- ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟನೆ
- ಬಾಟಲಿಯಲ್ಲಿ ವಿಷ ಬೆರಸಿದ ಹಾಲು ಕುಡಿಸಿ ಮಗುವಿಗೆ ಕೊಂದ ಮಲತಾಯಿ
ಮಲತಾಯಿಯೊಬ್ಬರು ಐದು ತಿಂಗಳ ಕಂದಮ್ಮಳಿಗೆ ವಿಷ ಬೆರೆಸಿದ ಹಾಲು ಕುಡಿಸಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ. ಆಸ್ತಿಗಾಗಿ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.
ಗ್ರಾಮದ ಸಿದ್ದಪ್ಪ ಚಿಟ್ಟಿಗೇರಿ ಅವರ ಮೊದಲನೇ ಹೆಂಡತಿಯ ಪುತ್ರಿ ಸಂಗೀತಾ ಸಾವನಪ್ಪಿದ ಮಗು. ಎರಡನೇ ಹೆಂಡತಿ ದೇವಮ್ಮ ಎಂಬಾಕೆ ಮಗುವನ್ನು ಕೊಂದಿದ್ದಾಳೆ ಎಂದು ತಿಳಿದುಬಂದಿದೆ.

ಸೆ.30 ಶ್ರೀದೇವಿ ತನ್ನ ಮಗು ಸಂಗೀತಾಳಿಗೆ ಹಾಲುಣಿಸುವಾಗ ಬಂದ ದೇವಮ್ಮ, ಒತ್ತಾಯದಿಂದ ಮಗುವಿಗೆ ನಾನು ಹಾಲುಣಿಸುವೆ ಎಂದು ಕೋಣೆ ಒಳಗೆ ಕರೆದುಕೊಂಡು ಹೋಗಿ ಬಾಗಿಲು ಮುಚ್ಚಿ ಬಾಟಲಿಯಲ್ಲಿ ವಿಷ ಬೆರಸಿ ಕೂಸಿಗೆ ಹಾಲು ಕುಡಿಸಿದ್ದಾಳೆ. ನಾಲ್ಕು ಗಂಟೆ ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದ್ದು ಗಾಬರಿಯಾದ ಪೋಷಕರು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಾವನಪ್ಪಿದ್ದಾಳೆ.
ಏನಿದು ಘಟನೆ:
ಸಿದ್ದಪ್ಪ ಚಿಟ್ಟಿಗೇರಿ ಅವರು ಹನ್ನೊಂದು ವರ್ಷಗಳ ಹಿಂದೆ ಶ್ರೀದೇವಿ ಜೊತೆಗೆ ಮದುವೆಯಾಗಿದ್ದರು, ಆದರೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಏಳು ವರ್ಷಗಳ ಹಿಂದೆ ದೇವಮ್ಮ ಅವರೊಂದಿಗೆ ಎರಡನೇ ಮದುವೆಯಾದರು. ನಂತರ ಶ್ರೀದೇವಿ ತವರು ಮನೆಯಲ್ಲಿ ವಾಸವಿದ್ದರು. ರಾಜಿ ಸಂಧಾನದ ಮೂಲಕ ಶ್ರೀದೇವಿ ಮೂರು ವರ್ಷಗಳ ಹಿಂದೆ ಮತ್ತೆ ಗಂಡನ ಮನೆಗೆ ಬಂದು ನೆಲೆಸಿದ್ದಳು, ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು.
ಈ ಸುದ್ದಿ ಓದಿದ್ದೀರಾ ? ಬೀದರ್ | ಪೊಲೀಸ್ ಪೇದೆ ಆತ್ಮಹತ್ಯೆ
“ಸಿದ್ದಪ್ಪನ ಎರಡನೇ ಪತ್ನಿ ದೇವಮ್ಮಳಿಗೂ ನಾಲ್ಕು ಜನ ಮಕ್ಕಳಿದ್ದಾರೆ. ಹೀಗಾಗಿ ಪತಿಯ ಆಸ್ತಿಯಲ್ಲಿ ಸವತಿಯ ಮಗಳಿಗೂ ಆಸ್ತಿ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಐದು ತಿಂಗಳ ಮಗುವಿಗೆ ಕೊಲೆ ಮಾಡಿದ್ದಾಳೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ, ಮಗುವನ್ನು ಕೊಂದ ದೇವಮ್ಮಗೆ ಬಂಧಿಸಿ ತನಿಖೆ ಮುಂದುವರೆಸಿದ್ದೇವೆ” ಎಂದು ಪಿಎಸ್ಐ ಜಯಶ್ರೀ ಅವರು ಈದಿನ.ಕಾಮ್ ದೊಂದಿಗೆ ಮಾತನಾಡಿ ತಿಳಿಸಿದ್ದಾರೆ.




