ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು ಮತ್ತು ಅಹಸ್ಯವಾಗಿ ಹೂತು ಹಾಕಲಾದ ಪ್ರಕರಣಗಳ ತನಿಖೆಯನ್ನು ಎಸ್ಐಟಿ ಮುಂದುವರೆಸಿದೆ. ಸೌಜನ್ಯ ಪ್ರಕರಣದ ಹೊರಾಟದ ನೇತೃತ್ವವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ. ಹಾಗೂ ವಿಠಲ್ ಗೌಡ ಅವರಿಗೆ ನೋಟಿಸ್ ನೀಡಿದ್ದು, ಅಕ್ಟೋಬರ್ 27ರಂದು ವಿವಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸೌಜನ್ಯ ಪರ ಹೋರಾಟಗಾರರು ಸೋಮವಾರ (ಅ.27) ಬೆಳ್ತಂಗಡಿ ತಾಲೂಕು ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದರೆ, ಅದೇ ದಿನ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ಆದಾಗ್ಯೂ, ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಎಸ್ಐಟಿ ನೀಡಿರುವ ನೋಟಿಸ್ನಲ್ಲಿ, “ವಿಚಾರಣೆಗೆ ತಪ್ಪಿಸಿಕೊಂಡಲ್ಲಿ, ಬಿಎನ್ಎಸ್ ಸೆಕ್ಷನ್ 35(3)ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸೂಚಿಸಿರುವುದಾಗಿ ವರದಿಯಾಗಿದೆ.
ನೋಟಿಸ್ ಮತ್ತು ಅಂದಿನ ಪ್ರತಿಭಟನೆ ಕುರಿತು ಮಾತನಾಡಿರುಚ ಹೋರಾಟಗಾರ ಜಯಂತ್ ಟಿ, “ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಆಯೋಜಿಸಿದ್ದೇವೆ. ಅದೇ ಸಮಯದಲ್ಲಿವಿಚಾರಣೆಗೆ ಹಾಜರಾಗಬೇಕೆಂದು ಎಸ್ಐಟಿ ನೋಟಿಸ್ ನೀಡಿದೆ. ಇದು ಸರಿಯಲ್ಲ. ಏನೇ ಆದರೂ ನಮ್ಮ ಪ್ರತಿಭಟನೆ ನಡೆಯುತ್ತದೆ. ಪ್ರತಿಭಟನೆ ಮುಗಿಸಿ 12 ಗಂಟೆ ಬಳಿಕ ವಿಚಾರಣೆಗೆ ಹಾಜರಾಗಲು ಸಮಯ ಕೇಳುತ್ತೇವೆ” ಎಂದಿದ್ದಾರೆ.
ಇನ್ನು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿರುವ ‘ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡಿದ್ದಾರೆ’ ಎಂಬ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಿಮರೋಡಿ ಅವರು ತಮ್ಮ ವಿರುದ್ಧ ‘ಮಾರಕಾಸ್ತ್ರ ಕಾಯ್ದೆ’ಯಡಿ ಬೆಳ್ತಂಡಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಅನ್ನು ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಪೀಠವು, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ.




