ರಾಜ್ಯದಲ್ಲಿರುವ ಸರಿಸುಮಾರು 6 ಲಕ್ಷದಿಂದ 7 ಲಕ್ಷ ಬೀಡಿ ಕಾರ್ಮಿಕರ ಬದುಕಿಗೆ ಪರ್ಯಾಯ ಹಾಗೂ ಪರಿಹಾರ ಯೋಜನೆಯನ್ನು ರೂಪಿಸಲು ಸರ್ಕಾರ ಗಮನ ನೀಡದೆ ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ ಹಾಗೂ ಹುಕ್ಕಾ ಬಾರ್ ಸಂಪೂರ್ಣ ನಿಷೇಧ ಅಂಶವನ್ನೊಳಗೊಂಡ ಸಿಗರೇಟುಗಳ ಮತ್ತು ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಹಾಗೂ ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) ವಿಧೇಯಕ-2024 ಅಂಗೀಕರಿಸಿರುವ ಕ್ರಮವನ್ನು ತೀವ್ರ ಒಪ್ಪತಕ್ಕದಲ್ಲ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೇಡರೇಷನ್(ಸಿಐಟಿಯು) ಅಸಮಾಧನ ವ್ಯಕ್ತಪಡಿಸಿದೆ.
ಬಾಲಕೃಷ್ಣ ಶೆಟ್ಟಿ, ಜೆ ಪದ್ಮಾವತಿ ಶೆಟ್ಟಿ, ಸೈಯದ್ ಮುಜಿಬ್ ಒಗ್ಗೂಡಿ ತುಮಕೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದು, “ಫೆಬ್ರವರಿ 23ರಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರು ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಮಂಡಿಸಿರುವ ವಿಧೇಯಕವು ಆರೋಗ್ಯ ದೃಷ್ಟಿಯಿಂದ ಸ್ವಾಗತರ್ಹವಾದರೂ ಲಕ್ಷಾಂತರ ಬಡ ಹಾಗೂ ಒಂಟಿ ಮಹಿಳೆಯರಿಗೆ ಹಾಗೂ ಅವರುಗಳ ಕುಟುಂಬಗಳ ನಿರ್ವಹಣೆಗೆ ಆಧಾರವಾಗಿರುವ ಬೀಡಿ ಉದ್ಯಮವನ್ನು ಬಿಕ್ಕಟ್ಟಿಗೆ ಸಿಲುಕಿಸಲಿದೆ” ಎಂದು ಆರೋಪಿಸಿದ್ದಾರೆ.
“ಈ ವಿಧೇಯಕವನ್ನು ಅಂಗೀಕರಿಸುವ ಮುನ್ನ ಬೀಡಿ ಉದ್ಯಮವನ್ನು ನಂಬಿರುವ ರಾಜ್ಯದ 6 ರಿಂದ 7 ಲಕ್ಷ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಮತ್ತು ಪರಿಹಾರವನ್ನು ರೂಪಿಸುವ ಹೊಣೆಗಾರಿಯನ್ನು ಕೇಂದ್ರ–ರಾಜ್ಯ ಸರ್ಕಾರಗಳು ತೋರಬೇಕಿತ್ತು. ಆದರೆ ಲಕ್ಷಾಂತರ ಕಾರ್ಮಿಕರ ಬದುಕಿನ ಮೇಲೆ ಉಂಟಾಗುವ ಪರಿಣಾಮವನ್ನು ನಿರ್ಲಕ್ಷಿಸಿ ಅವಸರದಲ್ಲಿ ವಿಧೇಯಕವನ್ನು ಅಂಗೀಕರಿಸಿರುವುದು ಸರಿಯಾದ ಕ್ರಮವಲ್ಲ” ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೇಡರೇಷನ್(ಸಿಐಟಿಯು) ಆರೋಪಿಸಿದೆ.
“ಹಾಲಿ ಅಂಗೀಕರಿಸಿರುವ ವಿಧೇಯಕದಲ್ಲಿ ಸಿಗರೇಟ್ ಮಾರಾಟ ವಯಸ್ಸು 18 ರಿಂದ 21ಕ್ಕೆ ಹೆಚ್ಚಳ, ಶಾಲಾ ಕಾಲೇಜುಗಳ ವ್ಯಾಪ್ತಿಯಿಂದ ಬೀಡಿ ಸಿಗರೇಟ್ ಮಾರಾಟಕ್ಕೆ ಇರುವ ನಿರ್ಬಂಧವನ್ನು ನೂರು ಯಾರ್ಡ್ ಬದಲು ನೂರು ಮೀಟರ್ ಎಂದು ಬದಲಿಸಲಾಗಿದೆ. ಸಿಂಗಲ್ ಸಿಗರೇಟ್ ಮಾರಾಟಕ್ಕೆ ನಿರ್ಬಂಧಿಸಿದ್ದು, ಪ್ಯಾಕ್ ಲೆಕ್ಕದಲ್ಲಿ ಖರೀದಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದಲ್ಲಿ ಹಾಲಿ ಇರುವ ದಂಡದ ಮೊತ್ತ ₹200ನ್ನು ₹1000ಕ್ಕೆ ಹೆಚ್ಚಳ ಮಾಡಿದ್ದು, ನಿರ್ಬಂಧವಿದ್ದರೂ ಅಕ್ರಮವಾಗಿ ಹುಕ್ಕಾ ಬಾರ್ ನಡೆಸಿದರೆ 1ರಿಂದ 3 ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ ₹50,000ದಿಂದ ₹1 ಲಕ್ಷದವರೆಗೆ ದಂಡ ವಿಧಿಸಲಿದೆ ಎನ್ನುವ ಅಂಶಗಳನ್ನು ಪ್ರಸ್ತಾಪಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಸಮಾಲೋಚನೆ ಸಭೆ
“ಬೀಡಿ ಮತ್ತು ತಂಬಾಕುವಿನ ಮೇಲೆ ಈ ಹಿಂದಿನಿಂದಲೂ ಕೇಂದ್ರ ಸರ್ಕಾರದ ಖಜಾನೆಗೆ ಅಬಕಾರಿ ಸುಂಕ ಹಾಗೂ ಹಾಲಿ ಶೇ.28 ರಷ್ಟು ಜಿಎಸ್ಟಿ ಮೂಲಕ ಸಾವಿರಾರು ಕೋಟಿ ರೂಪಾಯಿಗಳು ಸಂಗ್ರಹವಾಗುತ್ತಿದೆ. ಆದರೆ ಸರ್ಕಾರಗಳು ತನ್ನ ನೀತಿಯಿಂದ ಕೆಲಸ ಕಳೆದು ಕೊಳ್ಳುತ್ತಿರುವ ಬೀಡಿ ಕಾರ್ಮಿಕರಿಗೆ ತಲಾ ₹5 ಲಕ್ಷ ಪರಿಹಾರ ಮತ್ತು ಪರ್ಯಾಯ ಉದ್ಯೋಗಕ್ಕೆ ಯೋಜನೆಯನ್ನು ರೂಪಿಸಬೇಕೆಂದು ಹತ್ತಾರು ವರ್ಷಗಳಿಂದ ನಿರಂತರ ಚಳವಳಿಗಳನ್ನು ನಡೆಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಾ ಲಕ್ಷಾಂತರ ಬೀಡಿ ಕಾರ್ಮಿಕರ ಬದುಕಿನ ಮೇಲೆ ಗದಾ ಪ್ರಹಾರ ನಡೆಸುತ್ತಿವೆ” ಎಂದು ಸಿಐಟಿಯು ಆರೋಪಿಸಿದೆ.





