ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಅರಕೆರೆ ಹೋಬಳಿ, ಮುಂಡುಗದೊರೆ ಗ್ರಾಮದಲ್ಲಿ ವಾಸ ಮಾಡುತ್ತಿರುವ ಸರಿ ಸುಮಾರು ಪರಿಶಿಷ್ಟ ಜನಾಂಗದ 40 ಕುಟುಂಬಗಳಿಗೆ ಸ್ಮಶಾನ, ಸೋಪಾನಕಟ್ಟೆ ಇಲ್ಲದಿರುವುದು ಹಾಗೂ ಜಮೀನಿಗೆ ತೆರಳುತಿದ್ದ ರಸ್ತೆಯನ್ನು ಅತಿಕ್ರಮಣ ಮಾಡಿ ತಂತಿ ಬೇಲಿ ಹಾಕಿಕೊಂಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅವಕಾಶ ವಂಚಿತ ಸಮುದಾಯಗಳ ವೇದಿಕೆಯವರು ತಾಲ್ಲೂಕು ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದು ನ್ಯಾಯ ಸಿಗುವತನಕ ಅನಿರ್ಧಿಷ್ಟಾವಧಿ
ಧರಣಿ ಮುಂದುವರಿಯಲಿದೆ ಎಂದರು.
ದಿನಾಂಕ-21-08-2025 ರಂದು ಪ್ರತಿಭಟನೆ ಮೂಲಕ ಮತ್ತು ಹಲವು ಬಾರಿ ತಹಶೀಲ್ದಾರ್ ರವರಿಗೆ ಮೇಲ್ಕಂಡ ವಿಚಾರವಾಗಿ ಮನವಿ ಮಾಡಿಕೊಂಡರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರು ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ಮೌಖಿಕ ಸೂಚನೆ ನೀಡಿದರು, ಸರ್ವೆ ನಂಬರ್ 351ರಲ್ಲಿ ಅಕ್ರಮವಾಗಿ ಹಾಕಲಾಗಿರುವ ತಂತಿಬೇಲಿ ತೆರವುಗೊಳಿಸಲು ದಿನಾಂಕ-28-10-2025ರಂದು ನಿಗದಿಯಾಗಿದ್ದರೂ ಕೂಡ ತೇರವು ಕಾರ್ಯ ಪೂರ್ಣಮಾಡಿರುವುದಿಲ್ಲ.
ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಮತ್ತು ಸರ್ಕಾರ ಸಾರ್ವಜನಿಕರ ಉಪಯೋಗಕ್ಕಾಗಿ ನಬಾರ್ಡ್ ಸಂಯುಕ್ತಾಶ್ರಯದಲ್ಲಿ ದೊಡ್ಡಪಾಳ್ಯದಿಂದ ಟಿ.ಎಂ.ಹೊಸೂರು (ಮೈಸೂರು, ಬೆಂಗಳೂರು ಮುಖ್ಯ ರಸ್ತೆಗೆ ಸಂಪರ್ಕ) ಕಲ್ಪಿಸಲು ನಿರ್ಮಾಣ ಮಾಡಲಾಗಿದ್ದ ಡಾಂಬರ್ ರಸ್ತೆಯನ್ನು ಕಾನೂನು ಭಾಹಿರವಾಗಿ ಅಗೆದು ಜಮೀನು ಮಾಡಿಕೊಂಡಿರುವ ದೊಡ್ಡಪಾಳ್ಯ ಗ್ರಾಮದ ನಿವಾಸಿ ಹೀರೆಗೌಡ (ನಾಗೇಂದ್ರ) ಬಿನ್ ಲೇಟ್ ಪಟೇಲ್ ರಾಮೇಗೌಡ ಎಂಬ ವ್ಯಕ್ತಿಯ ರಕ್ಷಣೆಗೆ ತಾಲ್ಲೂಕು ಆಡಳಿತ ನಿಂತಿರುವ ಅನುಮಾನ ಕಾಡುತ್ತಿದ್ದು, ಆತಂಕದಿಂದ ತುರ್ತಾಗಿ ನಮ್ಮ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿರುವುದಾಗಿ ಪ್ರತಿಭಟನೆ ನಿರತರು ತಿಳಿಸಿದ್ದಾರೆ.

