ದೇಶದಲ್ಲಿ ನಡೆಯುತ್ತಿರುವ ಮತ ಕಳ್ಳತನದ ಕುರಿತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಾಕ್ಷಿ ಸಮೇತವಾಗಿ ಮಹತ್ವದ ಬಹಿರಂಗಪಡಿಸಿದ್ದು, ಇದರಿಂದ ಬಿಜೆಪಿ ಹಾಗೂ ಚುನಾವಣಾ ಆಯೋಗ ಕಂಗಾಲಾಗಿರುವುದಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರು ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಡೀ ದೇಶದಾದ್ಯಂತ ಚುನಾವಣೆಗಳಲ್ಲಿ ಕೇವಲ ಅಧಿಕಾರಕ್ಕಾಗಿ ಬಿಜೆಪಿ ನಾಯಕರಿಂದ ಮತದಾರರ ಪಟ್ಟಿಗಳಲ್ಲಿ ಅಕ್ರಮವಾಗಿ ತೊಡಗಿಸಿಕೊಂಡು ಚುನಾವಣಾ ಆಯೋಗದ ಸಹಕಾರದೊಂದಿಗೆ ಮತ ಕಳ್ಳತನ ನಡೆದಿರುವುದು ಸತ್ಯವಾಗಿದೆ. ರಾಹುಲ್ ಗಾಂಧಿಯವರು ಈ ಕುರಿತು ಸ್ಪಷ್ಟವಾದ ಸಾಕ್ಷಿಗಳನ್ನು ಹೊರತಂದಿದ್ದಾರೆ. ಇದರಿಂದ ಬಿಜೆಪಿ ನಾಯಕರಿಗೂ ಚುನಾವಣಾ ಆಯೋಗಕ್ಕೂ ತೀವ್ರ ನಾಚಿಕೆ ಉಂಟಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರಿಗೆ ತಮ್ಮ ಮೋಸದ ಮೂಲಕ ಅಧಿಕಾರಕ್ಕೆ ಬಂದಿರುವ ಅರಿವು ಇದೆ. ಜನರನ್ನು ಮೋಸಗೊಳಿಸುವ ಪ್ರಯತ್ನವನ್ನು ಇವರು ಮುಂದುವರಿಸುತ್ತಿದ್ದಾರೆ. ಆದರೆ ದೇಶದ ಜನತೆಗೆ ಈಗ ಎಲ್ಲವೂ ತಿಳಿದಿದೆ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುವರು ಎಂದು ಎಚ್ಚರಿಸಿದರು.
ಇದೇ ವೇಳೆ, ರಾಹುಲ್ ಗಾಂಧಿಯವರ ಕುಟುಂಬದ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಬಿಜೆಪಿಯ ನಾಯಕ ನಾರಾಯಣರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.





