ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್ನಿಂದ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆ ಮತ್ತು ವಿಶ್ವ ಜಲಸಂಗ್ರಹ (ಮಳೆಕೊಯ್ಲು)ದಿನದ ಅಂಗವಾಗಿ ಮಳೆನೀರು ಸಂಗ್ರಹ ಮತ್ತು ಬಳಕೆ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಮಾರ್ಚ್ 17 ರಂದು ಬೆಳಿಗ್ಗೆ 10ಕ್ಕೆ ಅಮಾನಿಕೆರೆ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ ಬಿ ಜಯಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಕಳೆದ 35 ವರ್ಷಗಳಿಂದ ಸರ್ಕಾರ ಹಾಗೂ ಪ್ಲಂಬರ್ಗಳು ಮಳೆನೀರು ಸಂಗ್ರಹ ಕುರಿತಂತೆ ಜನರಿಗೆ ಮಾಹಿತಿ ನೀಡುತ್ತಲೇ ಬಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಮತ್ತು ಜನರು ಮಳೆಕೊಯ್ಲು ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಇಂದು ಮಹಾನಗರಗಳಲ್ಲಿ ನೀರಿನ ಕೊರತೆಯೇ ಉಂಟಾಗುತ್ತಿರಲಿಲ್ಲ. ಹಾಗಾಗಿ ಜನರಿಗೆ ಮಳೆ ನೀರಿನ ಸಂಗ್ರಹ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್ ಮಾಡಿದೆ” ಎಂದರು.
“ನೀರು ಅಮೂಲ್ಯವಾದ ಪ್ರಕೃತಿ ದತ್ತವಾದ ವಸ್ತು. ಇದನ್ನು ಮಿತವ್ಯಯದಿಂದ ಬಳಸಿದರೆ ಮಾತ್ರ ಮುಂದಿನ ಪೀಳಿಗೆಗೆ ಮಾಲಿನ್ಯ ರಹಿತ ಜೀವಜಲ ನೀಡಲು ಸಾಧ್ಯ. ಅತಿಯಾದ ಕೊಳವೆ ಬಾವಿ ನೀರು ಬಳಕೆಯಿಂದ ಜನ, ಜಾನುವಾರುಗಳಿಗೆ ಹಲವಾರು ರೋಗ, ರುಜಿನಗಳು ಬರುತ್ತಿದ್ದು, ವಿಷಮುಕ್ತ, ಶುದ್ದ ಜೀವಜಲವೆಂದರೆ ಅದು ಮಳೆನೀರು ಮಾತ್ರ. ಹಾಗಾಗಿ ಮಳೆನೀರು ಕೊಯ್ಲು ಯೋಜನೆಯನ್ನು ಸರ್ಕಾರ ಕಡ್ಡಾಯಗೊಳಿಸಬೇಕೆಂಬುದು ನಮ್ಮ ಅಸೋಸಿಯೇಷನ್ನ ಒತ್ತಾಯವಾಗಿದೆ” ಎಂದು ನುಡಿದರು.
ಜಿಲ್ಲಾ ಉಸ್ತುವಾರಿ ಗಂಗಸಂದ್ರ ರಾಜು ಮಾತನಾಡಿ, “ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್, ವಾಹಿನಿ ಪೈಫ್ ಸಹಕಾರದಲ್ಲಿ ಮಾರ್ಚ್ 17ರಂದು ಅಮಾನಿಕೆರೆ ಗಾಜಿನಮನೆಯಲ್ಲಿ ಹಮ್ಮಿಕೊಂಡಿರುವ ಮಳೆನೀರು ಸಂಗ್ರಹ ಮತ್ತು ಬಳಕೆ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಗೃಹಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ ಜಿ ಪರಮೇಶ್ವರ್ ಉದ್ಘಾಟಿಸುವರು. ವಾಹಿನಿ ಇರಿಗೇಷನ್ನ ನಿರ್ದೇಶಕ ಆನಂದ್ ಆರ್ ಮತ್ತು ಹೇಮರಾಜ್ ಸೆಂಚ ಅಧ್ಯಕ್ಷತೆ ವಹಿಸುವರು” ಎಂದರು.
“ಸಹಕಾರ ಸಚಿವ ಕೆ ಎನ್ ರಾಜಣ್ಣ, ಸಂಸದ ಜಿ ಎಸ್ ಬಸವರಾಜು ಮುಖ್ಯ ಅತಿಥಿಗಳಾಗಿ, ಸ್ಥಳೀಯ ಶಾಸಕರುಗಳಾ ಜೋತಿಗಣೇಶ್, ಬಿ ಸುರೇಶಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜೋವತಿ, ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ ಬಿ ವಿ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗಿರೀಶ್, ಮಳೆನೀರು ತಜ್ಞ ಶಿವಕುಮಾರ್, ವಕೀಲರು, ಸಂಘದ ಸಲಹೆಗಾರ ಡಿ ಶಿವಣ್ಣ, ಕಾರ್ಮಿಕ ನಿರೀಕ್ಷಕ ವೆಂಕಟೇಶಬಾಬು, ನಗರ ಠಾಣೆ ವೃತ್ತ ನಿರೀಕ್ಷಕ ಬಿ ಎಸ್ ದಿನೇಶಕುಮಾರ್ ಸೇರಿದಂತೆ ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ” ಎಂದರು.
