ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯಾವುದೇ ಸರ್ಕಾರಗಳಿದ್ದರೂ ಯುವಜನರಿಗೆ ಉದ್ಯೋಗ ನೀಡುತ್ತಿಲ್ಲ. ಯುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆದರೇನು ಮಾಡುವುದು, ನಮ್ಮಲ್ಲಿ ಆರ್ಥಿಕ ಸಂಪನ್ಮೂಲ ಇದ್ದರೂ ಉದ್ಯೋಗ ಕಲ್ಪಿಸಲು ಇಚ್ಛಾಶಕ್ತಿ ತೋರುತ್ತಿಲ್ಲ. ಸರ್ಕಾರ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಮಾಡಿದರು.
ತುಮಕೂರು ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತುಮಕೂರು ಜಿಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ಪಿಸಿ, ಪಿಎಸ್ಐ ಇತ್ಯಾದಿ ಸೇರಿದಂತೆ ಹಲವು ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಿ ನೇಮಕಾತಿ ಆರಂಭಿಸುವಂತೆ ಆಗ್ರಹಿಸಿ
ಯುವಜನತೆ ನಡೆಸುತ್ತಿದ್ದ ಹೋರಾಟದಲ್ಲಿ ಪಾಲ್ಗೊಂಡ ಅವರು, ರಾಜ್ಯದಲ್ಲಿ ಎರಡು ಮುಕ್ಕಾಲು ಲಕ್ಷ ಹುದ್ದೆ ಖಾಲೆ ಇವೆ. ಕೊನೇ ಪಕ್ಷ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಪರಮನೆಂಟ್ ಆದರೂ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ನೇಮಕಾತಿ ಮಾಡಲು ಇಲ್ಲೀವರೆಗೆ ಮನಸ್ಸು ಮಾಡಿಲ್ಲ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಮೊದಲು ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದರಲ್ಲದೆ, ಯುವಜನರ ಹೋರಾಟದ ಶಕ್ತಿ ಮುಂದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಯಾವ ಸರ್ಕಾರಗಳೂ ನಿಲ್ಲುವುದಿಲ್ಲ ಎಂದು ಹೋರಾಟ ನಿರತ ಯುವಜನರನ್ನು ಶಾಸಕರು ಹುರಿದುಂಬಿಸಿದರು.
ಉದ್ಯೋಗ ನೀಡುವಂತೆ ಆಗ್ರಹಿಸಿ ಮಾತನಾಡಿದ ಯುವತಿ ಅನುಷ, ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನೇಮಕಾತಿ ಮಾಡದೆ ಸರ್ಕಾರ ನಿರ್ಲಕ್ಷ್ಯ ತೋರಿರುವುದರಿಂದ ವಯಸ್ಸು ಮಿತಿ ದಾಟುತ್ತಿದೆ. ಈ ನಿಟ್ಟಿನಲ್ಲಿ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ತಿಂಗಳಲ್ಲಿ ಜೀವನ ನಡೆಸುವ ಹಣ ನೌಕರಿಗೆ ಅಪ್ಲಿಕೇಶನ್ ಹಾಕಲು ಖರ್ಚಾಗುತ್ತಿದೆ. ಪದವಿ ಮುಗಿಸಿ ಎರಡು ವರ್ಷ ಕಳೆದರೂ ನೌಕರಿ ಇಲ್ಲ. ನಮ್ಮ ಮನೆಯಲ್ಲಿ ಮದುವೆ ಮಾಡಿದರೂ ಓದಿಸಲು ಮನಸ್ಸು ಮಾಡಿರುವುದೇ ಹೆಚ್ಚು. ಈ ನಡುವೆ ಕೆಲಸ ಸಿಗದಿದ್ದರೆ ನಾವೇನು ಮಾಡಬೇಕು. ದಯತೋರಿ ಸರ್ಕಾರ ಉದ್ಯೋಗ ನೀಡಬೇಕು ಎಂದು ಅವಲತ್ತು ಕೊಂಡರು.
ಹೋರಾಟದಲ್ಲಿ ಉದ್ಯೋಗಾಕಾಂಕ್ಷಿ ನೂರಾರು ಯುವಕ ಯುವತಿಯರು ಪಾಲ್ಗೊಂಡಿದ್ದರು.





