ಸಮಾಜದಲ್ಲಿ ತುಂಬಿರುವ ಮೂಢನಂಬಿಕೆಯಿಂದ ಭಕ್ತರು ಹೊರಗೆ ಬರಬೇಕು, ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬೇಕೇ ಹೊರತು ದೇವರ ಹೆಸರಲ್ಲಿ ಪ್ರಾಣಿ ಬಲಿ ಸಂಸ್ಕೃತಿ ನಿಲ್ಲಿಸಬೇಕು ಕರ್ನಾಟಕದ ಹಾಲುಮತ ಗುರುಪೀಠದ ರೇವಣ್ಣಸಿದ್ದೇಶ್ವರ ಶಾಂತಮಯ ಸ್ವಾಮಿಜಿ ನುಡಿದರು.
ಹೈದರಾಬಾದ್ ಜಿಯಾಗೂಡ ನಗರಸಭೆ ಆವರಣದಲ್ಲಿ ನಡೆದ ಭಕ್ತ ಕನಕದಾಸರ 538ನೇ ಜಯಂತಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ʼಶ್ರೇಷ್ಠ ಗುರು ಭಕ್ತಿ ಭಾವದಿಂದ ಕೃಷ್ಣನನ್ನು ಒಲಿಸಿಕೊಂಡಿರುವುದು ಕನಕದಾಸರು ನೀಡಿರುವ ತತ್ವ ಸಂದೇಶವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕುʼ ಎಂದರು.
ʼಮನುಷ್ಯನಿಗೆ ದುರಾಸೆ ಇರಬಾರದು. ಶಿವಶರಣರು ಹೇಳಿದಂತೆ ನಮ್ಮ ಮಾತು ಮಾಣಿಕ್ಯದಂತಿರಬೇಕು. ಎಲ್ಲರೊಂದಿಗೆ ಸೌಹಾರ್ದತೆ ಭಾವನೆಯಿಂದ ಕೂಡಿದರೆ ಮಾನವೀಯ ಮೌಲ್ಯಗಳು ಜೀವಂತವಾಗಿರಲು ಸಾಧ್ಯವಿದೆʼ ಎಂದು ನುಡಿದರು.
ನಗರದ ಟ್ರಾಫಿಕ್ ಡಿಸಿಪಿ ಕನ್ನಡಿಗರಾದ ರಾಹುಲ ಹೆಗಡೆ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಕನಕದಾಸರು ತಮ್ಮ ಕಾವ್ಯ ಮತ್ತು ಕೀರ್ತನೆಗಳ ಮೂಲಕ ಅವರು ಜನರಿಗೆ ಸತ್ಯ, ನೀತಿ ಮತ್ತು ಮಾನವೀಯತೆಯ ಮಾರ್ಗವನ್ನು ತೋರಿಸಿದರು. ಸಮಾಜದಲ್ಲಿ ಬೇರೂರಿದ ಮೌಢ್ಯ ಕಿತ್ತೆಸೆಯಲು ಪ್ರಯತ್ನಿಸಿದ ಕನಕದಾಸರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆʼ ಎಂದು ಹೇಳಿದರು.
ʼಕನಕದಾಸರು ನಮಗೆ ಎರಡು ಸರಳ ಸಂದೇಶ ನೀಡಿದ್ದಾರೆ. ನಿಧಿಯಿಂದ ಧರ್ಮ, ಧರ್ಮದಿಂದ ನಿಧಿ. ನಮ್ಮ ಸಂಪತ್ತು ಧರ್ಮದ ಮಾರ್ಗದಲ್ಲಿ ಉಪಯೋಗವಾದಾಗ ಮಾತ್ರ ಮೌಲ್ಯವಿರುತ್ತದೆ. ಇನ್ನೊಂದು, ಮನುಜ ಹೇಳುವ ಮಾತು ಮಣಿಯಬೇಕು. ಅಂದರೆ ಒಳ್ಳೆಯ ಮಾತು, ವಿನಯ, ಮಾನವೀಯತೆ ಸದಾ ಮುಖ್ಯ. ಕನಕದಾಸರು ಎಲ್ಲರನ್ನು ಸಮಾನವಾಗಿ ನೋಡುವ ಗುಣವನ್ನು ಸಾರಿದರು. ಅವರ ಆದರ್ಶಗಳು ನಮ್ಮ ಸಮಾಜಕ್ಕೆ ಪ್ರಸ್ತುತ ಎನಿಸುತ್ತವೆ. ಜಾತಿ, ಮತ, ಭೇದ ಎನ್ನದೆ ಎಲ್ಲರೂ ಮನುಷ್ಯತ್ವದ ನೆಲೆಯಲ್ಲಿ ಬದುಕಬೇಕು. ನಾವು ಬೇರೆ ರಾಜ್ಯದಲ್ಲಿ ವಾಸವಿದ್ದರೂ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಭಾಷೆ, ಪರಂಪರೆ ಎಂದಿಗೂ ನಮ್ಮ ಹೃದಯದಿಂದ ದೂರವಾಗುವುದಿಲ್ಲʼ ಎಂದು ಹೇಳಿದರು.
ಕನಕ ಶ್ರೀ ಪ್ರಶಸ್ತಿ ಪ್ರದಾನ :
ಹೈದರಾಬಾದನಲ್ಲಿ ಸುಮಾರು 40 ವರ್ಷದಿಂದ ನಿರಂತರವಾಗಿ ಭಕ್ತ ಕನಕದಾಸ ಅವರ ಜಯಂತಿಯನ್ನು ಯಶಸ್ವಿಯಾಗಿ ನೆರವೇರಿಸಿಕೊಂಡು ಬರುತ್ತಿರುವ ಕುರುಬ ಸಮಾಜದ ಹಿರಿಯರಾದ ವೈಜಿನಾಥಪ್ಪ ಹಿರೋಡೆ ಹಾಗೂ ಜಗನಾಥ (ಟೇಲರ್ ) ಕುಂಟಬಿರ ಅವರಿಗೆ ಕನಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ತುಮಟುಂಟ ಅರುಣಕುಮಾರ, ಭಾಲ್ಕಿಯ ಬಾಲಾಜಿ ಜಬಾಡೆ, ನಾಗರಾಜ ಸೋರಾಳೆ, ದರಪಲ್ಲಿ ನರಸಿಂಹ, ಧರ್ಮೇಂದ್ರ ಪೂಜಾರಿ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಪ್ರಮುಖರಾದ ವೈಜಿನಾಥಪ್ಪ ಹಿರೋಡೆ, ಜಗನಾಥ ಕುಂಟಬಿರ್, ರಾಜಕುಮಾರ ಮನ್ನಳಿ, ಬಸವರಾಜ ಲಾರಾ, ಅಮರನಾಥ ಹಿರೋಡೆ, ಶಿವಾಜಿ ಕುಂಟಬಿರ್, ಪ್ರಭು ಪೂಜಾರಿ ಉಪಸ್ಥಿತರಿದರು. ವೈಜಿನಾಥಪ್ಪ ಹಿರೋಡೆ ಸ್ವಾಗತಿಸಿದರು. ಹಣಮಂತ ಹಿರೋಡೆ ನಿರೂಪಿಸಿದರು.





