ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರು(ಕಬ್ಬು ಬೆಳೆಗಾರರು) ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಬಳಿಯ ಗುರ್ಲಾಪುರ ಕ್ರಾಸ್ನ ರಸ್ತೆಯಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದು, “ಪ್ರತಿ ಟನ್ ಕಬ್ಬಿಗೆ ₹3,500 ಬೆಲೆ ನೀಡಬೇಕು. ಸಕ್ಕರೆ ಕಾರ್ಖಾನೆಗಳು ನೀಡುವ ₹3,200 ಸ್ವೀಕಾರಾರ್ಹವಲ್ಲ. ರಾಜ್ಯ ಸರ್ಕಾರವು ಪ್ರತಿ ಟನ್ಗೆ ₹3,500 ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವವರೆಗೆ ಮತ್ತು ಎಲ್ಲ ಇತರ ಬೇಡಿಕೆಗಳನ್ನು ಈಡೇರಿಸಲು ಒಪ್ಪುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ” ಎಂದು ರೈತರು ಪಟ್ಟುಹಿಡಿದಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ಇತರ ಸಂಘಟನೆಗಳು ನವೆಂಬರ್ 7ರಂದು ಕರ್ನಾಟಕ ಬಂದ್ಗೆ ಕರೆ ನೀಡಲು ನಿರ್ಧರಿಸಿವೆ ಎಂದು ರೈತ ಮುಖಂಡ ಚುನಪ್ಪ ಪೂಜಾರಿ ತಿಳಿಸಿದ್ದಾರೆ.
“ಈಗಾಗಲೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಹಲವಾರು ರೈತ ಸಂಘಟನೆಗಳು ನಮ್ಮ ಬೇಡಿಕೆಗಳನ್ನು ಬೆಂಬಲಿಸಿ ಪ್ರತಿಭಟನೆಗಳನ್ನು ಪ್ರಾರಂಭಿಸಿವೆ. ಈ ಆಂದೋಲನವು ಇಡೀ ರಾಜ್ಯಾದ್ಯಂತ ನಡೆಯಲಿದೆ. ಸರ್ಕಾರ ನಮ್ಮ ಮಾತನ್ನು ಕೇಳಲೇಬೇಕಾಗುತ್ತದೆ” ಎಂದು ಅವರು ಹೇಳಿದರು.
“ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಕೂಡಲೇ ಬೇಡಿಕೆಗಳನ್ನು ಈಡೇರಿಸುವುದಾಗಿ ಖಚಿತ ಭರವಸೆ ನೀಡಬೇಕು. ಮಹಾರಾಷ್ಟ್ರದ ಖಾಸಗಿ ಮತ್ತು ಸಹಕಾರಿ ಕಾರ್ಖಾನೆಗಳು ಕಟಿಂಗ್ ಮತ್ತು ಸಾರಿಗೆ ಶುಲ್ಕವನ್ನು ಹೊರತುಪಡಿಸಿ ಪ್ರತಿ ಟನ್ಗೆ ₹3,400 ರಿಂದ ₹3,600 ವರೆಗಿನ ಬೆಲೆಗಳನ್ನು ಘೋಷಿಸಿವೆ. ಅಂತೆಯೇ ರಾಜ್ಯ ಸರ್ಕಾರವೂ ರೈತರ ನೆರವಿಗೆ ನಿಲ್ಲಬೇಕು. ಬೆಂಬಲ ಬೆಲೆ ಘೋಷಿಸಬೇಕು. ಈ ಮೂಲಕ ರೈತರಿಗೆ ಆಗುವ ಅನ್ಯಾಯಗಳನ್ನು ತಡೆಯಬೇಕು” ಎಂದು ಆಗ್ರಹಿಸಿದರು.
