ಎಐಯುಟಿಯುಸಿ (AIUTUC) ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ರಾಜ್ಯ ಸಮಿತಿಯು, ಮುಂಬರುವ ಬಜೆಟ್ ಹಿನ್ನೆಲೆಯಲ್ಲಿ ಬಿಸಿಯೂಟ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ಪ್ರಮುಖ ಇಲಾಖಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿದ ನಿಯೋಗವು ಸಮಾಲೋಚನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬಿಸಿಯೂಟ ಸಿಬ್ಬಂದಿಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂಬ ಆಶಾದಾಯಕ ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ವಿಕಾಸ್ ಸುರಳ್ಕರ್ ಅವರಿಗೆ ಮನವಿ ಸಲ್ಲಿಸಿದಾಗ, ಕಾರ್ಮಿಕರ ನ್ಯಾಯಯುತ ಹಕ್ಕೊತ್ತಾಯಗಳ ಬಗ್ಗೆ ಅವರು ಧನಾತ್ಮಕವಾಗಿ ಸ್ಪಂದಿಸಿದರು. ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ನಿರ್ದೇಶಕರನ್ನೂ ಭೇಟಿ ಮಾಡಿ, ಕಾರ್ಮಿಕರ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು.
ರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಅಡುಗೆಯವರಿಗೆ ಕನಿಷ್ಠ ವೇತನವಿದ್ದು, ಅದರಂತೆ ಬಿಸಿಯೂಟ ಕಾರ್ಮಿಕರಿಗೂ ಕನಿಷ್ಠ ವೇತನ ಜಾರಿ ಮಾಡಿ ಮತ್ತು ರಾಜ್ಯದಲ್ಲಿ ಈಗಾಗಲೇ ಭರವಸೆ ನೀಡಿರುವಂತೆ ಈ ಬಾರಿಯ ಬಜೆಟ್ನಲ್ಲಿ ಗೌರವಧನ ಹೆಚ್ಚಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಈ ಕೆಳಗಿನಂತೆ ಮನವಿ ಸಲ್ಲಿಸಲಾಯಿತು.

ರಾಜ್ಯದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಪೌಷ್ಟಿಕತೆಯನ್ನು ನೀಗಿಸಲು ಹಾಗೂ ಮಕ್ಕಳು ವಿದ್ಯಾಭ್ಯಾಸವನ್ನು ಹೊಂದಲು ಅವಕಾಶ ಮಾಡಿಕೊಟ್ಟಿರುವ ಅಕ್ಷರ ದಾಸೋಹ ಯೋಜನೆಯು 2002-2003ರಲ್ಲಿ ರಾಜ್ಯದ ಈಶಾನ್ಯ ವಲಯದ 7 ಜಿಲ್ಲೆಗಳಲ್ಲಿ ಆರಂಭವಾಯಿತು. 2005ರಲ್ಲಿ ಕ್ರಮೇಣವಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1 ರಿಂದ 7 ರವರೆಗೆ ಇರುವ ಪ್ರಾಥಮಿಕ ಶಾಲೆಗಳಿಗೆ ಹಾಗೂ ನಂತರದ ದಿನಗಳಲ್ಲಿ 2008ರಲ್ಲಿ 9 ರಿಂದ 10 ರ ವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಸ್ತರಿಸಲಾಯಿತು. 2013ರಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು.
ಇದೀಗ ವಾರದ ಆರು ದಿನವೂ ಬಾಳೆಹಣ್ಣು ಅಥವಾ ಮೊಟ್ಟೆ ನೀಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳ ಉದ್ದೇಶ ಶಾಲಾ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳವಾಗಿರುತ್ತದೆ. ಶಾಲೆಯನ್ನು ಮಧ್ಯೆ ಮಧ್ಯೆ ತೊರೆಯುವುದನ್ನು ತಡೆಗಟ್ಟಲು ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸಾಮಾಜಿಕ ಸಮಾನತೆ ಮತ್ತು ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ತರಲು ಈ ಯೋಜನೆಯ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಬೇಸಿಗೆ ರಜೆಯಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯನ್ನು ನೀಡಲಾಗುತ್ತದೆ. ಇದರಿಂದ ಅಪೌಷ್ಟಿಕತೆಯು ನಿವಾರಣೆಯಾಗಿ ಆರೋಗ್ಯವು ಅಭಿವೃದ್ಧಿಗೊಳ್ಳುವುದು ಹಾಗೂ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ತುಂಬಾ ಸಹಕಾರಿಯಾಗುವುದು.
ಇವುಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಹತ್ವಾಕಾಂಕ್ಷಿತ ಹಾಗೂ ದೂರ ದೃಷ್ಟಿಯುಳ್ಳ ಯೋಜನೆಯಾಗಿದೆ. ಆದರೆ, ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲಿಸುತ್ತಿರುವ ಜಾಗತೀಕರಣ ಮತ್ತು ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳಿಂದಾಗಿ ಇಂತಹ ಮಹತ್ವಾಕಾಂಕ್ಷಿತ ಯೋಜನೆಯನ್ನು ದೊಡ್ಡ ದೊಡ್ಡ ಸರ್ಕಾರೇತರ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಸೇವೆಯ ಹೆಸರಿನಲ್ಲಿ ನೀಡುವ ಮೂಲಕ ಖಾಸಗೀಕರಣ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದ ಮಹಾ ಮಾತೆಯರೆಂದೆನಿಸಿದ ಬಿಸಿಯೂಟ ಕಾರ್ಯಕರ್ತೆಯರ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ.

