ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣವನ್ನು ಪೊಲೀಸ್ ವಿಶೇಷ ತನಿಖಾ ತಂಡ ಭೇದಿಸಿದ್ದು, ಐದು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಕಳ್ಳಸಾಗಾಣೆ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ತಿಳಿಸಿದರು.
ತುಮಕೂರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು.
“ಒಂಬತ್ತು ಮಕ್ಕಳ ಪೈಕಿ ಒಂದು ಮಗುವನ್ನು ಪೋಷಕರ ಸುಪರ್ದಿಗೆ ವಹಿಸಲಾಗಿದೆ. ಮತ್ತೊಂದು ಮಗು ಮೃತಪಟ್ಟಿದೆ. ಉಳಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಗುಬ್ಬಿ ಪೊಲೀಸ್ ಠಾಣೆಯಲ್ಲಿ ಮಗು ಕಳವಾಗಿರುವ ಬಗ್ಗೆ ಜೂನ್ 19ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಭೇದಿಸಲು ಅಪರ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ ಮತ್ತು ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ಶಿರಾ ಉಪ ವಿಭಾಗದ ಡಿವೈಎಸ್ಪಿ ಬಿ ಕೆ ಶೇಖರ್, ಗುಬ್ಬಿ ವೃತ್ತದ ಸಿಪಿಐ ಗೋಪಿನಾಥ್ ವಿ ಹಾಗೂ ಗುಬ್ಬಿ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಜಿ ಕೆ ಹಾಗೂ ಸಿಬ್ಬಂದಿಗಳಾದ ನವೀನ್ ಕುಮಾರ್, ವಿಜಯ ಕುಮಾರ್, ಮಧುಸೂಧನ್ ಹಾಗೂ ಎಸ್ಪಿ ಕಚೇರಿಯ ಸಿಬ್ಬಂದಿ ನರಸಿಂಹರಾಜು, ದುಶ್ಯಂತ್ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು” ಎಂದರು.
“ತನಿಖಾ ತಂಡ ಪ್ರಕರಣವನ್ನು ಭೇದಿಸಲು ಹೋದಾಗ ಗರ್ಭ ಧರಿಸಿದ ಅವಿವಾಹಿತ ಮಹಿಳೆಯರು, ಅಕ್ರಮ ಸಂಬಂಧದಿಂದ ಗರ್ಭ ಧರಿಸಿದವರನ್ನು ಪತ್ತೆ ಮಾಡಿ ಅವರಿಂದ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗಳಿಂದ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿರುವುದು ಬೆಳೆಕಿಗೆ ಬಂದಿದೆ. ಈ ಕೃತ್ಯಕ್ಕೆ ಹುಳಿಯಾರಿನ ಗೂಬೆ ಹಳ್ಳಿ ಪಿಎಚ್ಸಿಯ ಫಾರ್ಮಾಸಿಸ್ಟ್ ಮೆಹೆಬೂಬ್ ಷರೀಫ್ ಎಂಬವವ ಸಹಕರಿಸಿರುತ್ತಾನೆ. ಈತನ ಹೇಳಿಕೆಯನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ” ಎಂದು ಅವರು ಹೇಳಿದರು.
“ತುಮಕೂರು ಶೆಟ್ಟಿಹಳ್ಳಿ ಗೇಟ್ನಲ್ಲಿರುವ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ಮಹೇಶ ಯು ಡಿ(39), ಜಾತ್ರೆಗಳಲ್ಲಿ ಟ್ಯಾಟೂ ಹಾಕುವ ಗುಬ್ಬಿ ತಾಲೂಕಿನ ಬಿಕ್ಕೇ ಗುಡ್ಡ ಗ್ರಾಮದ ಕೆ ಎನ್ ರಾಮಕೃಷ್ಣಪ್ಪ (53), ಡ್ರೈವರ್ ಕೆಲಸ ಮಾಡುವ ತುಮಕೂರಿನ ಭಾರತೀ ನಗರದ ಹನುಂಮತ ರಾಜು(45), ಮಧುಗಿರಿ ದೊಡ್ಡೇರಿಯ ಪಿಎಚ್ಸಿಯಲ್ಲಿ ಸ್ಟಾಫ್ ನರ್ಸ್ ಆಗಿರುವ ಪೂರ್ಣಿಮಾ ಎನ್(39), ಶಿರಾ ಟೌನ್ನ ಸ್ಟಾಫ್ ನರ್ಸ್ ಸೌಜನ್ಯ(48), ಹುಳಿಯಾರಿನ ಗೂಬೆಹಳ್ಳಿಯ ಪಿಎಚ್ಸಿಯ ಫಾರ್ಮಾಸಿಸ್ಟ್ ಮೆಹೆಬೂಬ್ ಷರೀಫ್(52) ಹಾಗೂ ಮಂಡ್ಯದ ಬೆಳ್ಳೂರಿನ ಆಟೋ ಡ್ರೈವರ್ ಮುಬಾಕರ್ ಪಾಷ(44) ಬಂಧಿತ ಆರೋಪಿಗಳು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೈಗಾರಿಕೆಗಳ ಬೇಡಿಕೆ ಈಡೇಸುವಂತೆ ಕಾಟನ್ ಇಂಡಸ್ಟ್ರೀಸ್ ಅಸೋಸಿಯೇಷನ್ ಆಗ್ರಹ
“ಮಕ್ಕಳನ್ನು ಅಪಹರಿಸಲು ಆರೋಪಿಗಳು ಬಳಸಿದ್ದ ಮಾರುತಿ-800 ಕಾರು, 50 ಸಾವಿರ ನಗದು, ನಾಲ್ಕು ಮೊಬೈಲ್ಗಳನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿತರು ಮಾರಾಟ ಮಾಡಿದ ಮಕ್ಕಳ ಜನನದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜನ್ಮ ದೃಢೀಕರಣ ಪತ್ರವನ್ನು ನೀಡಿರುವುದು ತನಿಖೆಯಿಂದ ಗೊತ್ತಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ” ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಎಎಸ್ಪಿ ವಿ ಮರಿಯಪ್ಪ, ತುಮಕೂರು ಹಾಗೂ ಶಿರಾ ಡಿವೈಎಸ್ಪಿ ಹಾಗೂ ತನಿಖಾ ತಂಡದ ಪೊಲೀಸರು ಇದ್ದರು.





