ರಂಗಭೂಮಿ ಚಟುವಟಿಕೆಯನ್ನು ನಿರಂತರ ನಡೆಸಿ ನಾಟಕ ಕಂಪನಿ ಶತಮಾನ ಕಾಲ ಬೆಳೆಸಿದ ಡಾ.ಗುಬ್ಬಿ ವೀರಣ್ಣ ಅವರ ರಂಗ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರಾರಂಭವಾಗಿರುವ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಕಳೆದ 12 ವರ್ಷಗಳಿಂದ ನಿರಂತರವಾಗಿ ನಾಟಕೋತ್ಸವ ಮಕ್ಕಳ ಬೇಸಿಗೆ ಶಿಬಿರ ಹಾಗೂ ರಂಗಗೀತೆಗಳಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ರಂಗಕಲೆ ಉಳಿಸಲು ಬದ್ಧವಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ರಾದ ಬಿ.ಜಯಶ್ರೀ ತಿಳಿಸಿದರು
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಟ್ರಸ್ಟ್ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಗುಬ್ಬಿ ಪಟ್ಟಣದಲ್ಲಿ ಸಾಂಸ್ಕೃತಿಕ ಮನಸ್ಥಿತಿ ಕಡಿಮೆಯಾಗಿದ್ದು ಜನ ಹೆಚ್ಚು ಹೆಚ್ಚು ಟಿವಿ ಹಾಗೂ ಮೊಬೈಲ್ ಗಳಿಗೆ ಮಾರುಹೋಗುತ್ತಿದ್ದು ಇದು ಆತಂಕದ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಏಕೈಕ ಮಾಧ್ಯಮವೆಂದರೆ ಅದು ರಂಗಭೂಮಿ. ರಂಗ ಸಜ್ಜಿಕೆ ಕಲಾವಿದನ ಜೀವಾಳ. ಕಲಾವಿದರಲ್ಲಿ ಸದಾ ಇರುವ ಜೀವಂತ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯ ರಂಗಾಸಕ್ತರಿಂದ ಆಗಬೇಕು ಎಂದು ತಿಳಿಸಿದರು.
ಟ್ರಸ್ಟ್ ಹಿರಿಯ ಸದಸ್ಯ ಎಚ್.ಎಂ.ರಂಗಯ್ಯ ಮಾತನಾಡಿ ಗುಬ್ಬಿ ವೀರಣ್ಣನವರು ಹುಟ್ಟಿದ ಈ ಮಾಸದಲ್ಲಿ ನಾಟಕೋತ್ಸವವ ನಡೆಯುತ್ತಿರುವುದು. ಜೊತೆಗೆ ಅವರ ಹುಟ್ಟೂರು ಗುಬ್ಬಿಯಲ್ಲೇ ನಡೆಯುತ್ತಿರುವುದು ರಂಗ ಕಲಾವಿದರಿಗೆ ಹೆಮ್ಮೆಯ ವಿಷಯ. ಆದರೆ ಪ್ರೇಕ್ಷಕರ ಕೊರತೆ ಸ್ವಲ್ಪ ಸುದಾರಿಸಬೇಕಾಗಿದೆ. ಸಿನಿಮಾ ಮೊಬೈಲ್ ಹಾವಳಿಗೆ ರಂಗಭೂಮಿಯತ್ತ ಪ್ರೇಕ್ಷಕರು ಬರುತ್ತಿಲ್ಲ. ಸಮಾಜದ ಆಗು ಹೋಗುಗಳ ಚಿತ್ರಣ ಬಿಚ್ಚಿಡುವ ರಂಗಕಲೆಗೆ ಸಮುದಾಯದ ಪ್ರೋತ್ಸಾಹ ಹೆಚ್ಚು ಹೆಚ್ಚು ಸಿಗಬೇಕು ಎಂದು ತಿಳಿಸಿದರು.
ನಾಟಕೋತ್ಸವ ಸಂಚಾಲಕ ರಾಜೇಶ್ ಗುಬ್ಬಿ ಮಾತನಾಡಿ ಮೊದಲನೇ ದಿನ ಸ್ಪಂದನ ಕಲಾ ತಂಡ ಬೆಂಗಳೂರು ಇವರಿಂದ ರಂಗ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ನಟನ, ಸಂಚಯ ಹಾಗೂ ಮಂಗಳೂರು ಕಲಾವಿದರಿಂದ ನಾಟಕ ಪ್ರದರ್ಶನ ಸಂಜೆ 7 ಗಂಟೆ ಯಿಂದ ಪ್ರಾರಂಭವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗುಬ್ಬಿ ಎಚ್ಎಎಲ್ ನ ಅಧಿಕಾರಿಗಳು ಸಿಬ್ಬಂದಿ ಹಾಗೂ ಅಲ್ಲಿನ ಕಲಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.





