ಮಂದಿರ, ಮಸೀದಿ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ವಿದ್ಯಾವಂತ ಯುವಕರು ಸಹ ಪೊಲೀಸ್ ಕೇಸುಗಳಲ್ಲಿ ಸಿಲುಕಿ ಉದ್ಯೋಗ ಪಡೆಯಲು ಆಗದಂತಹ ಸ್ಥಿತಿಗೆ ತಲುಪಿದ್ದು, ಯುವಜನತೆ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನವಿ ಮಾಡಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ಪಕ್ಷದ ಮುಂಚೂಣಿ ಘಟಕಗಳಾದ ಯುವಕಾಂಗ್ರೆಸ್, ಎಸ್ಸಿ, ಎಸ್ಟಿ, ಒಬಿಸಿ, ಮಹಿಳಾ, ಸೇವಾದಳ ಹಾಗೂ ಕಾರ್ಮಿಕರ ಘಟಕದ ಮುಖಂಡರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಂಗಳೂರು ಭಾಗದ ಯುವಕರು ಬಿಜೆಪಿ ಮತ್ತು ಸಂಘಪರಿಹಾರದ ಬಣ್ಣದ ಮಾತುಗಳಿಗೆ ಮರುಳಾಗಿ, ಇಂದು ಕೆಲಸವಿಲ್ಲದೆ ಪರಿತಪಿಸುತಿದ್ದಾರೆ. ತಾವುಗಳು ಹಾಗಾಗಬಾರದು ಎಂದು ಎಚ್ಚರಿಸಿದರು. ಶ್ರೀರಾಮ ಇಂದು, ನಿನ್ನೆಯವರಲ್ಲ. ಶತ ಶತಮಾನಗಳಿಂದಲೂ ಜನರು ಶ್ರೀರಾಮಮಂದಿರ, ಹನುಮಂತನ ಗುಡಿಗಳನ್ನು ಕಟ್ಟಿ ಪೂಜಿಸುತ್ತಾ ಬಂದಿದ್ದಾರೆ. ಶ್ರೀರಾಮನ ಜೊತೆ ಸೀತೆ, ಲಕ್ಷ್ಮಣ, ಹನುಮಂತ ಇದ್ದರೆ ಒಳಿತು. ಆದರೆ, ಬಿಜೆಪಿಯವರಿಗೆ ಇವರ್ಯಾರು ಬೇಡ. ಶ್ರೀರಾಮನಷ್ಟೇ ಸಾಕು ಎಂದರು.
ಯುವಕರು ರಾಜಕಾರಣಕ್ಕೆ ಬರಬೇಕೆಂಬ ಕನಸನ್ನು ಕಾಂಗ್ರೆಸ್ ಹೊಂದಿದೆ. ಹಾಗಾಗಿ ಯುವಜನರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದೆ. ಸ್ಥಳೀಯವಾಗಿಯೂ ಪಕ್ಷದ ಹುದ್ದೆಗಳಲ್ಲದೆ, ಸರ್ಕಾರದ ವಿವಿಧ ನೇಮಕಾತಿಗಳಲ್ಲಿಯೂ ಯುವಕರಿಗೆ ಅದ್ಯತೆ ನೀಡಲಾಗಿದೆ. ಮುಂದೆಯೂ ನೀಡಲಿದೆ. ಬೂತ್ ಮಟ್ಟದಲ್ಲಿ ಪ್ರತಿಯೊಬ್ಬರು ಚುನಾವಣಾ ಸಮಯದಲ್ಲಿ ಹೆಚ್ಚಿನ ಗಮನಹರಿಸಿ, ಒಂದು ಮತವು ವಿಫಲವಾಗದಂತೆ ಎಲ್ಲರೂ ಮುದ್ದಹನುಮೇಗೌಡರಿಗೆ ಮತ ಚಲಾಯಿಸಲು ಕ್ರಮ ಕೈಗೊಳ್ಳಬೇಕೆಂದು ಯುವಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಶ್ರೀರಾಮನೆಂದರೆ ಸತ್ಯ, ಧರ್ಮ, ಸಮಾನತೆಯ ಪ್ರತೀಕ.ರಾಮರಾಜ್ಯವೆಂದರೆ ಸಮಾನತೆ, ಸ್ವಾಭಿಮಾನದ ಬದುಕಿನ ಪ್ರತೀಕ. ಆದರೆ ಬಿಜೆಪಿ ಪಕ್ಷದವರು ಕೇವಲ ಒಂದು ವರ್ಗಕ್ಕೆ ಮಾತ್ರ ಶ್ರೀರಾಮನನ್ನು ಸಿಮೀತಗೊಳಿಸಲು ಹೊರಟಿದ್ದಾರೆ. ರಾಮರಾಜ್ಯದ ಕನಸು ನನಸು ಮಾಡುತ್ತಿರುವ ಪಕ್ಷವೆಂದರೆ ಕಾಂಗ್ರೆಸ್ಪಕ್ಷ. ಎಲ್ಲರೂ ಒಂದೇ ಎಂಬುದು ಕಾಂಗ್ರೆಸ್ ಪಕ್ಷದ ಸಿದ್ದಾಂತವಾಗಿದೆ ಎಂದರು.
ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆ ಸತ್ಯ ಮತ್ತು ಅಸತ್ಯ ಹಾಗೂ ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಗಾಂಧಿಜೀ ಅವರ ಸತ್ಯಮೇವ ಜಯತೆ ಎಂಬುದು ಕಾಂಗ್ರೆಸ್ಪಕ್ಷದ ಮೂಲ ಮಂತ್ರ. ಬಿಜೆಪಿ ಪಕ್ಷದ ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಜನ ಸಮುದಾಯವನ್ನು ವಿಂಗಡಿಸುವ ಕತ್ತರಿಯ ಕೆಲಸ ಮಾಡಿದರೆ, ಕಾಂಗ್ರೆಸ್ ಪಕ್ಷ ಭಾರತೀಯರೆಲ್ಲರೂ ಸಮಾನರು ಎಂದು ಸೂಜಿಯಿಂದ ಹೊಲೆಯುವ ಕೆಲಸ ಮಾಡುತ್ತಿದೆ ಎಂದರು.
ಮುದ್ದಹನುಮೇಗೌಡ ಸಜ್ಜನ ರಾಜಕಾರಣಿ. ವಿರೋಧಪಕ್ಷಗಳು ಸಹ ಮುದ್ದಹನುಮೇಗೌಡ ಒಳ್ಳೆಯ ವ್ಯಕ್ತಿ ಎಂದು ಮಾತನಾಡುವಷ್ಟು ಒಳ್ಳೆಯತನವನ್ನು ಬೆಳೆಸಿಕೊಂಡಿದ್ದಾರೆ. ಅಂತಹವರು ಗೆದ್ದು ಪಾರ್ಲಿಮೆಂಟ್ಗೆ ಹೋದರೆ ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಮಂಚೂಣಿ ಘಟಕಗಳು, ಅದರಲ್ಲಿಯೂ ಯುವ ಕಾಂಗ್ರೆಸ್ ಮತ್ತು ಮಹಿಳಾ ಘಟಕಗಳು ಪ್ರತೀ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ತಿಳಿಸಿ, ಕಳೆದ ಬಾರಿಗಿಂತ ಕನಿಷ್ಠ ಪಕ್ಷ ಒಂದು ಬೂತ್ನಲ್ಲಿ 50ರಿಂದ 100ಮತಗಳು ಮುದ್ದಹನುಮೇಗೌಡರ ಪರ ಚಲಾವಣೆಯಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಕೆಪಿಸಿಸಿ ಓಬಿಸಿ ಘಟಕದ ವೇಣುಗೋಪಾಲ್ ಮಾತನಾಡಿ,ಕಾಂಗ್ರೆಸ್ ಪಕ್ಷಕ್ಕೆ ಒಬಿಸಿ, ಎಸ್ಸಿ, ಎಸ್ಟಿ ಮಹಿಳಾ ಮತದಾರರೇ ಅಡಿಪಾಯ.ಹಾಗಾಗಿ ಎಲ್ಲಾ ಮಂಚೂಣಿ ಘಟಕಗಳ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಪ್ರತಿ ಮನೆ ಮನೆಗೆ ತೆರಳಿ, ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರ ಗೆಲುವಿಗೆ ಸಹಕಾರಿಯಾಗುವಂತೆ ಮನವಿ ಮಾಡಿದರು.
ಮಾಜಿ ಶಾಸಕರಾದ ಗಂಗಹನುಮಯ್ಯ, ಡಾ.ರಫೀಕ್ ಅಹಮದ್, ಎನ್.ಗೋವಿಂದರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ಒಬಿಸಿ ಘಟಕದ ಪುಟ್ಟರಾಜು, ಎಸ್ಸಿ ಘಟಕದ ಕುಮಾರಸ್ವಾಮಿ, ಕಾರ್ಮಿಕನ ಘಟಕದ ಸೈಯದ್ ದಾದಾಪೀರ್, ಸೇವಾದಳದ ಕಿರಣ್ ಕುಮಾರ್ ಅವರುಗಳು ಸಭೆ ಕುರಿತು ಮಾತನಾಡಿದರು. ಇದೇ ವೇಳೆ ಹಲವು ಪಕ್ಷಗಳ ಮುಖಂಡರು ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.





