ಕೋಲಾರ: ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ (ಕೆ.ಪಿ.ಆರ್.ಎಸ್) ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ (54) ಶನಿವಾರ ಮಧ್ಯರಾತ್ರಿ ತಾಲ್ಲೂಕಿನ ಮುದುವಾಡಿ ಕೆರೆ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತರಾದರು.
ಸೋಮವಾರ ಕೋಲಾರ ನಗರದಲ್ಲಿ ಕೆ.ಪಿ.ಆರ್.ಎಸ್ ರಾಜ್ಯ ಸಮ್ಮೇಳನ ಆರಂಭವಾಗಲಿರುವ ಕಾರಣ ಶನಿವಾರ ಬ್ಯಾನರ್, ಬಂಟಿಂಗ್ಸ್ ಕಟ್ಟಿ ಮಧ್ಯರಾತ್ರಿ 12.45ರ ಸುಮಾರಿಗೆ ಸ್ವಗ್ರಾಮ ತುರಾಂಡಹಳ್ಳಿಗೆ ತೆರಳುವಾಗ ಅವರಿದ್ದ ಇಂಡಿಕಾ ಕಾರು ನಿಯಂತ್ರಣ ತಪ್ಪಿ ಮುದುವಾಡಿ ಕೆರೆಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತದ ವಿಚಾರ ಗೊತ್ತಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್ ಶವ ಇರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಸ್ತೆಯ ಬದಿಯಲ್ಲಿ ತಡೆಗೋಡೆ ಇಲ್ಲದ ಕಾರಣ ಈ ಅವಘಡ ಸಂಭವಿಸಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಧ್ಯಾಹ್ನ 3.30 ತನಕ ನಗರದ ಪಾಲಸಂದ್ರ ಲೇಔಟ್ ಸಂಘದ ಕಛೇರಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು ಸಂಜೆ 6 ಗಂಟೆಗೆ ಸ್ವಗ್ರಾಮ ತುರಾಂಡಹಳ್ಳಿಯಲ್ಲಿ ವೆಂಕಟೇಶ್ ಅವರ ಅಂತ್ಯಕ್ರಿಯೆ ನಡೆಯಿತು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ವೆಂಕಟೇಶ್ ನಿಧನಕ್ಕೆ ಸಿಪಿಎಂ ಕೋಲಾರ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಮಾಜಿ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮೀ, ಕೆ.ಪಿ.ಆರ್.ಎಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಸೇರಿದಂತೆ ಜನಪರ ಚಳುವಳಿಯ ಮುಖಂಡರು ಅಂತಿಮ ದರ್ಶನ ಪಡೆದರು.
ಮೂರು ದಿನ ರಾಜ್ಯ ಸಮ್ಮೇಳನ ಕೋಲಾರದಲ್ಲಿ ಸೋಮವಾರ ಆರಂಭವಾಗಲಿದ್ದು, ಅದರ ಹಿಂದಿನ ದಿನ ಈ ದುರ್ಘಟನೆ ನಡೆದಿರುವುದು ಎಲ್ಲರನ್ನೂ ಆಘಾತದಲ್ಲಿ ಮುಳುಗಿಸಿದೆ. ಸಮ್ಮೇಳನದ ತಯಾರಿ ಭಾಗವಾಗಿ ಅವರು ಜಿಲ್ಲೆಯ ಮುಖಂಡರ ಜೊತೆಗೂಡಿ ತಿಂಗಳಿಂದ ಸತತವಾಗಿ ಸಿದ್ಧತೆಯಲ್ಲಿ ತೊಡಗಿದ್ದರು. ವೆಂಕಟೇಶ್ ಅವರ ನಿಧನದಿಂದ ಜಿಲ್ಲೆಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ, ರೈತರು, ಕೂಲಿಕಾರರು ಹಾಗೂ ಬಡವರ ಚಳವಳಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪಿ.ಆರ್ ಸೂರ್ಯನಾರಾಯಣ ಹೇಳಿದ್ದಾರೆ.
