ಬಿಜೆಪಿಯವರು ಜನರ ನಿಜವಾದ ಸಮಸ್ಯೆಗಳ ಬಗ್ಗೆ ಹಾಗೂ ಅವರ ಅಭಿವೃದ್ದಿ ಯೋಜನೆಗಳ ಬಗ್ಗೆ ಮಾತನಾಡದೆ ಕೇವಲ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಮತ ಕೇಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾನುವಾರ ಅಫಜಲಪುರ ಪಟ್ಟಣದಲ್ಲಿ ಲೋಕಸಭಾ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಫಜಲಪುರ ತಾಲೂಕಿನ ಜನ ಪ್ರಜ್ಞಾವಂತರು, ಓಲೈಕೆಯ ರಾಜಕಾರಣ ಮಾಡುವವರು ಯಾರು, ಅಭಿವೃದ್ಧಿಪರ ಆಡಳಿತ ನೀಡುವವರು ಯಾರು ಎಂಬುದರ ಸ್ಪಷ್ಟ ಅರಿವು ಅವರಿಗಿದೆ.ಮುಂದಿನ ಐದು ವರ್ಷದ ಸುಭದ್ರ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮತನೀಡಿ” ಎಂದು ಮನವಿ ಮಾಡಿದರು.
“ನಮ್ಮ ಸರ್ಕಾರ ಜನರ ಅಭಿವೃದ್ದಿಗೆ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗೆ ಕ್ರಮ ಕೈಗೊಂಡಿದೆ. ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳಿಂದಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದ ಈ ಎಲ್ಲ ಯೋಜನೆಗಳನ್ನು ಬಿಜೆಪಿಯವರು ಟೀಕಿಸುತ್ತಾರೆ. ನಾವು ನಿಮ್ಮ ತೆರಿಗೆಯ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಿಮಗೆ ಮತ್ತೆ ವಾಪಸ್ ನೀಡುತ್ತಿದ್ದೇವೆ. ಇದು ಬಿಜೆಪಿಯವರಿಗೆ ಸಮಸ್ಯೆಯಾಗಿದೆ” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
“ಜಿಲ್ಲೆಗೆ ಸಂಸದ ಉಮೇಶ ಜಾಧವ ಅವರ ಕೊಡುಗೆ ಶೂನ್ಯವಾಗಿದೆ. ಜಿಲ್ಲೆಯಲ್ಲಿ ತೀವ್ರಬರವಿದೆ. ರೈತರ 40 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬರ ಪರಿಹಾರವಾಗಿ ₹18,171 ಕೋಟಿ ಅನುದಾನ ಇನ್ನೂ ಬಂದಿಲ್ಲ. ಬರಗಾಲ ಇರುವುದರಿಂದಾಗಿ ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳನ್ನು 100 ರಿಂದ 150 ದಿನಗಳಿಗೆ ಏರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಆದರೆ ಸಂಸದ ಉಮೇಶ ಜಾಧವ ಈ ಬಗ್ಗೆ ಚಕಾರ ಎತ್ತುವುದಿಲ್ಲ. ಬದಲಿಗೆ ಮಾಧ್ಯಮಗಳ ಮುಂದೆ ನನ್ನ ಬಗ್ಗೆ ಟೀಕೆ ಮಾಡಲು ಅರ್ಧಗಂಟೆ ಮಾತನಾಡುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಪೊಲೀಸ್ ಠಾಣೆಯಲ್ಲೇ ಪತ್ರಕರ್ತನಿಗೆ ಥಳಿಸಿದ ಬಿಜೆಪಿ ಮಂತ್ರಿಯ ಮಗ
ಈ ಬಾರಿಯ ಚುನಾವಣೆ ದೇಶದ ಮುಂದಿನ ಭವಿಷ್ಯ ನಿರ್ಧರಿಸುವ, ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಲಿದೆ, ಜನಸಾಮಾನ್ಯರ ಪರವಾಗಿ ನಿಲ್ಲುವ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮತ ನೀಡಿ” ಎಂದು ಕೋರಿದರು.





