕಳ್ಳರು’ ಎಂದು ಕರೆಯದೇ ಇನ್ನೇನು ಹೇಳಬೇಕು?” ಎಂದು ಪ್ರಶ್ನಿಸಿದರು. ಕೆಲವು ಮಾಧ್ಯಮಗಳಲ್ಲಿ ಭೀಮಘರ್ಜನೆ ಸಂಘಟನೆಯ ಹೆಸರನ್ನು ಉಲ್ಲೇಖಿಸದೆ, ಬೆಟ್ಟ ಲ್ಯಾಂಡ್ ಹಕ್ಕಿನ ವಿಚಾರದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ರೀತಿಯಲ್ಲಿ ವರದಿಗಳು ಪ್ರಕಟವಾಗಿರುವುದನ್ನು ಅವರು ಖಂಡಿಸಿದರು.
ಈ ಸುದ್ದಿ ಓದಿದ್ದೀರಾ ? ದಾಂಡೇಲಿ | ಬಡ ರೋಗಿಗಳಿಂದ ಹಣ ವಸೂಲಿ ಆರೋಪ: ವೈದ್ಯರಿಗೆ ಶಾಸಕ ಆರ್.ವಿ. ದೇಶಪಾಂಡೆ ಖಡಕ್ ಸೂಚನೆ
ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ. ರೈತ ವಿರೋಧಿಗಳೂ ಅಲ್ಲ. ನಮ್ಮ ಕುಟುಂಬವೇ ಕೃಷಿ ಹಿನ್ನೆಲೆಯದ್ದು. ಕಾನೂನಿನ ಅಡಿಯಲ್ಲಿ ಸರಿಯಾದ ಹೋರಾಟವನ್ನು ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಬೆಟ್ಟ ಲ್ಯಾಂಡ್ ವಿಚಾರವಾಗಿ ಹೆಚ್ಚಿನ ವಿವರಗಳೊಂದಿಗೆ ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸುವುದಾಗಿ ಅರ್ಜುನ್ ಮಿಂಟಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.





