ಶಿರಸಿ ನಗರದ ಪ್ರಮುಖ ರಸ್ತೆಗಳ ದುಸ್ಥಿತಿಯಿಂದ ನರಳುತ್ತಿರುವ ಸಾರ್ವಜನಿಕರ ಪರವಾಗಿ ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಅವರು ಧೂಳಿನ ರಾಶಿ ಹಾಗೂ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅವರು, “ಮಳೆ ಬಂದಾಗ ಹೊಂಡಗಳ ರಾಶಿ, ಬಿಸಿಲು ಬಿದ್ದಾಗ ಧೂಳಿನ ರಾಶಿ” ಇದೇ ಶಿರಸಿಯ ವಾಸ್ತವ ಚಿತ್ರ! ಎಂದು ಸರ್ಕಾರ ಮತ್ತು ವಿರೋಧ ಪಕ್ಷದವರ ವಿರುದ್ಧ ವ್ಯಂಗ್ಯವಾಡಿದರು. ಅವರು ಸ್ಥಳದಲ್ಲೇ ಧೂಳಿನಿಂದ ಆವೃತವಾದ ರಸ್ತೆಯಲ್ಲಿ ನಿಂತು ಮಾತನಾಡಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಬೀಳುತ್ತಿರುವ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮದ್ಯಪಾನ ಮಾಡುವವರ ಲಿವರ್ ಹೋಗುತ್ತೆ ಅಂತಾರೆ, ಆದರೆ ಶಿರಸಿಯ ರಸ್ತೆಯಲ್ಲಿ ಎರಡು ತಿಂಗಳು ಓಡಾಡಿದ್ರೆ ಸಾಕು, ಆರೋಗ್ಯವೇ ಹಾಳಾಗುತ್ತದೆ, ಎಂದು ಟೀಕಿಸಿದ ಅವರು, ಯುವಜನತೆಗೆ ಒಗ್ಗಟ್ಟಾಗಿ ಧ್ವನಿ ಎತ್ತುವಂತೆ ಕರೆ ನೀಡಿದರು. ನಗರದ ಪ್ರಮುಖ ಭಾಗಗಳಲ್ಲಿ ರಸ್ತೆ ಕಾಮಗಾರಿ ವಿಳಂಬ ಆಗುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದು, ಜನರ ನರಳಾಟದ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆ ಆಗುತ್ತಿದ್ದು, ಸ್ಥಳೀಯರ ಮತ್ತು ಯುವಕರ ಬೆಂಬಲ ಪಡೆದುಕೊಂಡಿದೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಪಿಎಂಎವೈ ಮನೆಗಳ ಕಾಮಗಾರಿ ನಿಧಾನ; ಸತ್ಯಾಗ್ರಹ ಆರಂಭಿಸಿದ ಫಲಾನುಭವಿಗಳು
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಪುನೀತ್ ಮರಾಠೇ, ಹರ್ಷ ನಾಯ್ಕ್, ಆದಿತ್ಯ ಹೆಗಡೆ, ಪ್ರಶಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





