ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಇತಿಹಾಸದಲ್ಲಿ ತನಗಾಗಿಯೇ ಸಾಕಷ್ಟು ಅಧ್ಯಾಯಗಳನ್ನು ಮೀಸಲಿರಿಸಿಕೊಂಡಿದೆ. ಐತಿಹಾಸಿಕವಾಗಿ ಮಹತ್ವದವಾದ ಇಂತಹ ಸ್ಥಳಗಳ ಪ್ರತಿ ಮೂಲೆಯನ್ನು ಕಾಲಕಾಲಕ್ಕೆ, ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಪುರಾತತ್ವ ಇಲಾಖೆಯ ಮೊದಲ ಕರ್ತವ್ಯ. ಆದರೆ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿ ಹಲವು ನಿಯಮಗಳು ಪಾಲನೆಯಾಗುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಶ್ರೀರಂಗಪಟ್ಟಣದ ಕೋಟೆ ಒಳಗಿನ ಮಿತಿಯಲ್ಲಿ ಯಾವುದೇ ಕಟ್ಟಡ, ಒಳ ಚರಂಡಿ, ನೆಲ ಅಗೆಯುವುದು ಸೇರಿದಂತೆ ಇತ್ಯಾದಿ ಕೆಲಸ ಆರಂಭ ಮಾಡುವ ಮೊದಲು ಇಲಾಖೆ ಅನುಮತಿ ಪಡೆಯಬೇಕು. ಹಾಗೆಯೇ, ಯಾವುದೇ ಕೆಲಸ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು ಎನ್ನುವ ನಿಯಮವಿದೆ. ಆದರೆ, ನಿಯಮಗಳೆಲ್ಲ ಕಾಗದದ ಮೇಲಷ್ಟೇ, ಇಲ್ಲಿ ಯಾವ ಕೆಲಸಕ್ಕೂ ಯಾರೂ ಯಾರ ಅನುಮತಿಯನ್ನು ಪಡೆಯುವುದಿಲ್ಲ. ಅಧಿಕಾರಿಗಳೂ ಕೂಡ ಕಂಡೂ ಕಾಣದಂತಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶ್ರೀರಂಗಪಟ್ಟಣವನ್ನು ಹಲವು ರಾಜ ಮನೆತನಗಳು ಆಳ್ವಿಕೆ ನಡೆಸಿವೆ. ಅದರಲ್ಲಿ ಟಿಪ್ಪು ಆಳ್ವಿಕೆ ಅಗ್ರಗಣ್ಯವಾದದ್ದು. ಪ್ರತಿ ನೆಲದಿಂಚು ತನ್ನ ಗತವೈಭವ ಸಾರುತ್ತದೆ. ಎಲ್ಲೆಡೆ ಒಂದಲ್ಲಾ ಒಂದು ಆಳ್ವಿಕೆಯ ಕುರುಹುಗಳು. ಹೆಜ್ಜೆ ಇಟ್ಟಲ್ಲೆಲ್ಲ ಸ್ಮಾರಕಗಳು. ಬ್ರಿಟಿಷರ ವಿರುದ್ಧದ ಕದನಗಳ ಪಳೆಯುಳಿಕೆ. ಅಂದಿನ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿ ಬ್ರಿಟಿಷ್ ಆಕ್ರಮಣ ತಡೆಗಟ್ಟಲು ಊರಿನ ಸುತ್ತಲೂ ದ್ವೀಪದ ಮಾದರಿಯಲ್ಲಿ ಕೋಟೆ ಕಟ್ಟಲಾಗಿದೆ. ಸ್ಮಾರಕಗಳು, ದೇವಾಲಯ, ಮಸೀದಿ, ಬಂಧಿಖಾನೆ, ಟಿಪ್ಪು ಮಡಿದ ಸ್ಥಳ ಹೀಗೆ ಹಲವಾರು ಇತಿಹಾಸ ಸಾರುವ ನೆಲೆಗಳಿವೆ. ಶ್ರೀರಂಗಪಟ್ಟಣ ಉದ್ದಗಲಕ್ಕೂ ಬ್ರಿಟಿಷರ ಸಮಾಧಿಗಳನ್ನೂ ಕಾಣಬಹುದು. ಇತ್ತೀಚಿಗೆ ನೆಲ ಮಾಳಿಗೆ ಪತ್ತೆಯಾಗಿತ್ತು. ಅದನ್ನ ಈದಿನ.ಕಾಮ್ ವರದಿ ಮಾಡಿದೆ.