ವೆಂಕಟೇಶ್ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡುವ ಹಾಗೂ ಎಂತದ್ದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಾಯಕರಾಗಿದ್ದವರು. ಎರಡು ಬಾರಿ ಎಸ್ಎಫ್ಐ ನೇತೃತ್ವದ ವಿದ್ಯಾರ್ಥಿ ಚಳವಳಿಯಲ್ಲಿ ಭಾಗವಹಿಸಿದ್ದರು. 1996ರಲ್ಲಿ ಪ್ರಾಂತ ರೈತ ಸಂಘದ ಕೋಲಾರ ತಾಲ್ಲೂಕು ಸಂಘಟನಾ ಸಮ್ಮೇಳನ ನಡೆದಾಗ ಆ ಸಮ್ಮೇಳನದಲ್ಲಿ ರೈತ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ತಾಲ್ಲೂಕಿನ ರೈತ ಸಂಘದ ಮುಖಂಡರಾಗಿ ಆಯ್ಕೆಯಾಗಿದ್ದರು. 2008ರಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಎರಡು ಅವಧಿ ಪೂರೈಸಿದ್ದರು. 2023ರಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2026ರಲ್ಲಿ ಪುನರಾಯ್ಕೆಯಾಗಿದ್ದರು. ಜಿಲ್ಲೆಯ ರೈತ ಚಳವಳಿಯಲ್ಲಿ 20 ವರ್ಷಗಳಿಂದ ನಿರಂತರವಾಗಿ ಅರ್ಪಿಸಿಕೊಂಡು ಹಗಲು ರಾತ್ರಿ ದುಡಿದಿದ್ದರು.
ಜಿಲ್ಲೆಯ ವಿದ್ಯುತ್ ಹೋರಾಟ, ತರಕಾರಿ, ಟೊಮೊಟೊ, ಮಾವು ಬೆಲೆ ಕುಸಿದಾಗ ಹೋರಾಟ, ಶಾಶ್ವತ ನೀರಾವರಿ ಹೋರಾಟ, ಮನರೇಗಾ ಕೂಲಿಕಾರರ ವೇತನ ಸಮಸ್ಯೆ ಹೋರಾಟ, ಬಡವರಿಗೆ ಬ್ಯಾಂಕ್ ಸಾಲ ನೀಡಬೇಕೆನ್ನುವ ಹೋರಾಟ, ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ವೇ ರೈತ ವಿರೋಧಿ ಭೂಸ್ವಾಧೀನದ ವಿರುದ್ಧ ಹೋರಾಟ ರೂಪಿಸಿದ್ದರು. ರೇಷ್ಮೆ, ಕೋಳಿ ಸಾಕಣೆದಾರರನ್ನು ಸಂಘಟಿಸಿದ್ದರು. ಬಗುರ್ ಉಕುಂ ಸಾಗುವಳಿ ಸಕ್ರಮದ ಪ್ರಶ್ನೆ, ಪಿ.ನಂಬರ್ಗಳ ದುರಸ್ತಿ ಹಾಗೂ ಅರಣ್ಯ ಇಲಾಖೆಯವರ ರೈತರ ಮೇಲಿನ ಅಕ್ರಮಣಕಾರಿ ನೀತಿಗಳ ವಿರುದ್ಧ ಹೋರಾಟಗಳನ್ನ ಕಟ್ಟಿ ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ..?ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಬೇಡ : ಶಾಸಕ ಕೊತ್ತೂರು ಮಂಜುನಾಥ್
2007 ರಿಂದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಸಾಮಾನ್ಯ ಸದಸ್ಯನಾಗಿ ಪಕ್ಷದ ಸೈದ್ಧಾಂತಿಕ ವಿಚಾರಗಳಿಗೆ ಬದ್ಧರಾಗಿದ್ದರು. ಶಿಸ್ತು ಬದ್ಧವಾಗಿ ಕೆಲಸ ಮಾಡುತ್ತಾ ಕೋಲಾರ ತಾಲ್ಲೂಕಿನ ಪಕ್ಷದ ತಾಲ್ಲೂಕು ಸಮಿತಿ ಸದಸ್ಯರಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಬಹಳ ವೇಗವಾಗಿ ಜಿಲ್ಲಾ ಸಮಿತಿಯ ಸದಸ್ಯರಾಗಿ, ನಂತರ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಹಲವಾರು ಸಾಮೂಹಿಕ ಚಳವಳಿಯ ಜವಾಬ್ದಾರಿಗಳನ್ನು ಹೊತ್ತು ಹಗಲಿರಳು ದುಡಿಯುತ್ತಿದ್ದರು ಎಂದು ಮುಖಂಡರು ಸ್ಮರಿಸಿದ್ದಾರೆ.





