ಮೀಸಲಾತಿ ಕುರಿತು ಈ ದೇಶದಲ್ಲಿ ಬಹಳ ದೊಡ್ಡ ತಪ್ಪು ಅಭಿಪ್ರಾಯವಿದೆ. ಸಮಾಜದಲ್ಲಿ ಮಾತ್ರವಲ್ಲ ಸರ್ಕಾರದಲ್ಲೂ ಬೇರೆ ಬೇರೆ ರೀತಿಯ ಅಭಿವ್ಯಕ್ತಿ ಮೀಸಲಾತಿ ಕುರಿತಾಗಿದೆ. ಈ ದೇಶದಲ್ಲಿ ಎರಡು ಸಾವಿರ ವರ್ಷಗಳಿಂದ ಮೀಸಲಾತಿ ಇದೆ. ದೇವಸ್ಥಾನದ ಗರ್ಭಗುಡಿಯಿಂದಲೂ ಬಾಗಿಲ ವರೆಗೂ ಇದು ಅನ್ವಯಿಸುತ್ತಾ ಬಂದಿದೆ ಎಂದು ಜಾಗೃತ ಕರ್ನಾಟಕದ ಡಾ. ಎಚ್. ವಿ. ವಾಸು ತಿಳಿಸಿದರು
ನಗರದ ರೋಟರಿ ಭವನದಲ್ಲಿ ಜನಸ್ಪಂದನ ಟ್ರಸ್ಟ್ ಆಯೋಜಿಸಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ 2025 ಅವಲೋಕನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,ವೈಕಂ ಸತ್ಯಾಗ್ರಹ ನಡೆದದ್ದು, ಈಳವ ಸಮುದಾಯಕ್ಕೆ ಶಿವನ ದೇವಸ್ಥಾನದ ರಸ್ತೆಗೆ ಪ್ರವೇಶಾವಕಾಶ ನೀಡಬೇಕು ಎಂದು, ದೇವಸ್ಥಾನದ ಪೂಜೆಗೆ ರೋಸ್ಟರ್ ಇರಲ್ಲ, ಎಕ್ಸಾಮ್ ಇರೋದಿಲ್ಲ ಇದು ಹುಟ್ಟಿನ ಆಧಾರದ ಮೇಲೆ ತೀರ್ಮಾನವಾಗುತ್ತಿದೆ. ಹುಟ್ಟಿದ ಕಾರಣಕ್ಕೆ ಅಲಿಖಿತ ನಿಯಮವಾಗಿ ಮೀಸಲಾತಿ ಜಾರಿಯಾಗಿದೆ. ಪಟೇಲ, ಕುಲಕರ್ಣಿ ಮೀಸಲಾತಿ ಇತ್ತು. ಈ ರೀತಿಯ ಮೀಸಲಾತಿ ಕಾರಣಕ್ಕೆ ಆ ಜಾತಿಗಳಿಗೆ ಬಂಡವಾಳ ಸಂಚಯವಾಗಿರುತ್ತೆ ಎಂದು ಹೇಳಿದರು.
ಒಂದು ಶಾಲೆಯಲ್ಲಿ ಎಲ್ಲಾ ಸಮಾಜದ ಮಕ್ಕಳು ಕಲಿಯದೇ ಇದ್ದರು ಅದು ಹಿಂದುಳಿದ ಶಿಕ್ಷಣದ ಸಂಕೇತ ಎಂದು ಕರೆಸಿಕೊಳ್ಳುತ್ತದೆ. ಎಲ್ಲ ಸಮುದಾಯಕ್ಕೆ ಸೇರಿದ ಮಕ್ಕಳು ಶಾಲೆಗೆ ಬಂದರೆ ಆ ಶಾಲೆ ಸಮೃದ್ಧವಾಗುತ್ತೆ. ಆಗ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ತಿಳುಳಿಕೆಯೂ ಹೆಚ್ಚಾಗುತ್ತೆ. ಆದರೆ ಇದಕ್ಕೆಲ್ಲ ಕೊಳ್ಳಿ ಇಟ್ಟದ್ದು ಮನುಸ್ಮೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಉತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸದವರನ್ನು ನೀವು ಶಿಕ್ಷರನ್ನಾಗಿ ನೀಮಿಸುತ್ತಿದ್ದೀರ. ಕುಂಬಾರರಂತಹ ಕೌಶಲ್ಯವನ್ನೂ ಜ್ಞಾನವೆಂದು ಪರಿಗಣಿಸಿ ಎಂದು ಜ್ಯೋತಿ ಬಾ ಫುಲೆ ೧೮೯೧ರಲ್ಲಿ ಬ್ರಿಟೀಷ್ ಸರ್ಕಾರಕ್ಕೆ ಮನವಿ ಕೊಟ್ಟರು.ಮದ್ರಾಸ್ ಬ್ರಾಹ್ಮಣರ ವಿರುದ್ಧ ಮೈಸೂರು ಬ್ರಾಹ್ಮಣರು ಮೀಸಲಾತಿ ಹೋರಾಟವನ್ನು ಶುರು ಮಾಡಿದರು ಹೀಗೆ ಮೀಸಲಾತಿಗೆ ಎಲ್ಲರೂ ಫಲಾನುಭವಿಗಳೇ ಎಂದು ಹೇಳಿದರು.