ಈ ಕಾರಣದಿಂದಾಗಿ ಶ್ರೀರಂಗಪಟ್ಟಣದಲ್ಲಿರುವ ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮತ್ತು ಕರ್ನಾಟಕ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿಯಂತ್ರಣದಲ್ಲಿದೆ. ಇದರ ಪ್ರಕಾರ ಕೋಟೆಯೊಳಗಿನ ಪ್ರದೇಶದಲ್ಲಿ ಯಾವುದೇ ಉದ್ದೇಶದಿಂದ ನೆಲ ಅಗೆಯುವ ಮುನ್ನ ಪುರಾತತ್ವ ಇಲಾಖೆ ಅನುಮತಿ ಪಡೆಯಬೇಕು. ಅಲ್ಲದೇ, ಇಲಾಖೆಯ ಅಧಿಕಾರಿಗಳ ಸಮ್ಮುಖವೇ ನೆಲ ಅಗೆಯಬೇಕು. ಆದರೆ ಆ ನಿಯಮ ಪಾಲನೆಯಾಗುತ್ತಿಲ್ಲ.
ಈ ಕುರಿತು ವಕೀಲ ಹಾಗೂ ಪ್ರಜ್ಞಾವಂತರ ವೇದಿಕೆಯ ಮುಖಂಡ ಸಿ ಎಸ್ ವೆಂಕಟೇಶ್ ಮಾತನಾಡಿ, “ಶ್ರೀರಂಗಪಟ್ಟಣದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಗೆಯುವ (ಡಿಗ್) ಕೆಲಸವನ್ನು ಮಾಡುವಾಗ ಅಥವಾ ಯಾವುದೇ ಯೋಜನೆಯ ಭಾಗವಾಗಿ ನೆಲ ಅಗೆಯುವ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಅಷ್ಟೇ ಅಲ್ಲ, ಅವರ ಸಮ್ಮುಖದಲ್ಲಿ ಕೆಲಸ ಮಾಡಬೇಕು. ಶ್ರೀರಂಗಪಟ್ಟಣವು ಹಲವಾರು ಮಹಾರಾಜರು ಆಳ್ವಿಕೆ ಮಾಡಿದ ಐತಿಹಾಸಿಕ ಸ್ಥಳ. ಅಗೆದಾಗ ಪ್ರಾಚೀನ ವಸ್ತುಗಳು ಅಥವಾ ಉತ್ಖನನದ ವೇಳೆ ಅವಶೇಷಗಳು ಸಿಗುವ ಸಾಧ್ಯತೆ ಇರುತ್ತದೆ. ಶ್ರೀರಂಗಪಟ್ಟಣದಲ್ಲಿ ರಾಜ್ಯ ಆರ್ಕಿಯಲಾಜಿ ಮತ್ತು ಕೇಂದ್ರ ಆರ್ಕಿಯಲಾಜಿ ಎರಡೂ ಇಲಾಖೆಗಳು ಇವೆ, ಆದರೂ ಈ ನಿರ್ಲಕ್ಷ್ಯದ ಕೆಲಸ ನಡೆಯುತ್ತಿದೆ. ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣ ಸಹ ಮಾಡಬೇಕು. ಇದೆಲ್ಲವನ್ನು ಗಾಳಿಗೆ ತೂರಿದಂತಿದೆ.

