ಚಿಕ್ಕಬಳ್ಳಾಪುರ ನಗರಸಭೆಗೂ ಯುಜಿಡಿ ಸಮಸ್ಯೆಗೂ ಬಿಡಿಸಲಾರದ ನಂಟು. ಇಂತಹ ಗಂಭೀರ ಸಮಸ್ಯೆ ಪರಿಹಾರಕ್ಕೆ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ನಿರಂತರವಾಗಿ ಶ್ರಮಿಸುತ್ತಿದ್ದರೂ ಅದಕ್ಕೆ ಶಾಶ್ವತ ಪರಿಹಾರ ಎನ್ನುವುದೇ ಸಿಕ್ಕಿಲ್ಲ. ಇಂತಹ ಸಮಯದಲ್ಲಿ ಕನಕಪುರ ಮೂಲಕ ಸಂಶೋಧನಾ ಸಂಸ್ಥೆಯೊಂದು ಇದಕ್ಕೆ ಪರಿಹಾರ ಹುಡುಕುವತ್ತ ಹೆಜ್ಜೆ ಹಾಕಿದೆ ಎಂದು ನಗರಸಭೆ ಉಪಾಧ್ಯಕ್ಷ ನಾಗರಾಜ್ ಜೆ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬುಧವಾರ ಚಿಕ್ಕಬಳ್ಳಾಪುರ ನಗರಸಭೆಗೆ ಕನಕಪುರ ಮೂಲದ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ, ಇಲ್ಲಿ ಯುಜಿಡಿ ಸಮಸ್ಯೆಗೆ ಬಳಸುತ್ತಿರುವ ಸಾಧನಗಳ ಬಗ್ಗೆ ಮಾಹಿತಿ ಪಡೆದರು. ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಸೆಕ್ಕಿಂಗ್, ಜೆಟ್ಟಿಂಗ್ ಮಷಿನ್ ಜತೆಗೆ ಶಿಲ್ಟ್ ಸ್ವಚ್ಛಗೊಳಿಸುವ ಯಂತ್ರಗಳ ಮೂಲಕ ಕೆಲಸ ನಿರ್ವಹಿಸುತ್ತಿದ್ದು, ಈ ಸಂಶೋಧನಾ ಸಂಸ್ಥೆಯವರು ರೋಬೋಟ್ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾಗಿದ್ದಾರೆ ಎಂದರು.
“ಪೌರಕಾರ್ಮಿಕರು ದೇಶ ಕಾಯುವ ಸೈನಿಕರಿಗೆ ಸಮನಾಗಿ ಶ್ರಮಿಸುತ್ತಿದ್ದಾರೆ. ಸೈನಿಕರು ಗಡಿಯಲ್ಲಿ ಶತೃಸೈನಿಕರ ಗುಂಡಿಗೆ ಎದೆಯೊಡ್ಡಿದರೆ, ಪೌರಕಾರ್ಮಿಕರು ನಗರಗಳಲ್ಲಿ ಆರೋಗ್ಯವನ್ನು ಪಣಕ್ಕಿಟ್ಟು, ನಾಗರಿಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಾರೆ. ಹಾಗಾಗಿಯೇ ಅವರು ಸೇವೆ ಪೂರ್ಣಗೊಳ್ಳುವ ಮೊದಲೇ ನಿಧನರಾಗುತ್ತಿರುವವರ ಸಂಖ್ಯೆ ಹೆಚ್ಚು. ಅಲ್ಲದೆ ಚರ್ಮರೋಗ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುವವರ ಸಂಖ್ಯೆಯೂ ಹೆಚ್ಚು. ಇಂತಹ ಸಮಸ್ಯೆಗಳಿಂದ ಪೌರಕಾರ್ಮಿಕರನ್ನು ಕಾಪಾಡಲು ಈ ಸಂಸ್ಥೆಯ ಉದ್ಧೇಶ ತುಂಬಾ ಉತ್ತಮವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಒಳಮೀಸಲಾತಿಯಲ್ಲಿ ಅನ್ಯಾಯ; ಅ.2ರಂದು ಅಲೆಮಾರಿಗಳಿಂದ ‘ಬುತ್ತಿ ಕಟ್ಟಿ ದೆಹಲಿಗೆ ಹತ್ತಿ’ ಆಂದೋಲನ
“ರೋಬೋಟಿಕ್ ತಂತ್ರಜ್ಞಾನದ ಮೂಲಕ ಯುಜಿಡಿ ಸ್ವಚ್ಛಗೊಳಿಸುವುದರಿಂದ ಪೌರಕಾರ್ಮಿಕರು ಮ್ಯಾನ್ಹೋಲ್ ಒಳಗೆ ಇಳಿದು ಕೆಲಸ ಮಾಡುವುದು ತಪ್ಪಲಿದೆ. ಇದರಿಂದ ಪೌರಕಾರ್ಮಿಕರ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯಲಿದೆ. ಹಾಗಾಗಿ ಈ ತಂತ್ರಜ್ಞಾನದ ಮೂಲಕ ಪೌರಕಾರ್ಮಿಕರ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ” ಎಂದು ತಿಳಿಸಿದರು.
ಪೌರಕಾರ್ಮಿಕರ ಆರೋಗ್ಯ ತಪಾಸಣೆಯನ್ನೂ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ಮತ್ತು ನಗರಸಭೆ ಉಪಾಧ್ಯಕ್ಷ ನಾಗರಾಜ್ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.