ಹಕ್ಕೊತ್ತಾಯಗಳು:
- ಮುಂಡುಗದೊರೆ ಗ್ರಾಮದ ಪರಿಶಿಷ್ಟಜಾತಿ ಜನಾಂಗದವರಿಗೆ ಸ್ಮಶಾನ, ಸೋಪಾನಕಟ್ಟೆ ಕಲ್ಪಿಸಿಕೊಡಬೇಕು.
- ಜಾನುವಾರುಗಳ ಒಡಾಟಕ್ಕೆ ಮತ್ತು ಜಮೀನಿಗೆ ಹೋಗುವ ರಸ್ತೆಗೆ ತಂತಿಬೇಲಿ ಹಾಕಿರುವುದನ್ನು ಕೂಡಲೇ ತೆರವುಗೊಳಿಸಬೇಕು.
- ಅತಿಕ್ರಮಣ ಮಾಡಿದವರ ಮೇಲೆ ಪ.ಜಾ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು.
- ದೊಡ್ಡಪಾಳ್ಯದಿಂದ ಟಿ.ಎಂ.ಹೋಸೂರು (ಮೈಸೂರು, ಬೆಂಗಳೂರು ಮುಖ್ಯ ರಸ್ತೆಗೆ ಸಂಪರ್ಕ) ಕಲ್ಪಿಸಲು ನಿರ್ಮಾಣ ಮಾಡಲಾಗಿದ್ದ ಡಾಂಬರ್ ರಸ್ತೆಯನ್ನು ಕಾನೂನು ಭಾಹಿರವಾಗಿ ಅಗೆದು ಜಮೀನು ಮಾಡಿಕೊಂಡಿರುವ ದೊಡ್ಡಪಾಳ್ಯ ಗ್ರಾಮದ ಹೀರೆಗೌಡ (ನಾಗೇಂದ್ರ) ಬಿನ್ ಲೇಟ್ ಪಟೇಲ್ ರಾಮೇಗೌಡ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು.
- ಮುಂಡುಗದೊರೆ ಗ್ರಾಮದಲ್ಲಿ ಸುಮಾರು 450 ಕುಟುಂಬಗಳು ವಾಸಮಾಡುತ್ತಿದ್ದು ಎಲ್ಲಾ ಜನರಿಗೂ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಮತ್ತು ಗ್ರಾಮದಿಂದ ವಿಧ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಹೋಗುವ ವಿಧ್ಯಾರ್ಥಿಗಳು, ದುಡಿಯುವ ಮಹಿಳೆಯರ ಅನುಕೂಲಕ್ಕಾಗಿ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
- ಎರಡುಭಾರಿ ಸರ್ವೆಯವರು ಬಂದು ಅಕ್ಕಪಕ್ಕದ ಭೂಮಿ ಮಾಲಿಕರಿಗೆ ಕಾನೂನು ಪ್ರಕಾರ ನೋಟಿಸ್ ನೀಡದೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡದೆ ಸರ್ವೆ ಮಾಡಿದ ಭೂ ಮಾಪನಕಾರರು ವಿಭಿನ್ನ ಸ್ಥಳಗಳನ್ನು ಗುರುತ್ತಿಸಿರುವುದರಿಂದ ಸಮಸ್ಯೆ ಉಲ್ಬಣಿಸಿದ್ದು ತುರ್ತಾಗಿ ಉನ್ನತ ಮಟ್ಟದ ಭೂ ಮಾಪಕರಿಂದ ಸರ್ವೆ ಮಾಡಿಸಿ ಸಮಸ್ಯೆ ಬಗೆಹರಿಸಬೇಕು.
ಈ ಸುದ್ದಿ ಓದಿದ್ದೀರಾ? ‘ಗ್ರೇಟರ್ ಮೈಸೂರು’ ನಗರದ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆಯಾಗಬಾರದು; ಸಿಎಂ ಸಿದ್ದರಾಮಯ್ಯ
ಪ್ರತಿಭಟನೆಯಲ್ಲಿ ತಾಳಶಾಸನ ಮೋಹನ್, ಎಂ.ವಿ. ರಮೇಶ್, ಎಂ.ಎಸ್. ಶ್ರೀಕಂಠಯ್ಯ, ವರಲಕ್ಷ್ಮಿ, ನವೀನ್ ಕುಮಾರ್, ತೇಜವತಿ, ರಾಜಮ್ಮ, ಸುಂದರಮ್ಮ ಸೇರಿದಂತೆ ಹಲವರು ಇದ್ದರು.