ಇಂತಹ ಯಾವುದೇ ಯೋಜನೆಗಳು ಫಲಕಾರಿಯಾಗಬೇಕೆಂದರೆ ಯೋಜನೆಯ ಕೆಳಗಡೆ ಕೆಲಸ ಮಾಡುವ ಕಾರ್ಮಿಕರ ಬದುಕು ಹಸನಾಗಿರಬೇಕು. ಆದರೆ ಬಿಸಿಯೂಟ ಯೋಜನೆ ಕೆಳಗಡೆ ಕೆಲಸ ಮಾಡುವ ಅಡುಗೆ ಕಾರ್ಮಿಕರ ಗೌರವಧನ ಅತ್ಯಂತ ಕಡಿಮೆಯಾಗಿದೆ. ಮಾಸಿಕ ₹4600-4700 ರೂ ಪಡೆದು ಜೀವನ ನಡೆಸುವುದೇ ದುಸ್ತರವಾಗಿದೆ. ಇದೀಗ ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯು ನಡೆಯುತ್ತಿದೆ ಎನ್ನುವುದರಿಂದ ಬಿಸಿಯೂಟ ಕಾರ್ಮಿಕರು ಕೆಲಸದ ಅಭದ್ರತೆಯಲ್ಲಿದ್ದು ತಮ್ಮ ಭವಿಷ್ಯದ ಕುರಿತು ಆತಂಕಿತರಾಗಿದ್ದಾರೆ. ಈ ಎಲ್ಲಾ ಆತಂಕಗಳನ್ನು ಪರಿಹರಿಸಿ ಅವರಿಗೆ ಕೆಲಸದ ಭದ್ರತೆಯನ್ನು ನೀಡಬೇಕು ಹಾಗೂ ಈ ಬಾರಿಯ ಬಜೆಟ್ ನಲ್ಲಿ ಅವರ ಗೌರವಧನವನ್ನು ಹೆಚ್ಚಿಸಬೇಕು.
ಈ ನಿಟ್ಟಿನಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆಯಾದ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ (ರಿ) ವು ರಾಜ್ಯ ವ್ಯಾಪಿಯಾಗಿ ಪ್ರತಿಭಟನೆಗಳನ್ನು ಸಂಘಟಿಸಿ, ಈ ಕೆಳಗಿನ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಪ್ರಸ್ತುತ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಮೊದಲ ಆಧ್ಯತೆ ನೀಡಿ: ಬಡಗಲಪುರ ನಾಗೇಂದ್ರ
ನಿಯೋಗದ ನೇತೃತ್ವವನ್ನು ಸಂಘದ ರಾಜ್ಯ ಕಾರ್ಯದರ್ಶಿ ಪಿ.ಎಸ್. ಸಂಧ್ಯಾ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷರುಗಳಾದ ಶಶಿಕಲಾ ಮ್ಯಾಗೇರಿ, ರಾಜೇಶ್ವರಿ ಪದಾಧಿಕಾರಿಗಳಾದ ಗಂಗೂಬಾಯಿ ಉಳ್ಳಾಗಡ್ಡಿ, ಬಿಸ್ಮಿಲ್ಲಾ, ಜ್ಯೋತಿ ಮಂಕಣಿ, ಬೋರಮ್ಮ ಕೋಲ್ಕರ್, ಭಾರತಿ ಛಲವಾದಿ ಸೇರಿದಂತೆ ಹಲವು ಮುಖಂಡರು ಇದ್ದರು.
ಹಕ್ಕೊತ್ತಾಯಗಳು :
- ರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಅಡುಗೆಯವರಿಗೆ ಕನಿಷ್ಠ ವೇತನವಿದ್ದು ಅದರಂತೆ ಬಿಸಿ ಊಟ ಕಾರ್ಮಿಕರಿಗೂ ಕನಿಷ್ಠ ವೇತನ ಜಾರಿ ಮಾಡಿ.
- ಈ ಬಾರಿಯ ಬಜೆಟ್ ನಲ್ಲಿ ಗೌರವ ಧನ ಹೆಚ್ಚಿಸಿ.
- ಮಾಸಿಕ ವೇತನವನ್ನು ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿ ಮಾಡಬೇಕು, ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು.
- ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ ₹5 ಲಕ್ಷ ಇಡಿಗಂಟು ನೀಡಬೇಕು.
- ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು.
- ಹತ್ತಿ ಬಟ್ಟೆಯ ಸಮವಸ್ತ್ರ ಹಾಗೂ ಕೈಗವಸು, ತಲೆಯ ಸ್ಕಾರ್ಫ್, ಏಪ್ರಾನ್ಗಳನ್ನು ಖಾತ್ರಿಪಡಿಸಿ.
- ಬಿಸಿಯೂಟ ಕಾರ್ಮಿಕರಿಗೆ 10 ತಿಂಗಳ ಬದಲಾಗಿ 12 ತಿಂಗಳು ಗೌರವಧನ ನೀಡಬೇಕು.
- ಬಿಸಿಯೂಟ ಕಾರ್ಮಿಕರನ್ನು ಖಾಯಂಗೊಳಿಸಿ ಹಾಗೂ ಸೇವಾ ಭದ್ರತೆ ಒದಗಿಸಿ.
- ಬಿಸಿಯೂಟ ಕಾರ್ಮಿಕರಿಗೆ ಮೊಟ್ಟೆ ಕುದಿಸಿ, ಸಿಪ್ಪೆ ಸುಲಿದ ಹಣವನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು .





