ಮೈಸೂರಿನ ಜಲದರ್ಶಿನಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಲವಾಲದಲ್ಲಿ ಇದೇ ಡಿಸೆಂಬರ್. 23ರಂದು ರೈತ ಕಣ್ಮಣಿ ಕೆ ಎಸ್ ಪುಟ್ಟಣ್ಣಯ್ಯ ಅವರ ಜನ್ಮದಿನದಂದು ಪ್ರತಿಮೆ ಅನಾವರಣ ಹಾಗೂ ಜಿಲ್ಲಾ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಬೆಳಿಗ್ಗೆ 11-00 ಗಂಟೆಗೆ ಪ್ರತಿಮೆ ಅನಾವರಣ ಮಾಡಲಿದ್ದು, ನಂತರ ಅಪರಾಹ್ನ 12-00 ಗಂಟೆಗೆ ಇಲವಾಲದ ಸಂತೆ ಮೈದಾನದಲ್ಲಿ ಬೃಹತ್ ಜಿಲ್ಲಾ ರೈತ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಘದ ರಾಜ್ಯ ಪದಾಧಿಕಾರಿಗಳು, ಮಹಿಳಾ ಮತ್ತು ಯುವ ಘಟಕದ ಪದಾಧಿಕಾರಿಗಳು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಘದ ಪದಾಧಿಕಾರಿಗಳು ಕೂಡ ಬಾಗವಹಿಸಲಿದ್ದು, ಸುಮಾರು 5 ಸಾವಿರಕ್ಕಿಂತಲೂ ಹೆಚ್ಚು ರೈತರು ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
“ಕೇಂದ್ರ ಸರ್ಕಾರದ ಕೃಷಿ ವಿರೋದಿ ನೀತಿಗಳು ಅತ್ಯಂತ ಅಪಾಯಕಾರಿಯಾಗಿದ್ದು, 5 ವರ್ಷಗಳ ಹಿಂದೆ ನಡೆದ ಐತಿಹಾಸಿಕ ರೈತಾಂದೋಲನದ ಹಿನ್ನಲೆಯಲ್ಲಿ ರೈತ ವಿರೋದಿ 3 ಕೃಷಿ ಮಸೂದೆಯನ್ನು ವಾಪಸ್ಸು ಪಡೆದ ಕೇಂದ್ರ ಸರ್ಕಾರ ಮಾತಿನಂತೆ ನಡೆದುಕೊಳ್ಳದೇ, ಅದಕ್ಕಿಂತಲೂ ಅಪಾಯಕಾರಿಯಾದ ‘ಕೃಷಿ ಮಾರುಕಟ್ಟೆ ಚೌಕಟ್ಟು ನೀತಿ- 2025, ಬೀಜ ಕಾಯ್ದೆ-2025, ವಿದ್ಯುಚ್ಚಕ್ತಿ ಕಾಯ್ದೆ-2025’ ಗಳನ್ನು ರೂಪಿಸಿದ್ದು, ಅವುಗಳನ್ನು ಜಾರಿಗೆ ತರಲು ಉತ್ಸಾಹಕವಾಗಿದೆ”.
ಈ ನೀತಿಗಳು ಜಾರಿಗೆ ಬಂದಲ್ಲಿ ಭಾರತದ ರೈತ ಸಂಸ್ಕೃತಿಗೆ ದೊಡ್ಡ ಹೊಡೆತ ಬೀಳಲಿದ್ದು, ಸಂಪೂರ್ಣ ಕೃಷಿ ಕ್ಷೇತ್ರ ಕಾರ್ಪೋರೇಟ್ ಕಂಪನಿಗಳ ವಶವಾಗುತ್ತದೆ. ರೈತ ಸಮುದಾಯ ನೆಲೆ ಇಲ್ಲದೆ ಬೀದಿ ಪಾಲಾಗಬೇಕಾಗುತ್ತದೆ. ಈ ನೀತಿಗಳನ್ನು ವಿರೋದಿಸಿರುವ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಇವುಗಳನ್ನು ಜಾರಿಗೆ ತರುವುದಿಲ್ಲ ಎಂದು ತೀರ್ಮಾನ ಮಾಡಬೇಕು. ಇಲ್ಲದಿದ್ದಲ್ಲಿ ಬಿ.ಜೆ.ಪಿಗೂ ಕಾಂಗ್ರೇಸಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ರೈತರು ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂಡೋ-ಅಮೇರಿಕ ಒಪ್ಪಂದಕ್ಕೆ ಸಹಿ ಹಾಕಬಾರದು; ಅಮೇರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಬೊಬ್ಬೆ ಹಾಕುವ ನರೇಂದ್ರ ಮೋದಿಯವರು ಅಮೆರಿಕಾದ ಒತ್ತಡಕ್ಕೆ ಮಣಿದು, ಮಂಡಿಯೂರಿ ಇಂಡೋ-ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದು ಅತ್ಯಂತ ಖಂಡನೀಯ. ಅಮೆರಿಕದ ಹತ್ತಿ ಮತ್ತು ಹತ್ತಿ ಉಪ ಉತ್ಪನ್ನಗಳು, ಹಾಲಿನ ಉಪ ಉತ್ಪನ್ನಗಳು ಹಾಗೂ ಮೀನಿನ ಉಪ ಉತ್ಪನ್ನಗಳು ಲಂಗು-ಲಗಾಮಿಲ್ಲದೇ ಇಂಡಿಯಾದ ಮಾರುಕಟ್ಟೆಯನ್ನು ಆವರಿಸಿಕೊಳ್ಳಲಿವೆ. ಇದರಿಂದ, ದೇಶದ ರೈತರು ಕಂಗಾಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೇಂದ್ರ ಸರ್ಕಾರ ಈ ನೀತಿಗಳ ವಿರುದ್ಧ ಸಂಘಟಿತ ಐಕ್ಯ ಹೋರಾಟ ನಡೆಯಬೇಕಾಗಿದೆ.
ಕಾಂಗ್ರೇಸ್ ಪಕ್ಷ ಕೊಟ್ಟ ಮಾತಿನಂತೆ ರೈತ ವಿರೋದಿ ಕಾಯ್ದೆಗಳನ್ನು ವಾಪಸ್ಸು ಪಡೆಯಲಿ; 2023ರ ವಿಧಾನ ಸಭೆಯ ಚುನಾವಣೆಯ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ‘ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ’ಯನ್ನು ಚಳಿಗಾಲದ ಅಧಿವೇಶದಲ್ಲೇ ವಾಪಸ್ಸು ಪಡೆಯಬೇಕು ಮತ್ತು ಕೇಂದ್ರದ ಕೃಷಿ ವಿರೋದಿ ವಿದ್ಯುತ್ ಬೀಜ ಮತ್ತು ಮಾರುಕಟ್ಟೆ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ತೀರ್ಮಾನ ಮಾಡಬೇಕು.
ಭತ್ತ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು ಮತ್ತು ಪಡಿತರ ವ್ಯವಸ್ಥೆಗೆ ರೈತರಿಂದಲೇ ನೇರ ಖರೀದಿ ಮಾಡಬೇಕು. ಭತ್ತ ಖರೀದಿಗೆ ನೊಂದಾವಣೆ ಮಾಡಿಕೊಳ್ಳಲಾಗುತ್ತಿದೆಯೇ ಹೊರತು ಖರೀದಿ ಕೇಂದ್ರಗಳನ್ನು ಇನ್ನೂ ಪ್ರಾರಂಭ ಮಾಡಿಲ್ಲ. ಈಗಾಗಲೇ, ಕಟಾವು ಪ್ರಾರಂಭವಾಗಿದ್ದು, ತಕ್ಷಣವೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪಡಿತರ ವ್ಯವಸ್ಥೆಗೆ ಬೇಕಾದ ಅಕ್ಕಿ, ರಾಗಿ, ಜೋಳ, ಎಣ್ಣೆಕಾಳು ಸಿರಿಧಾನ್ಯಗಳನ್ನು ರೈತರಿಂದಲೇ ನೇರವಾಗಿ ಖರೀದಿಸಿಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಮೆಗಾ ಫುಡ್ಪಾರ್ಕ್ ಸಂಸ್ಥೆಯಿಂದ ರೈತರಿಗೆ ಕಿರುಕುಳ ಆರೋಪ; ಶಾಸಕರ ಭೇಟಿ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಅರಸ್,ತಾಲ್ಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಮಲ್ಲೇಶ್ ಸೇರಿದಂತೆ ಇನ್ನಿತರರು ಇದ್ದರು.





