ಐತಿಹಾಸಿಕ ನಗರಿ ಶ್ರೀರಂಗಪಟ್ಟಣದ ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಶ್ರೀರಂಗಪಟ್ಟಣದ ರೋಟರಿ ಕ್ಲಬ್, ಬೆಂಗಳೂರಿನ ಭುವನೇಶ್ವರಿ ಕ್ಲಬ್ ಹಾಗೂ ಮೈಸೂರಿನ ಅಂಬಾರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ‘ಶ್ರೀರಂಗಪಟ್ಟಣ ಪಾರಂಪರಿಕ ನಡೆ’ (Heritage Walk) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಲಬ್ಗಳ ಸದಸ್ಯರು ಶ್ರೀರಂಗಪಟ್ಟಣದ ಪ್ರಮುಖ ಐತಿಹಾಸಿಕ ತಾಣಗಳಾದ
ವಾಟರ್ ಗೇಟ್, ಟಿಪ್ಪು ಸುಲ್ತಾನ್ ಮಡಿದ ಸ್ಥಳ,ಥಾಮಸ್ ಇನಮನ್ ಬಂದಿಖಾನೆ, ಮದ್ದಿನ ಮನೆಗಳು, ಜಾಮಿಯಾ ಮಸೀದಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ, ಈ ತಾಣಗಳ ಐತಿಹಾಸಿಕ ಮಹತ್ವ ಮತ್ತು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ಶ್ರೀರಂಗಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ರಾಘವೇಂದ್ರ ಮಾತನಾಡಿ, “ಶ್ರೀರಂಗಪಟ್ಟಣದ ಅನೇಕ ಸ್ಮಾರಕಗಳು ಇಂದು ಅಳಿವಿನ ಅಂಚಿನಲ್ಲಿವೆ. ನಮ್ಮ ಇತಿಹಾಸದ ಕುರುಹುಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು ಈ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
ಬೆಂಗಳೂರಿನ ಭುವನೇಶ್ವರಿ ಕ್ಲಬ್ ಅಧ್ಯಕ್ಷ ಹರೀಶ್ ಮಾತನಾಡಿ, “ಪಟ್ಟಣದಲ್ಲಿ ಒಟ್ಟು ಒಂಬತ್ತು ಮದ್ದಿನ ಮನೆಗಳಿದ್ದು, ಅವುಗಳ ಸುತ್ತಮುತ್ತ ಅಂಬಿನ ಬಳ್ಳಿಗಳು ಬೆಳೆದು ಸ್ಮಾರಕಗಳ ಅಂದವನ್ನು ಕೆಡಿಸುತ್ತಿವೆ. ಪುರಾತತ್ವ ಇಲಾಖೆಯು (State Archaeology) ಕೂಡಲೇ ಈ ಮದ್ದಿನ ಮನೆಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮಂಡ್ಯ | ಡಿ.5ರಿಂದ ಮೂರು ದಿನ ನಡೆಯಲಿರುವ ಕೃಷಿಮೇಳವನ್ನು ಸದ್ಬಳಕೆ ಮಾಡಿಕೊಳ್ಳಿ: ಕೆ ಎಂ ಹರಿಣಿಕುಮಾರ್
ಈ ಪಾರಂಪರಿಕ ನಡೆಯಲ್ಲಿ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾದ ಮಂಜು ರಾಮ್ ಪುಟ್ಟೆಗೌಡ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ. ಜಯಶಂಕರ್, ಶ್ರೀರಂಗಪಟ್ಟಣ ರೋಟರಿ ಕ್ಲಬ್ ಕಾರ್ಯದರ್ಶಿ ಎನ್. ನಾಗೇಂದ್ರ, ಸಹ ಕಾರ್ಯದರ್ಶಿ ರಾಜೇಶ್, ಖಜಾಂಚಿ ಎನ್. ಸರಸ್ವತಿ, ಸದಸ್ಯರಾದ ಗಾಯತ್ರಿ ಹಾಗೂ ಶಾರದ ವಿಲಾಸ್ ಕಾನೂನು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಸವಿತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.





