ಮೈಸೂರು ಜಿಲ್ಲೆ, ನಂಜನಗೂಡಿನಲ್ಲಿ ಕರ್ನಾಟಕ ಹಾಗೂ ಮೈಸೂರು ಜಿಲ್ಲಾ ಕುಸ್ತಿ ಸಂಘದ ವತಿಯಿಂದ ರಾಜ್ಯ ಮಟ್ಟದ ಹೊನಲು-ಬೆಳಕು ಕುಸ್ತಿ ಪಂದ್ಯಾವಳಿಯನ್ನು ಫೆಬ್ರವರಿ 6ರಿಂದ 8ರವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುಸ್ತಿ ಸಂಘದ ಸಂಘಟನಾ ಅಧ್ಯಕ್ಷ ಪೈ. ಪ್ರಸನ್ನಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕುಸ್ತಿ ಪಂದ್ಯಾವಳಿಯು 28 ವರ್ಷಗಳ ನಂತರ ನಂಜನಗೂಡಿನಲ್ಲಿ ನಡೆಯುತ್ತಿದ್ದು, ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕುಸ್ತಿಯ ಜಾತ್ರೆ ಎಂದು ಹೇಳಬಹುದು. ಈ ಪಂದ್ಯಾವಳಿಯಲ್ಲಿ 15 ಹಾಗೂ 17 ವರ್ಷದೊಳಗಿನ ಕ್ರೀಡಾಪಟುಗಳು, ಹಿರಿಯರ ವರ್ಗದ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ.
ಪುರುಷರು ಹಾಗೂ ಮಹಿಳೆಯರ ಈ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಯು-15 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್ ಶಿಪ್ ಕರ್ನಾಟಕ ರಾಜ್ಯ ಕುಸ್ತಿ ತಂಡ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಾದ ಕರ್ನಾಟಕ ಕಿಶೋರ, ಕರ್ನಾಟಕ ಕುಮಾರ, ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ ಪ್ರಶಸ್ತಿಗಳು ಹಾಗೂ ಮಹಿಳಾ ವಿಭಾಗದಲ್ಲಿ ಕರ್ನಾಟಕ ಕಿಶೋರಿ ಹಾಗೂ ಕರ್ನಾಟಕ ಕುಮಾರಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಕುಸ್ತಿ ಪಟುಗಳಿಗೆ ರಾಜ್ಯ ಎಸ್ಸಿಪಿ ಟಿಸಿಎಸ್ಪಿ ನಿಧಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವೇತನ ಸಿಗಲು ಸಹಾಯವಾಗಲಿದೆ. ಅಲ್ಲದೇ, ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದರ ಜೊತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಕಡೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ. ಇಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ನೇರವಾಗಿ ಆಯ್ಕೆಯಾಗಲಿದ್ದಾರೆ. ವಿಜೇತರಾದವರಿಗೆ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದರು.
ಜ್ಞಾನ ಪ್ರಕಾಶ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸುನೀಲ್ ಬೋಸ್, ಶಾಸಕರಾದ ದರ್ಶನ್ ದ್ರುವನಾರಾಯಣ ಹಾಗೂ ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ, ಫೆ.8ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಆಹಾರ ಭದ್ರತಾ, ಸುರಕ್ಷತಾ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿ: ಡಾ ಎಚ್ ಕೃಷ್ಣ
ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜಕ ಮಹದೇವಮೂರ್ತಿ, ರಾಂಬೋ ಕಿರಣ್, ಗಿರೀಶ್ ತೊರೆಮಾವು, ಡಾ. ವಿನೋದ್ ಕುಮಾರ್, ಶ್ರೀಕಂಠ ಪ್ರಸಾದ್ ಇದ್ದರು.





