ತುಮಕೂರು ತಾಲೂಕು ಬೆಳ್ಳಾವಿ ರಸ್ತೆಯ ಬಳ್ಳಾಪುರ (ರಂಗಯ್ಯನ ಪಾಳ್ಯ) ಕುಡಿಯುವ ನೀರಿನ ಪಂಪ್ ಹೌಸ್ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಶೀಘ್ರದಲ್ಲೇ ಹೇಮಾವತಿ ನಾಲೆ ನೀರು ಬರುವ ನಿರೀಕ್ಷೆ ಇರುವುದರಿಂದ ಬಳ್ಳಾಪುರ ಪಂಪ್ ಹೌಸ್ ನಿಂದ 54 ಕಿಮೀ ಅಂತರದ ಮಧುಗಿರಿ ತಾಲೂಕು ಸಿದ್ಧಾಪುರ ಕೆರೆ ಹಾಗೂ 24ಕಿ.ಮೀ. ಅಂತರದ ಕೊರಟಗೆರೆ ತಾಲೂಕು ಅಗ್ರಹಾರ ಕೆರೆಗೆ ನೀರು ಸರಬರಾಜು ಮಾಡುವ ಮಾರ್ಗವನ್ನು ಪರಿಶೀಲನೆ ಮಾಡಿದರು.
ಹೇಮಾವತಿ ನೀರನ್ನು ಯಾವುದೇ ಸಮಯದಲ್ಲಿ ನಾಲೆಗೆ ಬಿಡುವ ನಿರೀಕ್ಷೆ ಇದ್ದು, ನಾಲೆಯ ಸುತ್ತ ಮುತ್ತ ಓಡಾಡದಂತೆ ಹಾಗೂ ಜಾನುವಾರುಗಳನ್ನು ನಾಲೆಯ ಬಳಿ ಕರೆದೊಯ್ಯದಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ ಅವರು ಪಂಪ್ ಹೌಸ್ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿದ್ಯುತ್ ಇಂಜಿನಿಯರ್ ಸಂದೀಪ್, ಮಧುಗಿರಿ ಹಾಗೂ ಕೊರಟಗೆರೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ಗಳು, ಮತ್ತಿತರರು ಹಾಜರಿದ್ದರು.





