ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಮುಖಂಡರ ನಡೆಯನ್ನು ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅರ್ಜುನ್ ಮಿಂಟಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ನೆಮ್ಮದಿ ಕುಟೀರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪೇಂದ್ರ ಪೈ ಮತ್ತು ಅನಂತಮೂರ್ತಿ ಹೆಗಡೆ ಅವರ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಯಲ್ಲಾಪುರ ಹತ್ಯೆ ಪ್ರಕರಣದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಈ ಮುಖಂಡರು, ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆಯ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಮಿಂಟಿ ಪ್ರಶ್ನಿಸಿದರು.
ಅನ್ಯ ಕೋಮಿನವರು ಮಾಡುವ ಅಪರಾಧ ಮಾತ್ರ ಇವರಿಗೆ ಅಪರಾಧವಾಗಿ ಕಾಣಿಸುತ್ತದೆ. ಆದರೆ ಸ್ವಜಾತಿಯವರೇ ಜಾತಿಯ ಕಾರಣಕ್ಕೆ ಮಾಡುವ ಕೊಲೆಗಳು ಇವರಿಗೆ ಕೇವಲ ಸಾಮಾನ್ಯ ಕೊಲೆಗಳಂತೆ ಭಾಸವಾಗುತ್ತವೆ. ಸಮಾಜದಲ್ಲಿ ಇಂದಿಗೂ ನಡೆಯುತ್ತಿರುವ ಅಸ್ಪಶ್ಯತೆ ಆಚರಣೆಗಳ ವಿರುದ್ಧ ಈ ಮುಖಂಡರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ನಡೆದ ಪರೇಶ್ ಮೇಸ್ತ ಪ್ರಕರಣವನ್ನು ಉಲ್ಲೇಖಿಸಿದ ಅವರು, ಅಂದು ನೀಡಲಾದ ಪ್ರಚೋದನೆಯಿಂದಾಗಿ ಅನೇಕ ಬಡ ದಲಿತ ಮತ್ತು ಹಿಂದುಳಿದ ವರ್ಗದ ಯುವಕರ ಜೀವನ ಹಾಳಾಗಿದೆ. ಈಗ ಮತ್ತೊಮ್ಮೆ ಅಂತಹದ್ದೇ ವಾತಾವರಣ ನಿರ್ಮಿಸಲು ಇವರು ಹವಣಿಸುತ್ತಿದ್ದಾರೆ.
ಮತ್ತೊಂದು ‘ಪರೇಶ್ ಮೇಸ್ತ’ ಪ್ರಕರಣ ಸೃಷ್ಟಿಸಲು ಸಾಧ್ಯವಾಗಲಿಲ್ಲ ಎಂಬ ದುಃಖ ಇವರನ್ನು ಕಾಡುತ್ತಿರುವಂತಿದೆ ಎಂದು ಟೀಕಿಸಿದರು. ಇಂತಹ ಪ್ರಚೋದನಕಾರಿ ಹೇಳಿಕೆಗಳಿಗೆ ಶಿರಸಿ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ದಲಿತರು ಮತ್ತು ಹಿಂದುಳಿದ ವರ್ಗದವರು ಮರುಳಾಗಬಾರದು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಕಳಚಿದ ಕಬ್ಬಿನ ಟ್ರೈಲರ್ ಕೊಂಡಿ – ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ!
ಯಾರೋ ನೀಡುವ ಪ್ರಚೋದನೆಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಅವರು ಜನತೆಯಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅಮಿತ್ ಜೋಗಳೇಕರ್, ತಾಲೂಕು ಉಪಾಧ್ಯಕ್ಷ ರಾಜೇಶ್ ಕೆ., ಸಂಘಟನಾ ಕಾರ್ಯದರ್ಶಿ ಹರ್ಷ, ಹಾಗೂ ಅಕ್ಷಯ್ ಮಡಗಾವಂಕರ್, ಪ್ರಶಾಂತ್ ದಾವಣಗೆರೆ, ಗುರುರಾಜ್ ಮಿಂಟಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.





