ಮೈಸೂರಿನ ಕ್ರಾಫರ್ಡ್ ಹಾಲ್ ಎದುರು ಉತ್ತಮ ವಸತಿ ನಿಲಯ, ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಎಐಡಿಎಸ್ಒ ನೇತೃತ್ವದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಹೇಮಾ ” ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಯರು ಉಳಿದುಕೊಳ್ಳುತ್ತಿದ್ದ ವಸತಿ ನಿಲಯವು ಕುಸಿಯುವ ಸ್ಥಿತಿಯಲ್ಲಿದೆ. ಅದನ್ನು ಕೆಡವಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿನಿಯರನ್ನು ಯುವರಾಜ ಮಹಿಳಾ – ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡಿರುವ ವಸತಿ ನಿಲಯದಲ್ಲಿ ಒಂದು ಚಿಕ್ಕ ಕೊಠಡಿಯಲ್ಲಿ ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರನ್ನು ತುಂಬಲಾಗಿದೆ. ಅಲ್ಲಿ ಶೌಚಾಲಯ ಮತ್ತು ಇತರೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಮೈಸೂರಿನ ಮಹಾರಾಜ ಕಾಲೇಜು ಪ್ರತಿಷ್ಠಿತ ಕಾಲೇಜು ಆಗಿದ್ದರೂ, ಅಲ್ಲಿನ ವಿದ್ಯಾರ್ಥಿನಿಯರು ಕನಿಷ್ಠ ಸೌಲಭ್ಯಗಳು ಇಲ್ಲದೆ ಮತ್ತು ಉಳಿದುಕೊಳ್ಳಲು ಸರಿಯಾದ ಜಾಗವಿಲ್ಲದೆ. ಪರದಾಡುವಂತಾಗಿದೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.

” ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ, ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ, ವಸತಿ ನಿಲಯದ ಶುಲ್ಕ ಪಾವತಿಸಿಕೊಂಡು ದಾಖಲಾತಿ ಪಡೆದ ಎರಡೇ ದಿನಕ್ಕೆ ಸ್ಥಳಾಂತರವಾಗುವಂತೆ ಒತ್ತಾಯಿಸುತ್ತಿರುವುದು ವಿಶ್ವವಿದ್ಯಾನಿಲಯದ ಅಪ್ರಜಾಪ್ರಭುತ್ವ ನಿಲುವನ್ನು ಎತ್ತಿ ತೋರಿಸುತ್ತದೆ. ಆಗಸ್ಟ್ 4 ರಂದು, ವಿದ್ಯಾರ್ಥಿನಿಯರನ್ನು ವಸತಿ ನಿಲಯಕ್ಕೆ ದಾಖಲಿಸಿಕೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿನಿಯಿಂದ ₹13,000ಕ್ಕೂ ಹೆಚ್ಚು ಶುಲ್ಕವನ್ನು ಕಟ್ಟಿಸಿಕೊಂಡಿದ್ದಾರೆ.
ಇದರ ಜೊತೆಗೆ ಪ್ರತಿ ತಿಂಗಳು ₹2,100 ರೂಪಾಯಿ ಊಟದ ಶುಲ್ಕ ಕಟ್ಟಬೇಕಾಗಿದೆ. ಹೀಗಿದ್ದರೂ ಕೂಡ, ಇಷ್ಟೆಲ್ಲ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಿದರೂ, ಕನಿಷ್ಠ ಉಳಿದುಕೊಳ್ಳಲು ಮತ್ತು ಓದಲು ಸರಿಯಾದ ಜಾಗವಿಲ್ಲದೆ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ, ಕೂಡಲೇ ವಿದ್ಯಾರ್ಥಿನಿಯರಿಗೆ ಯೋಗ್ಯ ರೀತಿಯ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪ್ರತಾಪ್ ಸಿಂಹ ಇತಿಹಾಸ ಗೊತ್ತಿರದ ಮೂರ್ಖ ವ್ಯಕ್ತಿ : ಅಬ್ದುಲ್ ಮಜೀದ್

ಸಹಾಯ ನಿರ್ದೇಶಕಿ ಸುಷ್ಮಾ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ದಿಶ, ಅಭಿಷೇಕ್ ಹಾಗೂ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಯರು ಇದ್ದರು.





