ಮೈಸೂರು ಜಿಲ್ಲೆ, ಸರಗೂರು ತಾಲ್ಲೂಕಿನ, ಬಡಗಲಪುರ ಗ್ರಾಮದಲ್ಲಿ ಹತ್ತಿ ಕೊಯ್ಲು ಮಾಡುತಿದ್ದ ನಂಜುಂಡಸ್ವಾಮಿಯವರ ಮಗ ಮಹಾದೇವ ಗೌಡ (45) ನ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದೆ.
ಇತ್ತೀಚಿಗೆ ಗ್ರಾಮದ ಸುತ್ತಮುತ್ತ ಹುಲಿಯ ಉಪಟಳ ಹೆಚ್ಚಿದ್ದು, ಸತತ ಎರಡು ತಿಂಗಳಿನಿಂದ ಗ್ರಾಮಸ್ಥರು ಭಯಗೊಂಡಿದ್ದರು. ಅಲ್ಲಲ್ಲಿ ಕಂಡು ಬರುತಿದ್ದು ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಸಾಕಾನೆ ಮೂಲಕ
ಸಿಬ್ಬಂದಿಗಳು ಕೂಂಬಿಂಗ್ ನಡೆಸುತ್ತಿರುವ ವೇಳೆ ಗಾಬರಿಗೊಂಡ ಹುಲಿ ಜಮೀನಿನಲ್ಲಿ ಹತ್ತಿ ಬಿಡಿಸುತಿದ್ದ ಮಹಾದೇವ ಗೌಡನ ಮೇಲೆ ಎರಗಿದೆ.
ಮುಖದ ಬಲಭಾಗ, ಮೂಗು, ಕುತ್ತಿಗೆ, ಕಣ್ಣುಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಈ ದುರ್ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಸ್ಥಳೀಯರಾದ ವೆಂಕಟೇಶ್ ಈದಿನ.ಕಾಮ್ ಜೊತೆ ಮಾತನಾಡಿ ಅರಣ್ಯ ಇಲಾಖೆಯವರ ನಿರ್ಲಕ್ಷ್ಯಕ್ಕೆ ಯುವಕನ ಬದುಕು ಹಾಳಾಗಿದೆ. ಎರಡು ತಿಂಗಳಿಂದ ಹುಲಿ ಕಾಣಿಸಿಕೊಂಡರು ಕಾರ್ಯಚಾರಣೆ ನಡೆಸಲಿಲ್ಲ, ಹುಲಿ ಹಿಡಿಯುವ ಪ್ರಯತ್ನ ಮಾಡಲಿಲ್ಲ. ಮುಂಚೆಯೇ ಎಚ್ಚತ್ತು ಕೊಂಬಿಂಗ್ ನಡೆಸಿದ್ದರೆ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ.
ಕಾಡಂಚಿನ ಗ್ರಾಮಗಳಲ್ಲಿ ಇತ್ತೀಚಿಗೆ ಹುಲಿ, ಚಿರತೆ, ಆನೆ ಉಪಟಳ ಹೆಚ್ಚಿದೆ. ಅರಣ್ಯ ಇಲಾಖೆ, ಜಿಲ್ಲಾಡಳಿತ ಕ್ರಮ ವಹಿಸುತಿಲ್ಲ. ರೈತರು ಜಮೀನು ಕಡೆಗೆ ತೆರಳಲು ಹಿಂಜರೆಯುತ್ತಿದ್ದಾರೆ. ಹೊರಗೆ ಹೋಗಲು ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ‘ನಮ್ಮೊಳಗಿನ ಬುದ್ಧ ಬೆಳಕನ್ನು ಹುಡುಕಬೇಕು, ಅಂಬೇಡ್ಕರರಂತೆ ಜ್ಞಾನದಾಹಿಗಳಾಗಬೇಕು’; ವಿಶ್ವಶಾಂತಿ ಸಾರಿದ ಬೌದ್ಧ ಮಹಾ ಸಮ್ಮೇಳನ
ಸ್ಥಳಕ್ಕೆ ಗುಂಡ್ರೆ ಅರಣ್ಯ ವಲಯದ ಆರ್ ಎಫ್ ಓ ಅಮೃತೇಶ್, ಹೆಡಿಯಾಲ ಆರ್ ಎಫ್ ಓ ಮುನಿರಾಜು ಹಾಗೂ ಎ ಸಿ ಎಫ್ ಭೇಟಿ ನೀಡಿದ್ದಾರೆ. ಆದರೇ, ಇಂತಹ ಘಟನೆ ನಡೆದ ಮೇಲೆ ಅಧಿಕಾರಿಗಳು ಬಂದು ಏನು ಪ್ರಯೋಜನ, ಅವರ ಮನೆಗೆ ಯಾರು ದಿಕ್ಕು, ಗ್ರಾಮದಲ್ಲಿ ಇನ್ನೆಷ್ಟು ಜನ ಪ್ರಾಣಿಗಳಿಗೆ ಆಹಾರವಾಗಬೇಕು ಎಂದು ಕಿಡಿಕಾರಿದರು.