ಕೋರ್ಟ್ ರಸ್ತೆ, ಕೆನರಾ ಬ್ಯಾಂಕ್ ಪಕ್ಕದಲ್ಲಿ ಎಲ್ಐಸಿ ಕಟ್ಟಡ ನಿರ್ಮಾಣಗುತ್ತಿದೆ. ಅದಕ್ಕಾಗಿಯೇ ನೆಲ ಅಗೆಯಲಾಗುತ್ತಿದ್ದು, ಪುರಾತನ ಕಾಲದ ಕಲ್ಲು, ಗುಂಡುಗಳು ಮತ್ತು ಇತರೆ ವಸ್ತುಗಳ ರಾಶಿ ಬಿದ್ದಿವೆ (ವಿಡಿಯೋ ಚಿತ್ರೀಕರಿಸಲಾಗಿದೆ). ಆದರೆ, ಈ ಸ್ಥಳದಲ್ಲಿ ಯಾವುದೇ ಆರ್ಕಿಯಲಾಜಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವಂತೆ ಕಂಡುಬಂದಿರುವುದಿಲ್ಲ” ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಸರ್ಕಾರದಿಂದ ಸಂಬಳ ಪಡೆದರೂ ಕೆಲಸ ಮಾಡುತ್ತಿಲ್ಲ, ಕರ್ತವ್ಯಲೋಪ ಎಸಗುತ್ತಿದ್ದಾರೆ. ಅವರು ಮನೆಯಲ್ಲಿ ಮಲಗಿದ್ದಾರಾ? ಅಥವಾ ಶ್ರೀರಂಗಪಟ್ಟಣದಲ್ಲಿ ಇಲಾಖೆಯೇ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣದಿಂದ ಎಚ್ಚರಿಕೆ ನೀಡುತ್ತಿದ್ದು, ಅಧಿಕಾರಿಗಳು ತಕ್ಷಣ ತಮ್ಮ ಕರ್ತವ್ಯ ಪ್ರಜ್ಞೆ ಅರಿತು ಕೆಲಸ ಮಾಡಬೇಕು. ಇಲ್ಲದಿದ್ದರೆ, ಮುಂದಿನ ಪೀಳಿಗೆಗೆ ಕೋಟೆ-ಕೊತ್ತಲಗಳನ್ನು ಸಂರಕ್ಷಿಸಿಡುವುದು, ಇತಿಹಾಸದ ಕುರುಹುಗಳನ್ನು ಉಳಿಸಿಕೊಡುವುದು ಕಷ್ಟಕರ. ಉಳಿಸಿ, ಸಂರಕ್ಷಸಿ ಕೊಡುವ ಕೆಲಸವನ್ನು ಪುರಾತತ್ವ ಇಲಾಖೆ ನಿಭಾಯಿಸಬೇಕು ಎಂದು ಆಗ್ರಹಿಸಿದರು.

ಭಾರತದಲ್ಲಿ ರಕ್ಷಿತ ಸ್ಮಾರಕಗಳ ಸುತ್ತಮುತ್ತಲಿನ ನಿರ್ಮಾಣ ಕಾರ್ಯಗಳಿಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್ಐ) ‘ದಿ ಏನ್ಷಿಯಂಟ್ ಮಾನ್ಯುಮೆಂಟ್ಸ್ ಆ್ಯಂಡ್ ಆರ್ಕಿಯಾಲಾಜಿಕಲ್ ಸೈಟ್ಸ್ ಆ್ಯಂಡ್ ರಿಮೈನ್ಸ್ (ಎಎಂಎಎಸ್ಆರ್) ಆಕ್ಟ್, 1958’ ಮತ್ತು ಅದರ ತಿದ್ದುಪಡಿಗಳ ಅಡಿಯಲ್ಲಿ ನಿಯಮಗಳನ್ನು ರೂಪಿಸಿದೆ. ಶ್ರೀರಂಗಪಟ್ಟಣದ ರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಉದ್ದೇಶಿತ ಕಾರ್ಯಕ್ಕೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ (National Monuments Authority – NMA) ಅನುಮತಿ ಕಡ್ಡಾಯ. ಇದನ್ನ ಇಲಾಖೆ ಅಧಿಕಾರಿಗಳು, ಸ್ಥಳೀಯರು ಪಾಲನೆ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಭೂಮ್ತಾಯಿ | ಹವಾಮಾನ ಪರ ಇನ್ನಷ್ಟು ಜೋರಾಗಿ ಧ್ವನಿ ಎತ್ತಬೇಕಿದೆ ಕ್ರೀಡಾಪಟುಗಳು
ಸದ್ಯದ ಸ್ಥಿತಿಯಲ್ಲಿ ಎಲ್ಐಸಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸಿಗುತ್ತಿರುವ ಪುರಾತನ ಕಲ್ಲು ಗುಂಡುಗಳು ಹಾಗೂ ಇತರೆ ವಸ್ತುಗಳನ್ನು ಅದೇ ಅಡಿ (ಪಾಯ)ಯಲ್ಲಿ ಮಣ್ಣು ಹಾಕಿ ಮುಚ್ಚುವುದು, ಸ್ಥಳೀಯರು ತೆಗೆದುಕೊಂಡು ಹೋಗಿರುವುದು ಹಾಗೆಯೇ ಅಲ್ಲಲ್ಲಿಯೇ ಬಿದ್ದಿರುವುದು ಕಂಡುಬರುತ್ತಿದೆ. ಇದನ್ನೆಲ್ಲಾ ಗಮನಿಸಿ, ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಹಾಗೂ ನಿಯಮಾನುಸಾರ ಸಂಶೋಧನೆಗೆ ಒಳಪಡಿಸಬೇಕು ಎಂದು ಹೇಳಿದರು.

