ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಉಡುಪಿ ಜಿಲ್ಲೆಯ ಜನತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಮತ್ತೊಂದು ದಾಖಲೆಯ ಬಜೆಟ್ ಆಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಜನರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಹಾಗೂ ಹೋರಾಟ ನಡೆಸುತ್ತಿದ್ದರೂ ಬಜೆಟ್ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೊಸ ತಾಲೂಕುಗಳು ರಚನೆಯಾಗಿ ಹಲವು ವರ್ಷಗಳು ಕಳೆದಿದ್ದರೂ ಅವುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸದ ಕಾರಣ ಜನರು ಇನ್ನೂ ಹಳೆಯ ತಾಲೂಕು ಕೇಂದ್ರಗಳ ಪ್ರಮುಖ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಮುಂದುವರಿದಿದೆ ಎಂದು ಅವರು ಹೇಳಿದರು.
ಬೈಂದೂರು ತಾಲೂಕಿನಲ್ಲಿ ನ್ಯಾಯಾಲಯ, ತಾಲೂಕು ಆಸ್ಪತ್ರೆ ಹಾಗೂ ಕಾರ್ಮಿಕ ನಿರೀಕ್ಷಕರ ಕಚೇರಿ ಮಂಜೂರು ಮಾಡಿಲ್ಲ. ಬ್ರಹ್ಮಾವರ ತಾಲೂಕಿಗೂ ಇದೇ ರೀತಿಯಲ್ಲಿ ಸರ್ಕಾರ ಆದ್ಯತೆ ನೀಡಿಲ್ಲ ಎಂದು ಕಲ್ಲಾಗರ ಟೀಕಿಸಿದ್ದಾರೆ.
ಸಿದ್ದಾಪುರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಕಷ್ಟು ಸರ್ಕಾರಿ ಭೂಮಿ ಮತ್ತು ಕಟ್ಟಡಗಳಿದ್ದರೂ ಅವುಗಳನ್ನು ಮೇಲ್ದರ್ಜೆಗೆ ಏರಿಸುವುದು ಅಥವಾ ಪ್ರತಿದಿನ ವೈದ್ಯರನ್ನು ನೇಮಿಸುವ ಬಗ್ಗೆ ಬಜೆಟ್ನಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು.
ಉಡುಪಿ ತಾಲೂಕಿನಲ್ಲಿ ಕುಡಿಯುವ ನೀರಿನ ನಿರಂತರ ಸಮಸ್ಯೆ ಪರಿಹರಿಸುವ ಬಗ್ಗೆ ಪ್ರಸ್ತಾಪವಿಲ್ಲ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಾಗೂ ಬ್ರಹ್ಮಾವರ ಕೃಷಿ ಕಾಲೇಜನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಯಾವುದೇ ಯೋಜನೆ ಘೋಷಿಸಲಿಲ್ಲ. ಕೋಡಿ–ಕುಂದಾಪುರ ಸೇತುವೆ ನಿರ್ಮಾಣಕ್ಕೂ ಬಜೆಟ್ನಲ್ಲಿ ಪ್ರಸ್ತಾಪ ಇಲ್ಲ ಎಂದು ಅವರು ಹೇಳಿದ್ದಾರೆ.
ನಗರಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ಪುರಸಭಾ ವ್ಯಾಪ್ತಿಯಲ್ಲಿ ಕೊಳಚೆ ನೀರಿನ ವಿಲೇವಾರಿಗೆ ಅಗತ್ಯ ಕ್ರಮಗಳ ಬಗ್ಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸಲು ಜನರು ಹೋರಾಟ ನಡೆಸುತ್ತಿದ್ದರೂ ಅದಕ್ಕೂ ಬಜೆಟ್ನಲ್ಲಿ ಸ್ಪಂದನೆ ದೊರಕಿಲ್ಲ ಎಂದು ಅವರು ದೂರಿದರು.
ಖಾಸಗಿ ಸಾರಿಗೆ ಚಾಲಕರಿಗೆ ಹಾಗೂ ಮೀನುಗಾರರಿಗೆ ಕಲ್ಯಾಣ ಮಂಡಳಿ ರಚಿಸುವ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ. ಗಂಗೊಳ್ಳಿ ಮತ್ತು ಮಲ್ಪೆ ಬಂದರುಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಬಂದರುಗಳನ್ನು ಖಾಸಗೀಕರಣ ಮಾಡುವ ಸಂಚು ಬಜೆಟ್ನಲ್ಲಿ ಕಾಣಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣಕ್ಕೆ ಬಳಸುವ ಯೋಜನೆ ಕಮಿಷನ್ ಉದ್ದೇಶಿತ ದಂಧೆಯಾಗಿದೆ. ಅದರ ಬದಲಿಗೆ ಕಳೆದ ಮೂರು ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಧನಸಹಾಯವನ್ನು ಕಾರ್ಮಿಕರ ಮಕ್ಕಳಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು ಎಂದು ಕಲ್ಲಾಗರ ಹೇಳಿದರು.
ಕಾರ್ಮಿಕರ ಭದ್ರತೆ, ಅಪಾಯಕಾರಿ ಲೇಬರ್ ಕೋಡ್ ವಿರುದ್ಧ ರಕ್ಷಣಾತ್ಮಕ ಕ್ರಮಗಳು, ಜಿಲ್ಲೆಯಲ್ಲಿನ ಸರ್ಕಾರಿ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಯಾವುದೇ ಪ್ರಮುಖ ವಿಷಯಗಳಿಗೆ ಬಜೆಟ್ನಲ್ಲಿ ಪ್ರಸ್ತಾಪವಿಲ್ಲ. ಕರಾವಳಿಯ ರೈತರ ಬೆಳೆಗಳಿಗೆ ಭದ್ರತೆ ನೀಡುವ ಕ್ರಮಗಳೂ ಕಾಣುತ್ತಿಲ್ಲ. ಮಹಿಳೆಯರ ರಕ್ಷಣೆಗೆ ಕಠಿಣ ಕ್ರಮಗಳೂ ಇಲ್ಲ ಎಂದು ಅವರು ಟೀಕಿಸಿದರು.
ಸಂಪೂರ್ಣವಾಗಿ ಜನವಿರೋಧಿ ಸ್ವರೂಪದ ಬಜೆಟ್ ಇದಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





