ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 50 ತಾಲೂಕಗಳ ಪೈಕಿ ತಾಳಿಕೋಟೆ ಹೊಸ ತಾಲೂಕು ಒಳಗೊಂಡು 8 ಹೊಸ ತಾಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿ 2 ವರ್ಷ ಕಳೆದರೂ ಕಚೇರಿಯ ಆರಂಭದ ಯಾವುದೇ ಮುನ್ಸೂಚನೆ ಸಿಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸ ತಾಲೂಕುಗಳಿಗೆ ಉಪನೋಂದಣಿ ಕಚೇರಿ ಸ್ಥಾಪಿಸುವುದು ಬಹು ದಿನಗಳ ಬೇಡಿಕೆಯಾಗಿದ್ದು, ಈ ಕುರಿತಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಸದನದಲ್ಲಿ ಧ್ವನಿ ಎತ್ತಿದ್ದರು. ಸರ್ಕಾರದ ಮಾನದಂಡದಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ, 05-01-2023ರ ಸರ್ಕಾರಿ ಆದೇಶದಂತೆ ತಾಳಿಕೋಟೆ ತಾಲೂಕು ಸೇರಿ ರಾಜ್ಯದ 8 ಹೊಸ ತಾಲೂಕುಗಳಿಗೆ ಉಪನೋಂದಣಿ ಕಚೇರಿ ಮಂಜೂರು ಮಾಡಲಾಗಿತ್ತು. ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎ ಜಿ ವೀಣಾ ಅವರು 2023ರ ಜೂನ್ 6ರಂದು ಈ ಆದೇಶವನ್ನು ಹೊರಡಿಸಿದ್ದರು.
ಆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ, ಬಬಲೇಶ್ವರ, ತಿಕೋಟ, ಬೆಳಗಾವಿ ಜಿಲ್ಲೆಯ ಕಾಗವಾಡ, ಕೊಪ್ಪಳ ಜಿಲ್ಲೆಯ ಕುಕನೂರು, ಕನಕಗಿರಿ, ರಾಯಚೂರು ಜಿಲ್ಲೆಯ ಸಿರಿವಾರ ಹಾಗೂ ಉಡುಪಿ ಜಿಲ್ಲೆಯ ಕಾಪು ತಾಲೂಕುಗಳಿಗೆ ಹೊಸ ಉಪನಂದಣಿ ಕಚೇರಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು.
ರಾಜ್ಯದಲ್ಲಿ ನೂತನವಾಗಿ ರಚನೆಯಾದ 50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಹೊಸ ಉಪನೋಂದಣಿ ಕಚೇರಿ ಆರಂಭಿಸಲು ಪ್ರಸ್ತಾಪಿಸಲಾಗಿತ್ತು. ಕೆಲ ತಾಲೂಕುಗಳು ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸದಿದ್ದರೂ, ಹೊಸ ತಾಲೂಕು ರಚನೆಯಾದ ಹಿನ್ನೆಲೆಯಲ್ಲಿ ಜನಸೌಲಭ್ಯ ದೃಷ್ಟಿಯಿಂದ ಕಚೇರಿ ಆರಂಭಕ್ಕೆ ಅನುಮತಿ ನೀಡುವಂತೆ ನೋಂದಣಿ ಮಹಾ ಪರೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ, ಪ್ರತಿ ಉಪನೋಂದಣಿ ಕಚೇರಿಗೆ ಉಪನೋಂದಣಿ ಅಧಿಕಾರಿ, ಪ್ರಥಮ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಹಾಗೂ ಡಿ ಗ್ರೂಪ್ ನೌಕರ ಸೇರಿ 4 ಹುದ್ದೆಗಳನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆ 2022ರ ಅಕ್ಟೋಬರ್ 20ರ ಟಿಪ್ಪಣಿಯ ಮೂಲಕ ಸಹಮತಿ ನೀಡಿತ್ತು.
ಆದರೆ ಎಲ್ಲವೂ ಕಾಗದದ ಮೇಲೆಯೇ ಉಳಿದು, ಇಂದಿಗೂ ತಾಳಿಕೋಟೆಯಲ್ಲಿ ಉಪನೋಂದಣಿ ಕಚೇರಿ ಆರಂಭವಾಗಿಲ್ಲ. ಇದರಿಂದ ತಾಲೂಕಿನ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಗ್ರಾಮಗಳು ತಾಳಿಕೋಟೆ ತಾಲೂಕಿಗೆ ಸೇರಿದ್ದು, ಜಮೀನು ನೋಂದಣಿ ಹಾಗೂ ಇತರ ದಾಖಲೆ ಸಂಬಂಧಿತ ಕೆಲಸಗಳಿಗಾಗಿ ಜನರು 30 ಕಿಲೋಮೀಟರ್ಗೂ ಹೆಚ್ಚು ದೂರ ಮುದ್ದೇಬಿಹಾಳಕ್ಕೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ, “ನನ್ನ ಅವಧಿಯಲ್ಲಿ ತಾಳಿಕೋಟೆ ತಾಲೂಕಿಗೆ ಉಪನೋಂದಣಿ ಕಚೇರಿ ಮಂಜೂರು ಮಾಡಿಸಿದ್ದೇನೆ. ಕಚೇರಿ ಆರಂಭದ ಹಂತದಲ್ಲಿ ಚುನಾವಣೆ ಬಂದ ಕಾರಣ ಪ್ರಕ್ರಿಯೆ ನಿಂತಿದೆ. ನಾನು ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ನನ್ನ ಕೆಲಸಗಳೇ ಇಂದಿಗೂ ಮಾತನಾಡುತ್ತವೆ” ಎಂದರು.
