ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್ ತಿಂಗಳ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ಶೇ.100ರಷ್ಟು ಸಾಧನೆಯೊಂದಿಗೆ ರಾಜ್ಯದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-2011 ಮತ್ತು ತಿದ್ದುಪಡಿ ಅಧಿನಿಯಮ-2014ರಂತೆ 100ಕ್ಕೂ ಹೆಚ್ಚಿನ ಇಲಾಖೆಗಳ 1,181 ಸೇವೆಗಳನ್ನು ಕಾಲಮಿತಿಯಲ್ಲಿ ನಾಗರಿಕರಿಗೆ ನೀಡಲಾಗುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ಅರ್ಜಿ ವಿಲೇವಾರಿ ಪ್ರಮಾಣ ಶೇ.82.54ರಷ್ಟು ಇದ್ದರೆ, ಪ್ರಸ್ತುತ ನವೆಂಬರ್ ತಿಂಗಳಲ್ಲಿ ಸಲ್ಲಿಕೆಯಾದ 1,02,002 ಅರ್ಜಿಗಳಲ್ಲಿ 1,07,011 ಅರ್ಜಿ ವಿಲೇವಾರಿ ಮಾಡುವ ಮೂಲಕ ಇದರ ಪ್ರಮಾಣ ಶೇ.100.34ಕ್ಕೆ ಹೆಚ್ಚಿಸಿ ಆಡಳಿತಕ್ಕೆ ವೇಗ ನೀಡಲಾಗಿದೆ.
ಒಟ್ಟಾರೆ 2023ರ ಜೂನ್ ನಿಂದ ನವೆಂಬರ್ ವರೆಗೆ ವಿವಿಧ ಇಲಾಖೆಯಡಿ ಸ್ವೀಕೃತ 7,23,259 ಅರ್ಜಿಗಳಲ್ಲಿ 7,25,716 ಅರ್ಜಿ ವಿಲೇವಾರಿಗೊಳಿಸಿದೆ. ಇದರಲ್ಲಿ ಕಂದಾಯ ಇಲಾಖೆಯು ಬಹಪಾಲು ಅಂದರೆ 5,89,786 ಅರ್ಜಿಗಳಲ್ಲಿ 5,93,992 ಅರ್ಜಿ ವಿಲೇವಾರಿ ಮಾಡುವ ಮೂಲಕ ವಿಲೇವಾರಿ ಪ್ರಮಾಣವನ್ನು ಶೇ.79.72 ರಿಂದ ಶೇ.100.71ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ 11 ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ 371(ಜೆ), ಜಾತಿ-ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ವಿವಿಧ ಪಿಂಚಣಿಗಳ ಅರ್ಜಿ ವಿಲೇವಾರಿ ಮಾಡಲಾಗುತ್ತಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ ಸಲ್ಲಿಕೆಯಾದ 5,30,968 ಅರ್ಜಿಗಳ ಪೈಕಿ ಇದೂವರೆಗೆ 5,14,363 ಅರ್ಜಿ ವಿಲೇ ಮಾಡಿ ಶೇ.96.87 ಸರಾಸರಿ ಪ್ರಗತಿ ಸಾಧಿಸಲಾಗಿರುತ್ತದೆ.
ಒಂದು ವರ್ಷ ಮೀರಿದ ಪ್ರಕರಣ ಬಾಕಿ ಇಲ್ಲ:
ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರ್ ನೇತೃತ್ವದ ಕಂದಾಯ ನ್ಯಾಯಾಲಯಗಳಲ್ಲಿ ಇಂದಿನ ದಿನಕ್ಕೆ ಒಂದು ವರ್ಷ ಮೀರಿದ ಯಾವುದೇ ಪ್ರಕರಣ ಬಾಕಿ ಇಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನಂತೆ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕಂದಾಯ ಇಲಾಖೆಯ ಪ್ರಗತಿ ಚಿತ್ರಣ ವಿವರಿಸಿದ್ದಾರೆ.





