ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ ಇಂದು ಉದ್ಯಾವರದ ಸಂಪಿಗೆನಗರದಲ್ಲಿರುವ ಸ್ನೇಹಾಲಯ ಚಿಲ್ಡ್ರನ್ ಆರ್ಫನೇಜ್ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಚಿಂತಕರು, ಸಮಾಜ ಸೇವಕರಾದ ಇದ್ರೀಸ್ ಹೂಡೆ, ಸಂತ್ ಫ್ರಾನ್ಸಿಸ್ ಕ್ಷವಿಯರ್ ಚರ್ಚ್, ಉದ್ಯಾವರದ ಧರ್ಮಗುರುಗಳಾದ ರೇ. ಫಾ. ಅನಿಲ್ ಡಿ’ಸೋಜರವರು ಸೌಹಾರ್ದತೆಯ ಮಹತ್ವ ಮತ್ತು ಕ್ರಿಸ್ಮಸ್ ಹಬ್ಬದ ಸಂದೇಶವನ್ನು ಹಂಚಿಕೊಂಡರು. ಸ್ನೇಹಾಲಯದ ಹಿರಿಯ ಧರ್ಮಭಗಿನಿ ಸಿ. ಜೆಸಿಂತಾ ಫೆರ್ನಾಂಡಿಸ್ ಕ್ರಿಸ್ಮಸ್ ಹಬ್ಬದ ಆಧ್ಯಾತ್ಮಿಕ ಸಂದೇಶ ನೀಡಿದರು.

ಸ್ನೇಹಾಲಯದ ಮಕ್ಕಳು ಕ್ರಿಸ್ಮಸ್ ಹಬ್ಬದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ 104 ಕೆಜಿ ಅಕ್ಕಿ ಮತ್ತು ಸಿಹಿ ತಿಂಡಿಗಳನ್ನು ಸಂಸ್ಥೆಗೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್, ಕಾರ್ಯದರ್ಶಿ ಝಫ್ರುಲ್ಲಾ ಟಿ.ಎಂ. ಹೂಡೆ, ಸ್ನೇಹಾಲಯದ ಮುಖ್ಯಸ್ಥೆ ಧರ್ಮಭಗಿನಿ ಸಿ. ಲೀನಾ ಡಿ’ಸೋಜ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





