ಮೈಸೂರು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿಂದು ಕನ್ನಡಾಂಬೆ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ, ಕವಿ ಡಾ. ಜಯಪ್ಪ ಹೊನ್ನಾಳಿ ‘ಕನ್ನಡ ನೆಲ, ಜಲ, ಭಾಷೆಯ ಉಳಿವಿಗೆ ಕನ್ನಡಪರ ಸಂಘಟನೆಗಳ ಪಾತ್ರ ಮಹತ್ವದ್ದು. ಅವರು ಕನ್ನಡದ ಸೈನಿಕರಾಗಿ ಕೆಲಸ ಮಾಡುತ್ತಿರುವುದರಿಂದಲೇ ಇಂದು ನಮ್ಮ ಕನ್ನಡ ಭಾಷೆ ಉಳಿಯಲು’ ಸಾಧ್ಯವಾಗಿದೆ ಎಂದು ಹೇಳಿದರು.
ಕನ್ನಡಪರ ಸಂಘಟನೆಗಳ ತ್ಯಾಗ ದೊಡ್ಡದು, ಅವರ ಕನ್ನಡಪರ ನಿರಂತರ ಹೋರಾಟದಿಂದಲೇ ಇಂದು ಕನ್ನಡ ಉಳಿಯಲು ಸಾಧ್ಯವಾಗಿದೆ. ಕನ್ನಡಪರ ಸಂಘಟನೆಗಳ ಎಲ್ಲಾ ಹೋರಾಟಗಳಿಗೂ ಕನ್ನಡಾಭಿಮಾನಿಗಳು ಬೆಂಬಲ ನೀಡುವ ಮೂಲಕ ಅವರನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕನ್ನಡದ ಕಂದ ಮೂಗೂರು ನಂಜುಂಡಸ್ವಾಮಿ ಮಾತನಾಡಿ, “ಕಳೆದ 40 ವರ್ಷಗಳಿಂದ ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದು, ನನ್ನ ಮೇಲೆ ನೂರಾರು ಕೇಸುಗಳನ್ನು ಹಾಕಲಾಗಿದೆ. ಪ್ರತಿನಿತ್ಯ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಇಂದು ಕನ್ನಡದಪರ ಹೋರಾಟಗಾರರ ನೋವು ನಲಿವುಗಳನ್ನು ಯಾರೂ ಕೇಳುತ್ತಿಲ್ಲ, ಇದರಿಂದ ಕನ್ನಡಪರ ಹೋರಾಟಗಳಿಗೆ ಯುವ ಸಮೂಹ ಬರುತ್ತಿಲ್ಲ, ಆದಾಗ್ಯೂ ನಾವು ಈ ನಾಡು ಕಟ್ಟುವ ಕೆಲಸ ಮಾಡುತ್ತಿದ್ದೇವೆ” ಎಂದರು.
ಈ ನಿಟ್ಟಿನಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ನಿರಂತರವಾಗಿ ಒಂದಲ್ಲಾ ಒಂದು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುತ್ತಾ, ಕನ್ನಡಿಗರ ರಕ್ಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಕೈಗೆತ್ತಿಕೊಂಡ ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎನ್ನುವ ಹೋರಾಟ ಸಾಕಷ್ಟು ಗಮನ ಸೆಳೆಯಿತು. ನಾವು ಸದಾಕಾಲ ಕನ್ನಡಾಂಬೆ ರಕ್ಷಣಾ ವೇದಿಕೆಯ ಎಲ್ಲಾ ಹೋರಾಟಗಳಿಗೂ ಬೆಂಬಲ ನೀಡುತ್ತೇವೆ ಎಂದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಎಂ. ಚಂದ್ರಶೇಖರ್ ಮಾತನಾಡಿ, ಕನ್ನಡಪರ ಹೋರಾಟ ಪ್ರಾರಂಭವಾಗಿದ್ದೇ ಮೈಸೂರಿನಲ್ಲಿ, ಇಂತಹ ಸಾಂಸ್ಕೃತಿಕ ನೆಲದಲ್ಲಿ ಹಲವಾರು ಮಹನೀಯರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಇಂದಿನ ದಿನಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಕನ್ನಡಾಂಬೆ ರಕ್ಷಣಾ ವೇದಿಕೆ ಹೋರಾಟ ದೊಡ್ಡದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನ.20 ರಂದು ಏಕವ್ಯಕ್ತಿ ಅಭಿನಯದ ‘ಕೌದಿ’ ನಾಟಕ ಪ್ರದರ್ಶನ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೈಸೂರು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕರವೇ ರಾಜ್ಯ ಖಜಾಂಚಿ ನಂಜುಂಡ ಮತ್ತು ಕರವೇ ಜಿಲ್ಲಾ ಗೌರವ ಕಾರ್ಯದರ್ಶಿ ಸಿಂಧುವಳ್ಳಿ ಶಿವಕುಮಾರ್ ಅವರನ್ನು ಗೌರವಿಸಲಾಯಿತು.
ಈ ವಿಶೇಷ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪುರಾತತ್ವ ಇಲಾಖೆಯ ನಿರ್ಲಕ್ಷ್ಯ; ಕೋಟೆ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯ ಆರೋಪ
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಹೊನ್ನೇಗೌಡ, ಶಿವಣ್ಣ, ಶಿವಕುಮಾರ್, ಕಿರಣ, ಹರೀಶ್, ವತ್ಸಲ, ಸೌಭಾಗ್ಯ, ಲಕ್ಷ್ಮಿ, ಭಾಗ್ಯಮ್ಮ, ಲೋಕೇಶ್, ವಿಷ್ಣು ಸೇರಿದಂತೆ ಇನ್ನಿತರರು ಇದ್ದರು.





