ಅಸ್ಪೃಶ್ಯರು, ಬಡವರು, ಕೂಲಿ ಕಾರ್ಮಿಕರು ಮತ್ತು ಬುಡಕಟ್ಟು ಸಮುದಾಯದ ಜನರಿಗೆ ಮೊತ್ತಮೊದಲಾಗಿ ಆರೋಗ್ಯ ಗ್ಯಾರಂಟಿ ನೀಡಬೇಕು. ಜನರು ಆರೋಗ್ಯದಿಂದ ಬದುಕಿದರೆ ಮಾತ್ರ ಸರ್ಕಾರದ ಪಂಚ ಗ್ಯಾರಂಟಿಗಳು ಅರ್ಥಪೂರ್ಣವಾಗುತ್ತವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಒತ್ತಾಯಿಸಿದರು.
ಫೆಬ್ರವರಿ 2ರಿಂದ 17ರವರೆಗೆ ರಾಜ್ಯದ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಆರೋಗ್ಯ ಹಕ್ಕಿನ ಜಾಥಾ ಕುರಿತು ಮಾತನಾಡಿದ ಅವರು, ಸರ್ಕಾರದ ಆರೋಗ್ಯ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಸಹಭಾಗಿತ್ವಕ್ಕೆ (PPP – Public Private Partnership) ವಹಿಸಲಾಗುತ್ತಿದೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಇದೆ. ವೈದ್ಯರು ಹೊರಗಿನ ಖಾಸಗಿ ಮೆಡಿಕಲ್ಗಳಿಗೆ ಚೀಟಿ ಬರೆದು ಕೊಡುತ್ತಿರುವುದು ಸಾಮಾನ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುವ ದಲಿತರು, ಬುಡಕಟ್ಟು ಸಮುದಾಯದವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆಯನ್ನು ಭರಿಸಲು ಆಗದೆ ಚಿಕ್ಕ ವಯಸ್ಸಿನಲ್ಲೇ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಅವರು ದೂರಿದರು.
ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗಳು ಭಾರೀ ಚಿಕಿತ್ಸಾ ವೆಚ್ಚ ವಿಧಿಸುತ್ತಿದ್ದು, ಇದರಿಂದ ಬಡವರು ಸಂವಿಧಾನ ದತ್ತವಾದ ಆರೋಗ್ಯ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದಲೇ PPP ವ್ಯವಸ್ಥೆಯನ್ನು ಕೂಡಲೇ ಕೈಬಿಡಬೇಕು ಎಂದು ಸುಂದರ ಮಾಸ್ತರ್ ಆಗ್ರಹಿಸಿದರು.
PPP ವ್ಯವಸ್ಥೆಯನ್ನು ತಕ್ಷಣ ರದ್ದುಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಬುಡಕಟ್ಟು ಸಮುದಾಯದವರು ಹಾಗೂ ದಲಿತರು ಸರ್ಕಾರದ ಇತರ ಗ್ಯಾರಂಟಿಗಳನ್ನೂ ತಿರಸ್ಕರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ವಿರೋಧಿಸಿ ರಾಜ್ಯಾದ್ಯಂತ ನಡೆಯಲಿರುವ ಪ್ರತಿಭಟನಾ ಜಾಥೆಯ ಭಾಗವಾಗಿ, ಉಡುಪಿಯಲ್ಲಿ ಫೆಬ್ರವರಿ 10ರಂದು (ಮಂಗಳವಾರ) ಕೊರಗ ಒಕ್ಕೂಟ ಹಾಗೂ ಇತರೆ ಸಹಭಾಗಿ ಸಂಘಟನೆಗಳೊಂದಿಗೆ “ಆರೋಗ್ಯ ಹಕ್ಕಿನ ಜಾಥಾ” ಮಣಿಪಾಲ ಟೈಗರ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಲಿದೆ ಎಂದು ತಿಳಿಸಿದರು.
ಈ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಕೂಲಿ ಕಾರ್ಮಿಕರು, ಬುಡಕಟ್ಟು ಸಮುದಾಯದವರು ಹಾಗೂ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾಗವಹಿಸಬೇಕು ಎಂದು ಸುಂದರ ಮಾಸ್ತರ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.





