ಮಂಡ್ಯ ಜಿಲ್ಲೆಯ ಶೀರಂಗಪಟ್ಟಣದ ಜಾಮಿಯಾ ಮಸೀದಿಯನ್ನು ವಿವಾದ ತಾಣವಾಗಿಸಲು ಕಳೆದ ಎರಡು/ಮೂರು ವರ್ಷಗಳಿಂದ ಸಂಘಪರಿವಾರ ಯತ್ನಿಸುತ್ತಿದೆ. ನಿರಂತರವಾಗಿ ಮಸೀದಿ ವಿಚಾರದಲ್ಲಿ ಗದ್ದಲಗಳನ್ನು ಸೃಷ್ಟಿಸುತ್ತಿದೆ. ಬುಧವಾರ, ಹನುಮ ಮಾಲೆ ಧರಿಸಿದ್ದ ಹಿಂದುತ್ವವಾದಿ ಕೋಮು ಕಾರ್ಯಕರ್ತರು ಮಸೀದಿಗೆ ನುಗ್ಗಲು ಯತ್ನಿಸಿದ್ದು, ಅವರನ್ನು ಪೊಲೀಸರು ತಡೆದಿದ್ದಾರೆ.
ಹನುಮ ಜಯಂತಿ ಆಚರಣೆಗಾಗಿ ಸಂಘಪರಿವಾರವು ಶ್ರೀರಂಗಪಟ್ಟಣದಲ್ಲಿ ಬುಧವಾರ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯನ್ನು ಆಯೋಜಿಸಿತ್ತು. ಜಾಮಿಯಾ ಮಸೀದಿಯನ್ನು ಗುರಿಯಾಗಿಸಿಕೊಂಡೇ ಸಂಘಪರಿವಾರವು ಸಂಕೀರ್ತನಾ ಯಾತ್ರೆಯನ್ನು ನಡೆಸುತ್ತಾ ಬಂದಿದೆ. ಕೇಸರಿ ಮಾಲಾಧಾರಿಗಳು ಗದ್ದಲ ಸೃಷ್ಟಿಸುತ್ತಾರೆ ಎಂಬುದನ್ನು ಅಂದಾಜಿಸಿದ್ದ ಜಿಲ್ಲಾಡಳಿತವು ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿತ್ತು. ಆದರೂ, ಕೋಮುವಾದಿ ಕಾರ್ಯಕರ್ತರು ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಪರಿಣಾಮ, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಮಸೀದಿಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ, ಸಂಘಪರಿವಾರದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿಕ ಚಕಮಕಿ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರು ಭದ್ರತೆಯ ನೇತೃತ್ವವಹಿಸಿದ್ದರು. ಸುಮಾರು 1,800 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿತ್ತು.