ಮುಸ್ಲೀಮರಿಗೂ ಮೀಸಲಾತಿಗಾಗಿ ಶಿಫಾರಸ್ಸು ಮಾಡಿದ್ದು ಮತ್ತು ಹಿಂದುಳಿದ ಸಮುದಾಯಗಳಿಗಾಗಿ ಶಾಲೆಗಳು, ಹಾಸ್ಟೆಲ್ಗಳನ್ನು ಮಾಡುವಂತೆ ಶಿಫಾರಸ್ಸು ಮಾಡಿದ್ದು ಮಿಲ್ಲರ್ ಕಮಿಟಿ. ಅದನ್ನು ಜಾರಿ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್. ಈ ಸಮಾಜ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾದರೆ ಶಿಕ್ಷಣ ಅಗತ್ಯ. ಎಲ್ಲರನ್ನೂ ಒಳಗೊಳ್ಳಲು ಮೀಸಲಾತಿಯನ್ನು ಕಲ್ಪಿಸಬೇಕು. ಎಲ್ಲರ ಪಾಲ್ಗೊಳ್ಳುವಿಕೆ ಇಲ್ಲವಾದರೆ ರಾಜ್ಯ, ದೇಶ ಹಿಂದುಳಿಯುತ್ತದೆ. ಹಾಗಾಗಿ ಎಸ್ಸಿ, ಎಸ್ಟಿ ಎಂದ ಮಾತ್ರಕ್ಕೆ ನಾವು ಅಂಜಿಕೆ ಪಡುವುದನ್ನು ನಿಲ್ಲಿಸಬೇಕು. ನಮ್ಮ ಪ್ರತಿಭೆಯನ್ನು ಈ ದೇಶದ ಏಳಿಗೆಗೆ ಸಹಕಾರಿ ಎಂದು ಹೆಮ್ಮೆ ಪಡಬೇಕು ಎಂದರು.
ಆರ್ಗನೈಸರ್ ಎಂಬ ಆರ್ಎಸ್ಎಸ್ ಪತ್ರಿಕೆ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಯಾಕೆಂದರೆ ಈಗಾಗಲೇ ದೇಶದಲ್ಲಿ ಮನುಸ್ಮೃತಿ ಜಾರಿಯಲ್ಲಿದೆ. ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿಲ್ಲ ಎಂದು ಹೇಳಿಕೊಂಡಿತ್ತು. ಆದರೆ ಸಿದ್ದರಾಮಯ್ಯ ನವರ ಸರ್ಕಾರ ಎಷ್ಟೇ ಸವಾಲುಗಳು ಎದುರಾದರೂ ಸಂವಿಧಾನ ಜಾರಿಮಾಡಲು ಹೊರಟಿದೆ ಎಂದರು
ಯಾರು ಯಾವ ಜಾತಿಯಲ್ಲಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಆ ಕುಟುಂಬದಲ್ಲಿ ನಡೆಯುವ ಚರ್ಚೆಗಳು ಬದಲಾಗುತ್ತವೆ, ಕೆಲವರ ಮನೆಯಲ್ಲಿ ಶಿಕ್ಷಣದ ಬಗ್ಗೆ , ಕೆಲವರ ಮನೆಯಲ್ಲಿ ಭೂಮಿಯ ಬಗ್ಗೆ ಚರ್ಚೆಯಾದರೆ ಇನ್ನೂ ಕೆಲವರ ಮನೆಯಲ್ಲಿ ಜೀತ ಶಿಕ್ಷಣದ ಬಗ್ಗೆ ಚರ್ಚೆ ಆಗುತ್ತದೆ. ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳವಾಗಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಿದೆ ಎಂದು ವಿವರಿಸಿದರು.