“ಈ ವೇಳೆ ಪಿಪಿಟಿ ಮೂಲಕ ಫ್ಲಂಬರ್ ಕೆಲಸದಲ್ಲಿ ಆಗಿರುವ ಹೊಸ ಬದಲಾವಣೆ ಕುರಿತು ಹಿರಿಯರು ಮಾಹಿತಿ ನೀಡಲಿದ್ದಾರೆ” ಎಂದು ವಿವರ ನೀಡಿದರು.
ತುಮಕೂರು ಜಿಲ್ಲಾ ಫ್ಲಂಬರ್ ಅಸೊಸಿಯೇಷನ್ ಉಸ್ತುವಾರಿ ಮಂಜುನಾಥ್ ಮಾತನಾಡಿ, “30*40 ನಿವೇಶನದಲ್ಲಿ ನಿರ್ಮಿಸಿರುವ 10 ಚದರ ಮೀಟರ್ ಮನೆಗೆ ₹15,000-₹20,000ಗಳಲ್ಲಿ ಮಳೆನೀರು ಕೊಯ್ಲ ಕೆಲಸ ಮಾಡಬಹುದು. ನಾಲ್ಕು ಜನರಿರುವ ಮನೆಗೆ ಒಂದು ಮನೆಯಲ್ಲಿ ಒಂದು ತಿಂಗಳು ಬಳಕೆ ಮಾಡಬಹುದು. ಇದರಿಂದ ಶುದ್ದವಾದ, ಯಾವುದೇ ಹಾನಿಕಾರಕ ಖನಿಜಾಂಶಗಳಿಲ್ಲ. ನೀರು ಬಳಸುವುದರ ಜತೆಗೆ, ವಿದ್ಯುತ್ ಉಳಿತಾಯದ ಜತೆಗೆ, ಅಂತರ್ಜಲ ಎತ್ತುವುದೂ ಕೂಡ ತಪ್ಪಲಿದೆ. ಹಾಗಾಗಿ ಮಹಾನಗರಪಾಲಿಕೆ ಮಳೆನೀರು ಕೊಯ್ಲು ಯೋಜನೆಯನ್ನು ತುಮಕೂರು ಜಿಲ್ಲೆಯಲ್ಲಿ ಕಡ್ಡಾಯಗೊಳಿಸಬೇಕು” ಎಂದು ಆಗ್ರಹಿಸಿದರು.
“ಪ್ಲಂಬರ್ ಕೆಲಸ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ. ಪ್ರಸ್ತುತ ನಮ್ಮ ಸಂಘದಲ್ಲಿ 2000 ಮಂದಿ ಪ್ಲಂಬಿಂಗ್ ಕೆಲಸಗಾರರು ಸದಸ್ಯತ್ವ ಪಡೆದಿದ್ದು, ಸುಮಾರು 150ಕ್ಕೂ ಅಧಿಕ ಗುತ್ತಿಗೆದಾರರು ಸಂಘದ ಸದಸ್ಯತ್ವ ಪಡೆದಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಜಾಗ್ವಾರ ಕಂಪನಿಯಿಂದ ಜಾಗ್ವಾರ ಕಂಪನಿಯ ಪ್ಲಂಬಿಂಗ್ ಪರಿಕರಗಳ ರಿಪೇರಿ ಮತ್ತು ಜೋಡಣೆ ಕುರಿತಂತೆ ತರಬೇತಿಯನ್ನೂ ನೀಡುತ್ತಿದ್ದಾರೆ. ಎಲ್ಲರೂ ಇದರ ಲಾಭ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | 24 ಗಂಟೆಯಲ್ಲಿ ಕುಡಿಯುವ ನೀರು ಸರಬರಾಜು, ಮೇವು ಲಭ್ಯ: ಶಾಸಕ ವಿನಯ ಕುಲಕರ್ಣಿ
ಸುದ್ದಿಗೋಷ್ಟಿಯಲ್ಲಿ ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್ನ ಉಪಾಧ್ಯಕ್ಷ ಕುಮಾರನಾಯ್ಕ್, ಕಟ್ಟಡ ನಿರ್ಮಾಣ ಸಂಘದ ಅಶ್ವಥನಾರಾಯಣ, ಪದಾಧಿಕಾರಿಗಳಾದ ಕೆ ಮರಿಹನುಮಯ್ಯ, ಹನುಮಂತರಾಯಪ್ಪ, ಬಸವರಾಜು, ಬಿ ಎನ್ ಕುಮಾರ್, ತಮ್ಮಯ್ಯ, ಶಿವಕುಮಾರ್ ಸೇರಿದಂತೆ ಇತರರು ಇದ್ದರು.




