ಮದ್ಯದ ಅಂಗಡಿ ಪರವಾನಿಗೆ ನೀಡಲು ಮಹಿಳಾ ಗ್ರಾಮ ಸಭೆಗಳ ಒಪ್ಪಿಗೆ ಕಡ್ಡಾಯವಾಗಿ ಪಡೆಯುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ – ಕರ್ನಾಟಕ ಸಂಘಟನೆಯಿಂದ ತುಮಕೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸರಕಾರ ಮದ್ಯ ಮಾರಾಟ ನಿಯಂತ್ರಣ ಮಾಡಬೇಕು ಹಾಗೂ ನಮ್ಮ ದೇಶದ ಸಂವಿಧಾನದ ಆರ್ಟಿಕಲ್ 47 ರಂತೆ ದೇಶ ಮಧ್ಯ ನಿಷೇಧದತ್ತ ಸಾಗಬೇಕೆಂದು ಈ ವೇದಿಕೆ 2015 ರಿಂದ ಒತ್ತಾಯಿಸುತ್ತಲೇ ಬಂದಿದೆ. ಮದ್ಯ ನಿಷೇಧ ಆಂದೋಲನವನ್ನು ಕಳೆದ ಹತ್ತು ವರ್ಷಗಳಿಂದ ಹಲವಾರು ಪ್ರಗತಿಪರ ಸಂಘಟನೆಗಳು ಬೆಂಬಲಿಸುತ್ತ ಬಂದಿವೆ. ಸಧ್ಯ ಈ ವೇದಿಕೆಯಿಂದ ಸರಕಾರಕ್ಕೆ ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಹರಿಯಾಣ, ಮಹಾರಾಷ್ಟ್ರ ಹಾಗೂ ಇತರ ಹಲವಾರು ರಾಜ್ಯಗಳಲ್ಲಿ ಮಹಿಳಾ ಗ್ರಾಮ ಸಭೆಗಳಿಗೆ ಪರಮಾಧಿಕಾರ ಕೊಡಲಾಗಿದೆ. ಇಲ್ಲಿಯ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರ್ಕಾರಗಳು ಮದ್ಯದ ಅಂಗಡಿಗೆ ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ದೊರೆಯಬೇಕು. ಮಹಿಳಾ ಗ್ರಾಮಸಭೆಯ ಠರಾವಿಗೆ ಮಾನ್ಯತೆ ನೀಡಲೇಬೇಕು. ಕರ್ನಾಟಕದ ಪಂಚಾಯತ ರಾಜ್ ಕಾನೂನಿನಲ್ಲಿ ಈ ತರದ ಒಂದು ಅಂಶ 2016ರ ತನಕ ಇತ್ತು, ಆದರೆ ಆ ಸಮಯದಲ್ಲಿ ಇದ್ದ ಸರಕಾರ ಇದನ್ನು ತೆಗೆದು ಹಾಕಿದೆ ಇದನ್ನು ಮತ್ತೆ ಜಾರಿಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ
ಒಂದು ಕಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ ಅದಕ್ಕಿಂತ ಹೆಚ್ಚು, ಮನೆ ಮನೆಗಳಲ್ಲಿ, ಕಿರಾಣ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ವಾಗುತ್ತಿದ್ದು ಸಮಾಜವನ್ನು ಕೆಟ್ಟ ದಾರಿಗೆ ಒಯ್ಯುತ್ತಿದೆ. ಹಳ್ಳಿಗಳಲ್ಲಿ ಸಣ್ಣ ಸಣ್ಣ ಮಕ್ಕಳು ಮದ್ಯ ಸೇವನೆ ಆರಂಭಿಸಿದ್ದಾರೆ. ಇದೇ ಪದ್ಧತಿ ಮುಂದುವರೆದರೆ ಕರ್ನಾಟಕ ರಾಜ್ಯವೂ ಪಂಜಾಬ್ ರೀತಿಯಲ್ಲಿ ಒಂದು ಹಂತದ ಯುವಪೀಳಿಗೆಯನ್ನು ಕಳೆದುಕೊಳ್ಳುವುದು ನಿಶ್ಚಿತ. ಹಾಗಾಗಿ ನಮ್ಮ ಬೇಡಿಕೆ ಇಷ್ಟೇ. ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ಕೊಡಬೇಕು. ಯಾಕಂದರೆ ಕಳೆದ ಹತ್ತು ವರ್ಷಗಳಲ್ಲಿ ವೇದಿಕೆ ಹಲವಾರು ಹಳ್ಳಿಗಳಿಂದ ಹೆಸರು ಸಮೇತ ಆಕ್ರಮ ಮದ್ಯ ಮಾರಾಟಗಾರರ ಪಟ್ಟಿಯನ್ನು ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ಕೊಟ್ಟು ಬಂದಿದ್ದಾರೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಆಕ್ರಮ ಮಾರಾಟ ಹೆಚ್ಚುತ್ತಿದೆ ಎಂದು ವಿವರಿಸಿದ್ದಾರೆ
ಈ ಎರಡು ಬೇಡಿಕೆಗಳ ಮೇಲೆ ಸರ್ಕಾರ ತಕ್ಷಣ ವೇದಿಕೆ ಜೊತೆ ಚರ್ಚಿಸಿ ಕ್ರಮ ಕೈಗೊಂಡಿಲ್ಲವಾದರೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು 25 ನವಂಬರ್ 2025 ರಂದು ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ





