2047ರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ, ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುವ ಧ್ಯೇಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಈ ಕನಸು ನನಸುಗೊಳಿಸುವಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ತಾಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ 26ನೇ ಶಾಲಾ ವಾರ್ಷಿಕೋತ್ಸವ ಹಾಗೂ ಹೊಂಬೆಳಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಬರುವ 25 ವರ್ಷ ನಮಗೆಲ್ಲರಿಗೂ ಬಹಳ ಮಹತ್ವದ್ದಾಗಿವೆ. ಇಂದಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಭವಿಷ್ಯ ಭಾರತದ ನಿಜವಾದ ಆಸ್ತಿಗಳು. ನೀವೆಲ್ಲ ದೇಶ ಕಟ್ಟುವ ಸಂಕಲ್ಪ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು” ಎಂದರು.
ಬಗದಲ್ ಮೊರಾರ್ಜಿ ವಸತಿ ಶಾಲೆ ಮಾದರಿಯಾಗಿದೆ.ಇಲ್ಲಿನ ಪರಿಸರ ಮಕ್ಕಳ ಶಿಕ್ಷಣಕ್ಕೆ ಹೇಳಿ ಮಾಡಿಸಿದಂತಿದೆ. ಗುಣಾತ್ಮಕ ಶಿಕ್ಷಣ ನೀಡಲು ಬೋಧಕ ವೃಂದ ನಿರಂತರ ಪ್ರಯತ್ನಿಸುತ್ತಿದೆ. ಬಗದಲ್, ಘೋಡಂಪಳ್ಳಿ ಇನ್ನಿತರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪೈಪೋಟಿ ನಡೆದಿದೆ. ಅನೇಕರು ಪ್ರವೇಶ ಕೊಡಿಸಲು ನಮ್ಮ ಶಿಫಾರಸು ಪತ್ರ ಕೇಳುತ್ತಿದ್ದಾರೆ. ಇದು ಇಲ್ಲಿನ ಉತ್ತಮ ಶಿಕ್ಷಣ ವ್ಯವಸ್ಥೆಗೆ ಸಾಕ್ಷಿಯಾಗಿದೆ. ಶಿಕ್ಷಕರು ಮನಸ್ಸು ಮಾಡಿದರೆ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಸೆಡ್ಡು ಹೊಡೆಯಬಹುದು” ಎಂದರು.
“ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವುದು ಅಗತ್ಯವಿದೆ. ನಾವು ನಮ್ಮ ಸಂಸ್ಕಾರ, ಸಂಸ್ಕೃತಿ, ಪರಂಪರೆಗೆ ಅನುಗುಣವಾಗಿ ಹೆಜ್ಜೆ ಹಾಕಿದರೆ ಹೆಚ್ಚಿನ ಸಾಧನೆ ಮಾಡಲು ಹಾಗೂ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ನೀತಿ, ಮೌಲ್ಯ, ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಸ್ವಾಮಿ ವಿವೇಕಾನಂದರ ಚಿಂತನೆಗಳ ಮೂಲಕ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು” ಎಂದು ಕರೆ ನೀಡಿದರು.
ಇದೇ ವೇಳೆ ಶಾಲೆಯ ಬಯಲು ರಂಗಮಂದಿರದ ಎದುರು ಮೇಲ್ಛಾವಣಿ ಮಾಡಿಕೊಡುವಂತೆ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ಮನವಿ ಮಾಡಿದರು. ಈಗಾಗಲೇ ಇದಕ್ಕೆ ಅನುಮೋದನೆ ದೊರೆತಿದ್ದು ಇನ್ನು 15 ದಿವಸಗಳಲ್ಲಿ ಕಾರ್ಯ ಪ್ರಾರಂಭವಾಗಲಿದೆ” ಎಂದು ಶಾಸಕರು ಭರವಸೆ ನೀಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಗುಣಮಟ್ಟದ ಶಾಲೆಗೆ ಬ್ರಾಂಡ್ ನೇಮ್ ಅನ್ನುವ ರೀತಿಯಲ್ಲಿ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಸರು ಗಳಿಸಿದೆ. ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕವಾಗಿ ಶ್ರಮಿಸುತ್ತಿರುವ ಈ ಶಾಲೆ ಇಲಾಖೆಗೆ ಗರಿ ಎನ್ನುವಂತಿದೆ” ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ನಜಿಮಾ ರ್ವಿನ್ ಅವರಿಗೆ ಗಣಿತ ರತ್ನ ಹಾಗೂ ಶಾಲಿನಿ ನಾಗೇಶ, ಅಭಿಷೇಕ ಸಂಜುಕುಮಾರ, ಪ್ರೀತಮ ಬಸವರಾಜ, ನಿಹಾರಿಕಾ ಮಾರುತಿರೆಡ್ಡಿ, ನೈತಿಕ ಚಂದ್ರಕಾಂತಗೆ ಆದರ್ಶ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಮೂಕ ಪ್ರಾಣಿಗಳ ಶಾಪದಿಂದ ರಾಜ್ಯ ಸರ್ಕಾರ ಶೀಘ್ರ ಪತನ: ಶಾಸಕ ಪ್ರಭು ಚವ್ಹಾಣ
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸದಾನಂದ ಜೋಶಿ , ಪ್ರದೀಪ ವಾತಡೆ, ಮಾಣೀಕಪ್ಪಾ ಖಾಶೆಂಪುರ, ಸುರೇಶ ಮಾಶೆಟ್ಟಿ, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ, ಪತ್ರಾಂಕಿತ ವ್ಯವಸ್ಥಾಪಕ ನಾಗಮಣಿ ವಿ ಹೊಸಮನಿ, ತಾಲೂಕು ಕಲ್ಯಾಣಾಧಿಕಾರಿ ಸಂಗೀತಾ ಬಿರಾದಾರ, ಬಗದಲ್ ಗ್ರಾಮ ಪಂಚಾಯತ ಅಧ್ಯಕ್ಷೆ ಧರ್ಮಾಬಾಯಿ ಮಿಟ್ಟುಸಿಂಗ ರಾಠೋಡ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಿರಾದಾರ ಗೋದಾವರಿ, ಪಾಲಕ ಪ್ರತಿನಿಧಿ ಲಾಲಪ್ಪ ಕೋರಿ, ಸಂಜೀವ ಅಲ್ಲೂರೆ, ಮೊರಾರ್ಜಿ ದೇಸಾಯಿ ಶಾಲೆ ಪ್ರಾಚಾರ್ಯ ಚನ್ನಬಸವ ಹೇಡೆ, ಇತರರಿದ್ದರು.ಗೌತಮ ಕುದರೆ ನಿರೂಪಿಸಿದರು. ಸಿದ್ಧಲಿಂಗಯ್ಯ ಮಠಪತಿ ಸ್ವಾಗತಿಸಿ, ಮುದಾಸಿರ ಅಲಿ ವಂದಿಸಿದರು.





