ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಮರು ಪ್ರತಿಷ್ಠಾಪನೆ ವಿವಾದ ಬಗೆಹರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಹುಲ್ ಖಂದಾರೆ ಆರೋಪಿಸಿದರು.
ಬೀದರ್ನಲ್ಲಿ ದಲಿತ ಸಂಘಟನೆಗಳ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕೌಡಗಾಂವ್ ಗ್ರಾಮದಲ್ಲಿ ನಿರ್ಮಿಸಿದ ಅಂಬೇಡ್ಕರ್ ಭಾವಚಿತ್ರ ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಒಂದು ವೇಳೆ ತೆರವು ಮಾಡಬೇಕಿದ್ದರೆ ಊರಲ್ಲಿಯ ಎಲ್ಲ ಧಾರ್ಮಿಕ ಅನಧಿಕೃತ ಕಟ್ಟಡಗಳು ತೆರವು ಮಾಡುವಂತೆ ಗ್ರಾಮದ ಅಂಬೇಡ್ಕರ್ ಅನುಯಾಯಿಗಳು ಪಟ್ಟು ಹಿಡಿದಿದ್ದೇವೆ. ಆದರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸರು, ಅಧಿಕಾರಿಗಳು ಗ್ರಾಮದ ಶೋಷಿತರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಎರಡು ಕೋಮುಗಳ ಮಧ್ಯೆ ನಡೆದ ಇತ್ತೀಚಿನ ಘಟನೆಗಳಿಂದ ಗ್ರಾಮದ ಸೌಹಾರ್ದ ವಾತಾವರಣ ಹಾಳಾಗಿದೆ. ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಆದರೂ ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲಿಲ್ಲ” ಎಂದು ದೂರಿದರು.
“ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ತತ್ವದಲ್ಲಿ ನಡೆಯುವ ಜನರ ಮೇಲೆ, ದೌರ್ಜನ್ಯ, ಅನ್ಯಾಯ ಎಸಗುವುದು ನಿರಂತರವಾಗಿ ನಡೆಯುತ್ತಿದೆ. ಇದೀಗ ಕೌಡಗಾಂವ ಗ್ರಾಮದ ಸಾಮಾನ್ಯ ಶೋಷಿತರಿಗೆ ವಿಶೇಷ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಶೋಷಿತ ಜನಾಂಗಕ್ಕೆ ಅನ್ಯಾಯ ಎಸಗುತ್ತಿದೆ” ಎಂದರು.
“ಅಂಬೇಡ್ಕರ್ ಕಟ್ಟೆ ಅಳವಡಿಕೆ ವಿವಾದ ಮಧ್ಯೆಯೇ ಫೆ.5ರಂದು ರಾತ್ರಿ ಗ್ರಾಮದ ಕೆಲ ಯುವಕರು ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತ ಗ್ರಾಮದ ಅಂಬೇಡ್ಕರ್ ಕಟ್ಟೆಯ ಪಕ್ಕದಲ್ಲಿ ಬಸವೇಶ್ವರ ಕಟ್ಟೆ ನಿರ್ಮಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ ಮೌನವಹಿಸಿ ಕುಮ್ಮಕ್ಕು ನೀಡಿದ ತಪ್ಪಿಸ್ಥ ಪೊಲೀಸರನ್ನು ಅಮಾನತುಗೊಳಿಸಬೇಕು” ದಲಿತ ವಿದ್ಯಾರ್ಥಿ ಮುಖಂಡ ಅಧ್ಯಕ್ಷ ಪ್ರದೀಪ ನಾಟೇಕರ್ ಆಗ್ರಹಿಸಿದರು.
ಮುಖಂಡ ಮಾರುತಿ ಕಂಟಿ ಮಾತನಾಡಿ, “ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸೌಹಾರ್ದ ಸಭೆ ನಡೆಸಿ ವಾರದೊಳಗೆ ಸಮಸ್ಯೆ ಕೊನೆಗಾಣಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಆಧುನಿಕ ಅನುಭವ ಮಂಟಪಕ್ಕೆ 50 ಕೋಟಿ ರೂ. ಬಿಡುಗಡೆ : ಸಚಿವ ಈಶ್ವರ ಖಂಡ್ರೆ
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ತುಕಾರಾಮ ಗೌರೆ, ನರಸಿಂಗ ಸಾಮ್ರಾಟ, ಸುಭಾಷ ಲಾಧಾ, ಸಂತೋಷ ಶಿಂಧೆ, ಹಣಮಂತ ಮಟ್ಟೆ, ರಾಜಕುಮಾರ ಶಿಂಧೆ, ಗೌತಮ ಬಗದಲ್ಕರ್, ಪ್ರಕಾಶ ರಾವಣ, ಸತೀಶ ವಗ್ಗೆ, ಅಂಬರೀಷ ಕುದುರೆ, ಶಿವಕುಮಾರ ಫುಲೆ, ಶಿವರಾಜ್ ವಗ್ಗೆ, ಅಖಿಲೇಶ್ ಸಾಗರ್, ರಾಹುಲ್ ಮೇತ್ರಿ, ರಜನಿಕಾಂತ್ ವಗ್ಗೆ ಇದ್ದರು.