ಇಂಚಿಗೇರಿ ಶಾಖಾ ಮಠದ ಶ್ರೀ ಶಶಿಕಾಂತ ಗುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತ, “ಎಲ್ಲ ಪಕ್ಷಗಳ ರಾಜಕಾರಣಿಗಳು ರೈತರ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರವು ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಲ್ಲಿ ಕೇವಲ ₹15ರಷ್ಟು ಹೆಚ್ಚಳ ಮಾಡಿದೆ. ಸಕ್ಕರೆ ಮತ್ತು ಎಥೆನಾಲ್ ಉದ್ಯಮವನ್ನು ವಿವಿಧ ಕಾನೂನುಗಳು ಹಾಗೂ ನಿಯಮಗಳ ಮೂಲಕ ಕೇಂದ್ರವು ನಿಯಂತ್ರಿಸುತ್ತದೆ. ಇದು ಅವುಗಳ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುತ್ತದೆ. ಬೆಳಗಾವಿಯಂತಹ ಗಡಿ ಜಿಲ್ಲೆಗಳಲ್ಲಿರುವ ಬಹು-ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳು ಕೇಂದ್ರ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಆದರೆ ಕೇಂದ್ರ ಸರ್ಕಾರವು ನಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ” ಎಂದು ಆರೋಪಿಸಿದರು.
“ರಾಜ್ಯ ಸರ್ಕಾರವು ತೂಕದ ಕಟ್ಟುನಿಟ್ಟಿನ ಅಳತೆ, ಸಕ್ಕರೆ ಮರುಪಡೆಯುವಿಕೆ ಲೆಕ್ಕಾಚಾರ ಮತ್ತು ಸಕಾಲಿಕ ಪಾವತಿಯನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಸಕ್ಕರೆ ಆಯುಕ್ತರ ಕಚೇರಿಯು ರಾಜಕಾರಣಿಗಳಾಗುವ ಸಾಧ್ಯತೆಯಿರುವ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ನಿಜವಾದ ಅಧಿಕಾರವನ್ನು ಹೊಂದಿಲ್ಲ” ಎಂದು ಶ್ರೀಗಳು ಹೇಳಿದರು.
“ರೈತರು ಪ್ರತಿಭಟನೆಯನ್ನು ಮಧ್ಯದಲ್ಲಿಯೇ ಕೈಬಿಡಬಾರದು. ಬೇಡಿಕೆಗಳು ಈಡೇರುವವರೆಗೆ ಈ ಧರಣಿ ಮುಂದುವರಿಯಬೇಕು. ಹೆಚ್ಚಿನ ಬೆಲೆ ಘೋಷಿಸುವವರೆಗೆ ಕಾರ್ಖಾನೆಗಳು ಕಾರ್ಯಾಚರಣೆ ಪ್ರಾರಂಭಿಸುವಂತೆ ರಾಜ್ಯ ಸರ್ಕಾರ ಅನುಮತಿಸಬಾರದು” ಎಂದು ಒತ್ತಾಯಿಸಿದರು.
ಗುರ್ಲಾಪುರದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಕೆಲವು ಸದಸ್ಯರು ಸೇರಿಕೊಂಡರು. ಅಲ್ಲದೆ ರೈತರು ನಿಪ್ಪಾಣಿ-ಮುಧೋಳ ರಸ್ತೆ ಮತ್ತು ದರೂರು ಸೇತುವೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಅನಾನುಕೂಲತೆಯನ್ನು ಅನುಭವಿಸಿದರು. ಅಲ್ಲದೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಯಿತು. ಚಿಕ್ಕೋಡಿ, ಅಥಣಿ ಮತ್ತು ಮೂಡಲಗಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಬಸ್ಗಳ ಸಂಖ್ಯೆಯೂ ಕಡಿಮೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಬ್ಬು ಬೆಳೆಗಾರರ ಹೋರಾಟ: ಸಚಿವರ ಮಾತಿಗೆ ಒಪ್ಪದ ರೈತರು
ಪ್ರತಿಭಟನೆಗೆ ಬೆಂಬಲವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಸುವರ್ಣ ಸೌಧದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು. ನಂತರ ಪೊಲೀಸರು ಅವರನ್ನು ಅಲ್ಲಿಂದ ಕರೆದೊಯ್ದರು. ಅಲ್ಲದೆ ಪ್ರತಿಭಟನೆಯ ಸಮಯದಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರ ಮುಂದೆಯೇ ರೈತ ಲಕ್ಕಪ್ಪ ಗುಣದಲ್ ಅವರು ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಕೆಎಲ್ಇಎಸ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ ಬಂದ್ ಪ್ರಾರಭಿಸಿರುವ ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬೃಹತ್ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ.