ಅಂಬೇಡ್ಕರ್ ಸೇನೆ ತಾಳಿಕೋಟಿ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, “ಮಂಜೂರಾಗಿ 2 ವರ್ಷವಾದರೂ ಕಚೇರಿ ಆರಂಭವಾಗದಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯನ್ನು ತೋರಿಸುತ್ತದೆ. ಇಂದಿನ ಶಾಸಕರಾದ ಸಿ ಎಸ್ ನಡಗೋಡ ಅವರು ಈ ವಿಚಾರದಲ್ಲಿ ಗಂಭೀರವಾಗಿ ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.

ತಾಳಿಕೋಟೆ ತಾಲೂಕು ಕೇಂದ್ರವಾಗಿದ್ದರೂ, ಹೊಸದಾಗಿ ಯಾವ ಸರ್ಕಾರಿ ಕಚೇರಿಯೂ ಕಾರ್ಯಾರಂಭ ಮಾಡದಿರುವುದು ಜನರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ವಿವಿಧ ಪ್ರಗತಿಪರ ಸಂಘಟನೆಗಳು ಹೋರಾಟದ ದಾರಿ ಹಿಡಿಯಲು ಸಿದ್ಧತೆ ನಡೆಸುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಜನಾಂದೋಲನ ಅನಿವಾರ್ಯ ಎನ್ನುವ ಮಾತು ಪ್ರಜ್ಞಾವಂತ ನಾಗರಿಕರಿಂದ ಕೇಳಿಬರುತ್ತಿದೆ.
ಇದನ್ನೂ ಓದಿ: ವಿಜಯಪುರ | ವೃತ್ತಿಪರ ಬದುಕಿನಲ್ಲಿ ಕೌಶಲ್ಯಗಳ ಪಾತ್ರ ಮಹತ್ವದ್ದು: ಡಾ. ಹಾಜರಾ ಪರ್ವೀನ್
ತಾಳಿಕೋಟೆ ತಾಲೂಕು ಸ್ಥಾನಮಾನ ಪಡೆದರೂ, ಅದಕ್ಕೆ ತಕ್ಕ ಆಡಳಿತಾತ್ಮಕ ಸೌಲಭ್ಯಗಳು ಇನ್ನೂ ಕನಸಾಗಿಯೇ ಉಳಿದಿವೆ. ಎರಡು ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿದ ಉಪನೋಂದಣಿ ಕಚೇರಿ ಕಾಗದದಲ್ಲೇ ಸೀಮಿತವಾಗಿರುವುದು ಜನಸಾಮಾನ್ಯರ ಮೇಲಿನ ನಿರ್ಲಕ್ಷ್ಯವನ್ನೇ ಪ್ರತಿಬಿಂಬಿಸುತ್ತದೆ. ಜನಸೌಲಭ್ಯಕ್ಕಾಗಿ ರೂಪಿಸಲಾದ ತಾಲೂಕು ವ್ಯವಸ್ಥೆಯ ಅರ್ಥವೇ ಕಳೆದುಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಅಗತ್ಯ ಕೆಲಸಗಳಿಗಾಗಿ ಜನರು ಇನ್ನೂ ದೂರದ ಪಟ್ಟಣಗಳಿಗೆ ಅಲೆದಾಡುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.
ಈಗಲಾದರೂ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜಕೀಯ ಲೆಕ್ಕಾಚಾರಗಳನ್ನು ಬದಿಗೊತ್ತಿ, ಮಂಜೂರಾದ ಕಚೇರಿಗಳನ್ನು ನೆಲಮಟ್ಟದಲ್ಲಿ ಕಾರ್ಯಗತಗೊಳಿಸುವತ್ತ ಗಂಭೀರ ಹೆಜ್ಜೆ ಇಡಬೇಕಿದೆ. ಇಲ್ಲವಾದಲ್ಲಿ, ತಾಳಿಕೋಟೆ ಸೇರಿದಂತೆ ಹೊಸ ತಾಲೂಕುಗಳ ಜನರ ಸಹನೆ ಮಿತಿ ಮೀರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಹೋರಾಟಗಳು ಹಾಗೂ ಜನಾಂದೋಲನಗಳು ತೀವ್ರಗೊಳ್ಳುವ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.





