ಶ್ರೀಕಂಠಪ್ಪ ಬಡಾವಣೆಯ ಬಳಿ ಕೆಎಸ್ಆರ್ಟಿಸಿ ಬಸ್ಗಳ ನಿಲುಗಡೆಗಾಗಿ ಆಗ್ರಹಿಸಿ ಹಾವೇರಿ ನಗರದ ಹೊರವಲಯದ ಹಾನಗಲ್ ರಸ್ತೆಯಲ್ಲಿರುವ ಶ್ರೀಕಂಠಪ್ಪ ಬಡಾವಣೆಯ ಹಾಸ್ಟೇಲ್ ವಿದ್ಯಾರ್ಥಿನಿಯರು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿನಿಯರು, “ಹಾಸ್ಟೆಲ್ನಿಂದ ಕಾಲೇಜಿಗೆ ತೆರಳಲು ಕೆಎಸ್ಆರ್ಟಿಸಿ ಬಸ್ಗಳನ್ನು ಅವಲಂಬಿಸಿದ್ದೇವೆ. ಆದರೆ, ಹಾನಗಲ್ ಕಡೆಯಿಂದ ಹಾವೇರಿಗೆ ಬರುವ ಬಸ್ಸುಗಳು ಶ್ರೀಕಂಠಪ್ಪ ಬಡಾವಣೆ ಬಳಿ ನಿಲುಗಡೆ ಮಾಡುವುದಿಲ್ಲ. ಪರಿಣಾಮ, ವಿದ್ಯಾರ್ಥಿಗಳಿಗೆ ವಿಪರೀತ ಸಮಸ್ಯೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಮಸ್ಯೆ ಪರಿಹರಿಸುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಈ ಹಿಂದೆ ಮನವಿ ಕೊಡಲಾಗಿತ್ತು. ಆದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಪ್ರತಿಭಟನೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೋಲಿಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ನಡುವೆ ವಾಗ್ವಾದಗಳು ನಡೆದಿದೆ. ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ವಿದ್ಯಾರ್ಥಿನಿಯರು ಪಟ್ಟುಹಿಡಿದ್ದರು.
ಸ್ಥಳಕ್ಕೆ ಬಂದ ಕೆಎಸ್ಆರ್ಟಿಸಿ ಡಿಫೋ ಮ್ಯಾನೇಜರ್ ಹಾಗೂ ಡಿಟಿಓ ವಿದ್ಯಾರ್ಥಿನಿಯರ ಜೊತೆ ಚರ್ಚೆ ನಡೆಸಿದ್ದಾರೆ. ದಿನನಿತ್ಯ ಬೆಳಿಗ್ಗೆ 8.30 ರಿಂದ 10 ಗಂಟೆವರೆಗೂ ಎರಡು ಹೆಚ್ಚುವರಿ ಬಸ್ಗಳನ್ನು ಬಿಡಬೇಕು. ಹಾನಗಲ್ – ಹಾವೇರಿ ನಡುವೆ ಎರಡೂ ಕಡೆ ಸಂಚರಿಸುವ ಎಲ್ಲ ಬಸ್ಗಳು ಶ್ರೀಕಂಠಪ್ಪ ಬಡಾವಣೆ ಬಳಿ ನಿಲುಗಡೆ ಮಾಡಬೇಕು. ಕೆಲವು ಕಂಡಕ್ಟರ್ಗಳು ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯಿಸಿದ ಡಿಪೋ ಅಧಿಕಾರಿಗಳು, “ಇಂದೇ ಸರ್ವೆ ಮಾಡಿಸಿ ವಿದ್ಯಾರ್ಥಿಗಳಿಗೆ ಬಸ್ ನಿಲಗಡೆ ಮಾಡಲು ಅನುಕೂಲ ಕಲ್ಪಿಸಿಕೊಡಲಾಗುವುದು ಹಾಗೂ ಸಮಸ್ಯೆಗಳನ್ನು ಪರಿಹರಿಸಲಾಗುವುದು” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಭಾಗ್ಯಶ್ರೀ, ಐಶ್ವರ್ಯ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳ ಸಂಘದ ಮುಖಂಡರಾದ ಸಿ. ಕೊಟ್ರೆಗೌಡ ಹಾಗೂ ಎರಡೂ ಹಾಸ್ಟೆಲ್ ಗಳ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




