ಯು ಟಿ ಖಾದರ್ ಅವರು ಸ್ಪೀಕರ್ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ವಿಶ್ವ ಮನ್ನಣೆಗಳಿಸಿ ಕರುನಾಡಿನ ಜನರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇದನ್ನು ಸಹಿಸಲಾಗದೆ ಅಸೂಯೆಯಿಂದ ಆಧಾರರಹಿತ ಆರೋಪ ಮಾಡುವುದು ಖಂಡನೀಯ ಎಂದು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, “ಅತಿ ಕಿರಿಯ ವಯಸ್ಸಿನಲ್ಲಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿ ಜನಪರ ಮತ್ತು ಸಂವಿಧಾನಪರವಾಗಿ ಕೆಲಸ ಮಾಡಿ ಜನಪ್ರಿಯತೆಗಳಿಸಿರುವುದನ್ನು ಸಹಿಸಲಾಗದೆ ಈ ಹಿಂದಿನ ಸ್ಪೀಕರ್ ಕಾಗೇರಿಯವರು ಮತ್ತು ಪ್ರತಿಪಕ್ಷಗಳ ಕೆಲವು ಶಾಸಕರು ಮಾಡಿರುವ ಆಧಾರರಹಿತ ಆರೋಪ ದುರುದ್ದೇಶ ಪೂರಿತವಾಗಿರುತ್ತದೆ. ಅಲ್ಲದೆ ತಮ್ಮ ಪ್ರಚಾರಕ್ಕಾಗಿ ಹೀಗೆ ಆರೋಪ ಮಾಡಿರುವುದನ್ನು ಕಟುವಾದ ಶಬ್ದಗಳಿಂದ ಖಂಡಿಸುತ್ತೇನೆ” ಎಂದರು.
“ಹಿಂದಿನ ಸಭಾಪತಿಗಳು ಅಧಿಕಾರ ದುರುಪಯೋಗ, ಸ್ವೇಚ್ಛಾಚಾರ, ಸ್ವಜನ ಪಕ್ಷಪಾತ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ವಿನಾಕಾರಣ ಕೋಮುಭಾವನೆ ಕೆರಳಿಸಿ ದ್ವೇಷ ಉಂಟುಮಾಡುತ್ತಿದ್ದಾರೆ. ಅದೂ ಕೂಡ ಕೇವಲ ಮತಗಳಿಸುವ ಉದ್ದೇಶದಿಂದ ಮಾತ್ರ. ಜಿಲ್ಲೆಗೆ ಅವರ ಕೊಡುಗೆ ಏನು? ಖಾದರ್ ಅವರು ಎಲ್ಲ ಜಾತಿ, ಧರ್ಮ ಹಾಗೂ ಪಕ್ಷದವರನ್ನು ಒಂದೇ ಭಾವನೆಯಲ್ಲಿ ನೋಡುತ್ತಿದ್ದು, ಅವರನ್ನು ನೋಡಿ ಯಾರಾದರೂ ಮಾದರಿಯಾಗಿ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
“ವಿಶ್ವೇಶ್ವರ ಕಾಗೇರಿ ಮತ್ತು ಬೋಪಯ್ಯ ಅವರ ಅವಧಿಯಲ್ಲಾದ ಹಣಕಾಸಿನ ಬಿಡುಗಡೆ ಬಗ್ಗೆ ತನಿಖೆ ನಡೆಸಬೇಕು” ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, “ಯು ಟಿ ಖಾದರ್ ಅವರು ಜಾತಿ, ಮತ, ಪಕ್ಷ, ಪಂಥವೆಂಬ ಯಾವುದೇ ಭೇದವಿಲ್ಲದೆ, ಸಾಂಧಾನಿಕ ಹುದ್ದೆಯಲ್ಲಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಪ್ರತಿ ಬಾರಿ ಅಧಿವೇಶನದ ಸಂದರ್ಭದಲ್ಲಿ ಹೊಸತನ ತಂದು ಎಲ್ಲ ಪಕ್ಷದ ಶಾಸಕರುಗಳಿಂದ ಪ್ರಶಂಸಿಸಲ್ಪಡುತ್ತಾರೆ. ಇದನ್ನು ಸಹಿಸದೆ ಆರೋಪಿಸುವುದು ದುರದೃಷ್ಟಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸುಡ) ಅಧ್ಯಕ್ಷ ಕೆ ಎಂ ಮುಸ್ತಫಾ ಮಾತನಾಡಿ, “ಬೆಳಗಾವಿ ಸುವರ್ಣ ಸೌಧದಲ್ಲಿ ಬಸವಣ್ಣನವರ ಅನುಭವ ಪಂಟಪ, ಖ್ಯಾತ ಉದ್ಯಮಿಗಳು, ವಿಶೇಷ ಸಾಧಕರು ಹಾಗೂ ಕಟ್ಟಕಡೆಯ ವ್ಯಕ್ತಿಗಳಾದ ಬೀದಿ ವ್ಯಾಪಾರ ಮಾಡಿ ಮಕ್ಕಳನ್ನು ಸಮಾಜದ ಗಣ್ಯರನ್ನಾಗಿಸಿದ ಮಹಾನುಭಾವರನ್ನು ಸದನಕ್ಕೆ ಪರಿಚಯಿಸಿ ಪ್ರತಿಪಕ್ಷ, ಆಡಳಿತ ಪಕ್ಷದ ನಾಯಕರುಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಅಧಿವೇಶನ ಕಲಾಪ ವೀಕ್ಷಿಸಿ ಮಾದರಿ ವಿದ್ಯಾರ್ಥಿ ಸಂಸತ್ತು ಮೂಲಕ ಶಾಲೆಗಳಲ್ಲಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಇದೆಲ್ಲವೂ ಇತಿಹಾಸ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಹಾರ ಚುನಾವಣೆ | ವಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಧಾಕೃಷ್ಣ ಬೊಳ್ಳುರು ಮಾತನಾಡಿ, “ಖಾದರ್ ಅವರು ಸೇವೆ ಮತ್ತು ನಡವಳಿಕೆಗಳಿಗೆ ಮಾದರಿಯಾಗಿದ್ದಾರೆ. ಎಲ್ಲ ಪಕ್ಷದವರನ್ನೂ ಗೌರವಿಸುತ್ತಾರೆ. ಅಂಥವರ ಬಗ್ಗೆ ಕ್ಷುಲ್ಲಕ ಆರೋಪ ಖಂಡನೀಯ” ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೋ, ಭಾಸ್ಕರ ಪೂಜಾರಿ ಕೊಯಿಕುಳಿ ಸೇರಿದಂತೆ ಇತರರು ಇದ್ದರು.





