ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡಬೇಕು ಹಾಗೂ ಕಾಂತರಾಜು ವರದಿಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿ ಗುರುವಾರ (ಜ.18) ತುಮಕೂರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕುಂದೂರು ತಿಮ್ಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮತ್ತು ಮುಖಂಡರುಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೋಮು ಪ್ರಚೋಧನಾ ಹೇಳಿಕೆ ನೀಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಸರ್ಕಾರ ಕೂಡಲೇ ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ದೇಶದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುವ ನಿಟ್ಟಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಶಾಶ್ವತ ಗಂಡನ ಕೊಟ್ಟಿದ್ದು, ಮೋದಿ ಸರ್ಕಾರ ಎಂಬಂತಹ ಹೇಳಿಕೆಗಳನ್ನು ನೀಡಿ, ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ.
ಇದೇ ವ್ಯಕ್ತಿ 2019ರ ಚುನಾವಣೆಯ ವೇಳೆಯೂ ದೇಶದಲ್ಲಿ ಹನುಮನ ಭಕ್ತರು ಮಾತ್ರ ಉಳಿಯಬೇಕು. ಟಿಪ್ಪು ಭಕ್ತರು ತೊಲಗಬೇಕು ಎಂದು ಹೇಳಿಕೆ ನೀಡಿ ಕೋಮು ಭಾವನೆ ಕೆರಳುವಂತೆ ಮಾಡಿದ್ದರು. ಹಾಗಾಗಿ ಇಂತಹ ಅಪಾಯಕಾರಿ ವ್ಯಕ್ತಿಯನ್ನು ಸರ್ಕಾರ ಬಂಧಿಸಿ, ಗಡಿಪಾರು ಮಾಡಬೇಕೆಂಬುದು ದಲಿತ ಸಂಘರ್ಷ ಸಮಿತಿಯ ಆಗ್ರಹವಾಗಿದೆ ಎಂದರು.
ಸರ್ಕಾರ ಸುಮಾರು 184ಕೋಟಿ ರೂ.ಗಳನ್ನು ಖರ್ಚು ಮಾಡಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು ಸಮಿತಿ ರಚಿಸಿ ಅರ್ಥಿಕ, ಸಾಮಾಜಿಕ ಗಣತಿ ಮಾಡಿಸಿದ್ದು, ಇದುವರೆಗೂ ವರದಿಯನ್ನು ಸರ್ಕಾರ ಸ್ವೀಕರಿಸಿಲ್ಲ. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಬಡವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿ ಏನಾಗಿದೆ ಎಂದು ತಿಳಿದುಕೊಳ್ಳಲು ಈ ವರದಿ ಅತ್ಯಂತ ಅಗತ್ಯವಾಗಿದೆ.
ಹಾಗಾಗಿ, ಸರ್ಕಾರ ಕೂಡಲೇ ಸದರಿ ವರದಿಯನ್ನು ಪಡೆದು, ಅದರ ಶಿಫಾರಸ್ಸುಗಳನ್ನು ಜಾರಿಗೆ ತರಬೇಕೆಂಬುದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿತು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು 2024ರ ಫೆಬ್ರವರಿ 11ರಂದು ನಗರದ ಏಂಪ್ರೆಸ್ ಶಾಲೆಯ ಅಡಿಟೋರಿಯಂನಲ್ಲಿ ಬೃಹತ್ ದಸಂಸದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕುಂದೂರು ತಿಮ್ಮಯ್ಯ ಇದೇ ವೇಳೆ ತಿಳಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಿರೂಪಾಕ್ಷ ಡ್ಯಾಗೇರಹಳ್ಳಿ ಮಾತನಾಡಿ, ದಸಂಸ ಹುಟ್ಟಿದಾಗಿನಿಂದಲೂ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಅನಂತಕುಮಾರ್ ಹೆಗ್ಡೆಯಂತಹ ಮನುವಾದಿಗಳ ಕೆಟ್ಟ ನಡೆಯ ವಿರುದ್ಧ ಹೋರಾಡುತ್ತಲೇ ಬಂದಿದೆ. ಚುನಾವಣೆ ಬರುವವರೆಗೂ ಜನರ ಕಣ್ಣಿಗೆ ಕಾಣದೆ, ಅವರ ಕಷ್ಟ ಸುಖಗಳನ್ನು ಆಲಿಸದೆ ಮೈಮರೆಯುವ ಇವರು, ಚುನಾವಣೆ ಬಂದಾಗ ದತ್ತೆಂದು ಹಿಂದುತ್ವ, ಕೋಮುವಾದಿ ಹೇಳಿಕೆಗಳ ಮೂಲಕ ಪ್ರಚಾರ ಪಡೆದು, ಅಧಿಕಾರ ಹಿಡಿಯುವ ಸುಲಭದ ದಾರಿ ಕಂಡು ಕೊಂಡಿದ್ದಾರೆ. ಇಂತಹವರಿಗೆ ಜನರು ಚುನಾವಣೆಗಳಲ್ಲಿ ಸರಿಯಾದ ಪಾಠ ಕಲಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ದಸಂಸ ಎಂದಿಗೂ ಕೋಮು ಪ್ರಚೋಧನೆಗೆ ಅವಕಾಶ ನೀಡಿಲ್ಲ. ಭಾತೃತ್ವ ಭಾರತ, ಜಾತ್ಯಾತೀತ ಭಾರತ ದಸಂಸ ಕಲ್ಪನೆಯಾಗಿದೆ. ಇದಕ್ಕೆ ಧಕ್ಕೆ ತರಲು ಎಂದಿಗೂ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆಯನ್ನು ದಸಂಸ ನಡೆಸಲಿದೆ ಎಂದು ವಿರೂಪಾಕ್ಷ ಡ್ಯಾಗೇರಹಳ್ಳಿ ಹೇಳಿದರು.
ದಲಿತ ಮುಖಂಡ ಕೋಡಿಯಾಲ ಮಹದೇವ್ ಮನವಿ ಪತ್ರವನ್ನು ಓದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶಿವನಂಜಪ್ಪ ಚೇಳೂರು, ಕುಂದೂರು ಮುರುಳಿ, ಲಕ್ಕೇನಹಳ್ಳಿ ನರಸೀಯಪ್ಪ, ನರಸಿಂಹಪ್ಪ ಪಾವಗಡ, ನಾಗರಾಜು ಉಪ್ಪಾರಹಳ್ಳಿ, ರಿಯಾಜ್ ಮರಳೂರು ದಿಣ್ಣೆ, ಜಿಲ್ಲಾ ಮಹಿಳಾ ಸಂಚಾಲಕಿ ಲಾವಣ್ಯ, ನಂದಿನಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