ಶ್ರೀರಂಗಪಟ್ಟಣದ ಪ್ರತಿಯೊಂದು ಕಲ್ಲು, ಕೋಟೆ, ದೇವಾಲಯ-ಮಸೀದಿ, ಸಮಾಧಿ ಎಲ್ಲವೂ ನೂರಾರು ವರ್ಷಗಳ ಇತಿಹಾಸದ ಜೀವಂತ ಸಾಕ್ಷಿಗಳು. ಇವುಗಳನ್ನು ಉಳಿಸಿಕೊಳ್ಳುವುದು ಇಲಾಖೆಯ ಕರ್ತವ್ಯದ ಜೊತೆಗೆ ಪೀಳಿಗೆಯ ಜವಾಬ್ದಾರಿಯೂ ಹೌದು. ಆದರೆ ಇಂದು ಕಟ್ಟುನಿಟ್ಟಿನ ಕಾನೂನುಗಳಿದ್ದರೂ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ಮತ್ತು ಸ್ಥಳೀಯ ಆಡಳಿತದ ಮೌನವು ಇತಿಹಾಸದ ನೆಲವನ್ನು ನಗಣ್ಯಮಾಡಿದಂತಿದೆ. ಇಲಾಖೆ ಸಂರಕ್ಷಿತ ಪ್ರದೇಶದಲ್ಲಿಯೂ ಈ ರೀತಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಕಾಮಗಾರಿಗಳಿಗೆ ಕಡಿವಾಣ ಬೀಳಬೇಕಿದೆ. ಪುರಾತನ ವಸ್ತುಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ನಿಲುವು ಇಲಾಖೆಯ ಜವಾಬ್ದಾರಿಯನ್ನೇ ಪ್ರಶ್ನಿಸುವಂತಿದೆ.
ಸದ್ಯದ ಪರಿಸ್ಥಿತಿ ಅಧಿಕಾರಿಗಳಿಗೆ ಎಚ್ಚರಿಯ ಗಂಟೆಯಾಗಬೇಕಿದೆ. ಇಂದೇ ಕ್ರಮ ಕೈಗೊಳ್ಳದಿದ್ದರೆ, ನಾಳೆಯ ಪೀಳಿಗೆಗೆ ನೆಲದಡಿ ಹೂತುಹೋಗುತ್ತಿರುವ ಇತಿಹಾಸವನ್ನು ಪುನಃ ಓದುವ, ನೋಡಿವ ಅವಕಾಶವೂ ಸಿಗದೆ ಹೋಗಬಹುದು. ಕರ್ನಾಟಕದ ಸಂಸ್ಕೃತಿ, ವೈಭವ, ಇತಿಹಾಸದ ನೆಲೆಗಳನ್ನು ಉಳಿಸುವ ಹೋರಾಟ ಸಮೂಹ ಜವಾಬ್ದಾರಿ. ಇತಿಹಾಸವನ್ನು ಕಾಪಾಡಬೇಕು ಎಂದರೆ, ನಿಯಮ ಪಾಲನೆಯಿಂದ ಹಿಡಿದು ಜವಾಬ್ದಾರಿ ನಿಭಾಯಿಸುವ ತನಕ ಎಲ್ಲಾ ವಿಭಾಗಗಳೂ ಸಂವೇದನಾಶೀಲವಾಗಬೇಕಿದೆ.





