ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾತ್ರಿಕೆ ಹಾಲ್ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾಗಿರುವ ದಂಪತಿ ತಮಗೆ ಮನೆಯವರಿಂದ ರಕ್ಷಣೆ ಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶೋಕ್ ಕೆ ವಿ ಅವರಿಗೆ ರಕ್ಷಣೆ ಕೋರಿ ದೂರು ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾತ್ರಿಕೆ ಹಾಲ್ ಗ್ರಾಮದ ಈಡಿಗ ಸಮುದಾಯದ ಸುಶ್ಮಿತಾ(19) ಮತ್ತು ತೀರ್ಥಪುರ ಗ್ರಾಮದ ದಲಿತ ಸಮುದಾಯದ ಯತೀಶ್(24) ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರು ಸೆಪ್ಟೆಂಬರ್ 01, 2025 ರಂದು ದಾಬಸ್ಪೇಟೆ ಬಳಿಯ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಆದರೆ, ಈ ಅಂತರ್ಜಾತಿ ವಿವಾಹಕ್ಕೆ ಸುಶ್ಮಿತಾ ಅವರ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾತ್ರಿಕೆ ಹಾಲ್ ಗ್ರಾಮದ ಈಡಿಗ ಜನಾಂಗಕ್ಕೆ ಸೇರಿದ ಪಾಪಣ್ಣ ಎಂಬುವವರ ಮಗಳು ಸುಷ್ಮಿತ ಪಿ ಮತ್ತು ತೀರ್ಥಪುರ ಗ್ರಾಮದ ಪರಿಶಿಷ್ಟ ಜಾತಿ(ಮಾದಿಗ)ಗೆ ಸೇರಿದ ಯತೀಶ್ ಎಂಬುವವರನ್ನು ಪ್ರೀತಿಸಿದ್ದ ವಿಚಾರ ತಿಳಿದ ಬಳಿಕ ಆಕೆಯ ಮೇಲೆ ತನ್ನ ಮನೆಯವರು, ʼಕೀಳು ಜಾತಿಯ ಹುಡುಗನ್ನು ಪ್ರೀತಿ ಮಾಡುತ್ತಿದ್ದೀಯʼ ಎಂಬುದಾಗಿ ಬೆದರಿಸಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿವಾಹದ ನಂತರ, ಸುಶ್ಮಿತಾ ಅವರ ಕುಟುಂಬದವರು ಯತೀಶ್ನ ಮನೆಗೆ 50-60 ಜನರ ಗುಂಪಿನೊಂದಿಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಅಲ್ಲದೆ ಕೊಲೆ ಯತ್ನದ ಆರೋಪವೂ ಎದುರಾಗಿದೆ. ಈ ಘಟನೆಯಿಂದ ಜೀವ ಭಯದಿಂದ ಯತೀಶ್ನ ಕುಟುಂಬವು ಗ್ರಾಮವನ್ನೇ ತೊರೆದು ತಲೆಮರೆಸಿಕೊಂಡಿದೆ. ಯತೀಶ್ನ ಪೋಷಕರು ರಾತ್ರಿಯಿಡೀ ತೋಟದ ಪೊದೆಗಳಲ್ಲಿ ಅವಿತುಕೊಂಡಿದ್ದು, ನವ ದಂಪತಿ ರಾತ್ರಿಯಿಡೀ ಊರು ಊರು ಸುತ್ತಿ ಕಾರಿನಲ್ಲಿ ಆಶ್ರಯ ಪಡೆದಿದ್ದರು.

ಈ ಘಟನೆಯ ಬಗ್ಗೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಪೊಲೀಸರು ರಾಜಿ ಪಂಚಾಯತಿ ನಡೆಸಿ, ದಂಪತಿಗೆ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಸೂಚಿಸಿದ್ದರು. ಆದರೆ, ಸುಶ್ಮಿತಾ ಅವರ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೀವ ಭಯದಿಂದಾಗಿ, ಸುಶ್ಮಿತಾ ಮತ್ತು ಯತೀಶ್ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶೋಕ್ ಕೆ ವಿ ಅವರಿಗೆ ರಕ್ಷಣೆ ಕೋರಿ ದೂರು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ| ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯ ; ತಪ್ಪಿದರೆ ಆಸ್ಪತ್ರೆಗಳಿಗೆ ₹1 ಲಕ್ಷ ದಂಡ ರಾಜ್ಯ ಸರ್ಕಾರದ ಮಹತ್ವದ ಆದೇಶ
ಈ ಘಟನೆಯು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜಾತಿ ಆಧಾರಿತ ತಾರತಮ್ಯವು ಗಾಢವಾಗಿ ಬೇರೂರಿರುವುದನ್ನು ತೋರಿಸುತ್ತದೆ.