ಹಿಂದುಳಿದ ವರ್ಗಗಳ ಪರವಾದ ದೊಡ್ಡ ಪ್ರಯತ್ನಗಳು ನಡೆದಾಗ ಸ್ವತಃ ಆ ಸಮುದಾಯಗಳಿಗೆ ಇದು ನಮ್ಮದು ಎಂದು ಎನಿಸಿಲ್ಲ. ಉದಾಹರಣೆಗೆ ಮಂಡಲ್ ಕಮೀಷನ್ ಶಿಫಾರಸ್ಸುಗಳ ಪರವಾಗಿ ಬೀದಿಗೆ ಇಳಿದಿದ್ದು ದಲಿತ ಸಮುದಾಯಗಳು. ಅದರ ವಿರುದ್ದವಾಗಿ ತಪ್ಪು ತಿಳುವಳಿಕೆಯಿಂದ ಬೀದಿಗೆ ಇಳಿದಿದ್ದು ಓಬಿಸಿ ಸಮುದಾಯಗಳು.ಸಂವಿಧಾನ ರಚನಾ ಸಭೆಯಲ್ಲಿಯೇ ಹಿಂದುಳಿದ ವರ್ಗಗಳ ಪರವಾಗಿ ಗಂಭೀರವಾಗಿ ಚರ್ಚೆಯಾಗಿತ್ತು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೆಹರು ಅವರ ಕ್ಯಾಬಿನೆಟ್ನಲ್ಲಿ ರಾಜಿನಾಮೆ ಕೊಟ್ಟಾಗ ಅವರು ಕೊಟ್ಟ ಕಾರಣಗಳಲ್ಲಿ , ಸಂವಿಧಾನ ಜಾರಿಗೆ ಬಂದು ಒಂದು ವರ್ಷವಾದರೂ ಹಿಂದುಳಿದ ಸಮುದಾಯಗಳ ಪರವಾದ ಆಯೋಗ ರಚನೆಯಾಗದೆ ಇರುವುದು ಸಹ ಒಂದಾಗಿತ್ತು. ಈ ಸಮೀಕ್ಷೆಯ ಶಿಫಾರಸ್ಸುಗಳು ಜಾರಿಯಾಗುವವರೆಗೂ ರಾಜ್ಯಾದ್ಯಾಂತ ಜನಾಭಿಪ್ರಯವನ್ನು ಮೂಡಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಮಾಡಬೇಕು. ಪ್ರಬಲ ಜಾತಿ ಸಮುದಾಯಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಬೇಕು. ಮೈತ್ರಿಯಿಂದ ಮಾತ್ರ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು ಎಂದು ವಿವರಿಸಿದರು.
ಹಿರಿಯ ಹೋರಾಟಗಾರ ಕುಂದೂರು ತಿಮ್ಮಯ್ಯ ಮಾತನಾಡಿ ಬ್ರಾಹ್ಮಣ್ಯವನ್ನು ಕಾಪಾಡಿಕೊಳ್ಳಲು ಜಾತಿ, ಜಾತಿಗಳ ಮಧ್ಯೆ ಗೋಡೆಗಳನ್ನು ಕಟ್ಟಲಾಗುತ್ತಿದೆ. ಮಂಡಲ್ ಆಯೋಗದ ಪರವಾಗಿ ನಾವೆಲ್ಲ ಆಗ ಬೀದಿಗೆ ಇಳಿದಿದ್ದೆವು. ದಲಿತ ದಮನಿತರು ತಮ್ಮ ನಿಜವಾದ ಶತ್ರು ಯಾರು ಎಂದು ಅರಿತುಕೊಳ್ಳಬೇಕು. ಈಗ ನಾವೆಲ್ಲರು ಸಹ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಶಿಫಾರಸ್ಸುಗಳನ್ನು ಜಾರಿಮಾಡಲು ಜನಾಂದೋಲವನ್ನು ರೂಪಿಸಬೇಕು ಎಂದರು
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ ರಾಜ್ಯ, ಕೇಂದ್ರ ಸರ್ಕಾರಗಳು ಕಲ್ಯಾಣ ಕಾರ್ಯಕ್ರಮ ರೂಪಿಸಬೇಕಾದರೆ ಅಂಕಿ ಅಂಶಗಳು ಬೇಕಾಗುತ್ತವೆ. ಇದನ್ನು ಹಂಚಿಕೆ ಮಾಡುವಾಗ ಯಾರು ಎಷ್ಟು ಹಿಂದುಳಿದಿದ್ದಾರೆ, ಮುಂದುವರೆದಿದ್ದಾರೆ ಎಂದು ತಿಳಿದುಕೊಳ್ಳಬೇಕಾಗಿದೆ. ಸಮಾಜಕ್ಕೆ ಇರುವ ಕಾಯಿಲೆ ತಿಳಿಯಬೇಕಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅತ್ಯವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾಗೃತ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಸೋಮಣ್ಣ, ರಾಜಮ್ಮ, ಸಮೀಉಲ್ಲಾ , ಚನ್ನಬಸವಣ್ಣ, ಜಾಯ್ ಜಾಕಬ್, ಉಜ್ಜಜ್ಜಿ ರಾಜಣ್ಣ, ಉಮಾಮಹೇಶ್ ,ಸಂತೋಷ್ ಮತ್ತಿಘಟ್ಟ, ಮೋಹನ್ ಸಿಂಘಿ, ದೇವರಾಜು, ಅಲ್ಲಾಬಕಾಶ್ ,ರಘು ಬಿಳಿಗೆರೆ ಉಪಸ್ಥಿತರಿದ್ದರು





