ಸರ್ಕಾರದ, ಪ್ರಾಧಿಕಾರದ ಲೇಔಟ್ಗಳಲ್ಲಿ ಕಾರ್ಯನಿರತ ಪತ್ರಕರ್ತರು ಪೂರ್ಣಪ್ರಮಾಣದಲ್ಲಿ ನಿವೇಶನಗಳನ್ನು ಪಡೆಯಲು ಸಾಧ್ಯವಿಲ್ಲವೆಂಬುದು ವಾಸ್ತವ ಸಂಗತಿಯಾಗಿದ್ದು, ಪತ್ರಕರ್ತರಿಗೆ ಪ್ರತ್ಯೇಕ ಗೃಹ ನಿರ್ಮಾಣ ಸಹಕಾರ ಸಂಘರಚಿಸಿ ಸರ್ಕಾರದ ಜಾಗ ಮಂಜೂರು ಮಾಡಿಸಿಕೊಂಡು ನಿವೇಶನವನ್ನು ಹೊಂದುವಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.
ತುಮಕೂರು ನಗರದ ಪ್ರಗತಿ ಲೇಔಟ್ನಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಹಾಗೂ ಜಿಲ್ಲಾ–ತುಮಕೂರು ತಾಲ್ಲೂಕು ಮಟ್ಟದಲ್ಲಿ ರಾಜ್ಯೋತ್ಸವ ಪುರಸ್ಕೃತರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆಯಾಗಬೇಕಿತ್ತೆಂಬುದು ನನ್ನ ಕಳಕಳಿಯ ಸಲಹೆಯಾಗಿತ್ತು. ಆದರೆ ಚುನಾವಣೆ ನಡೆದಿದೆ. ಗೆದ್ದವರು ಸೋತವರು ಎಲ್ಲರೂ ಒಗ್ಗೂಡಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಕಾರ್ಯ ಮಾಡಿ. ಇಂದು ಎಲ್ಲರನ್ನೂ ಸೇರಿಸಿ ಗೌರವಿಸುತ್ತಿರುವುದು ಮಾದರಿ ಹಾಗೂ ಸೌಹಾರ್ದದ ನಡೆ. ಪ್ರತೀ ವ್ಯವಸ್ಥೆಯಲ್ಲಿ ದೋಷವಿರುತ್ತದೆ. ಪ್ರಶ್ನೆ ಮಾಡುವ ಪತ್ರಕರ್ತರೆ ಪ್ರಶ್ನೆಗೆ ಗುರಿಯಾಗಬಾರದು ಎಂದು ಮಾರ್ಮಿಕವಾಗಿ ನುಡಿದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದಲ್ಲೂ ಶಾಸಕಾಂಗದ ಮಾದರಿ ಚುನಾವಣೆಗಳು ನಡೆಯುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮಾಜದ ಒಳಿತಿಗಾಗಿ ನಿತ್ಯ ಶ್ರಮಿಸುವ ಕಾರ್ಯನಿರತ ಪತ್ರಕರ್ತರು ಚುನಾವಣೆ ವಿರೋಧಾಬಾಸಗಳನ್ನು ಮರೆತು ಜನಸಾಮಾನ್ಯರ ಒಳಿತಿಗೆ ಶ್ರಮಿಸಬೇಕು. ವಿಶೇಷವಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ನಗರ ಶಾಸಕರು ಪತ್ರಕರ್ತರ ಶ್ರೇಯೋಭಿಲಾಷಿಗಳಾಗಿದ್ದಾರೆಂದರು.
ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರು, ರಾಜ್ಯಸಮಿತಿ ನಿರ್ದೇಶಕರಾಗಿ ಆಯ್ಕೆಯಾದ ಚಿ.ನಿ.ಪುರುಷೋತ್ತಮ್ ಮಾತನಾಡಿ, ಪತ್ರಕರ್ತರ ಸಂಘಕ್ಕೆ ಇಂದು ಜಿಲ್ಲಾ ಕೇಂದ್ರದಲ್ಲಿ ಭದ್ರ ಬುನಾದಿ ಹಾಕಲಾಗಿದೆ. ಪ್ರತ್ಯೇಕ ತಂಡಗಳಾಗಿ ನಾವೆಲ್ಲ ಸ್ಪರ್ಧಿಸಿದ್ದರೂ ರಾಜಕೀಯ ಮಾದರಿಯಲ್ಲಾದ ಚುನಾವಣೆ ಕೆಲವು ಏರು-ಪೇರುಗಳಿಗೆ ಕಾರಣವಾಗಿದೆ. ಆಡಳಿತ ನಡೆಸುವವರ ಒಳ್ಳೆಯ ಕಾರ್ಯಗಳಿಗೆ ಪೂರಕ ಸಹಕಾರ ಇದ್ದೇ ಇರುತ್ತದೆ ಎಂದರು.
ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನುಶಾಂತರಾಜ್, ಹಿರಿಯ ಪತ್ರಕರ್ತರಾದ ಮುನೀರ್ ಅಹಮದ್, ಡಿ.ಎಂ.ಸತೀಶ್, ಪಿ.ಡಿ.ಈರಣ್ಣ, ಹಿರೇಹಳ್ಳಿದೇವರಾಜ್, ವೆಂಕಟಾಚಲ, ಎಲ್.ಚಿಕ್ಕೀರಪ್ಪ, ಬರಗೂರು ವಿರೂಪಾಕ್ಷ, ತೋ.ಸಿ.ಕೃಷ್ಣಮೂರ್ತಿ, ಮಲ್ಲಿಕಾರ್ಜುನ ದುಂಡ, ವೀರಭದ್ರಯ್ಯ, ರೇಣುಕಾಪ್ರಸಾದ್ ಸೇರಿದಂತೆ ಹಲವು ಪತ್ರಕರ್ತರು, ಡಮರುಗೇಶ್, ಅಭಿಲಾಶ್, ರಾಜೇಶ್, ನಟೇಶ್ ಇತರರು ಪಾಲ್ಗೊಂಡರು. ಎಸ್.ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಗೌರವ ಸನ್ಮಾನ: ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಸಿ.ಟಿ.ಎಸ್.ಗೋವಿಂದಪ್ಪ, ಗುಬ್ಬಿ ಆಂಜಿನಪ್ಪ, ನರಸಿಂಹಯ್ಯ, ಜಯಣ್ಣ ಬೆಳೆಗೆರೆ, ನಾಗರಾಜು, ಗುರುಮೂರ್ತಿ ಕೊಟ್ಟಿಗೆಮನೆ, ಪ್ರಗತಿಟಿವಿ ನಾಗರಾಜ್, ಟಿವಿ9 ಸೋಮಶೇಖರ್, ಗೂಳೂರು ಸುರೇಶ್ ಹಾಗೂ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಚಿ.ನಿ.ಪುರುಷೋತ್ತಮ್(ರಾಜ್ಯಸಮಿತಿ), ಟಿ.ಇ.ರಘುರಾಮ್(ಪ್ರಧಾನ ಕಾರ್ಯದರ್ಶಿ), ಜಯಣ್ಣಜಯನುಡಿ(ಉಪಾಧ್ಯಕ್ಷ), ಬೊಮ್ಮೆಕಲ್ ನಂದೀಶ್ ಹಾಗೂ ರಂಗಧಾಮಯ್ಯ (ಕಾರ್ಯದರ್ಶಿಗಳು) ಹಾಗೂ ನಿರ್ದೇಶಕರುಗಳಾದ ಜಯಣ್ಣ ಬೆಳೆಗೆರೆ, ಮಾರುತಿಪ್ರಸಾದ್(ಕೆ.ಟಿ.ಎಂ), ಯೋಗೀಶ್ ಮೇಳೆಕಲ್ಲಹಳ್ಳಿ ಅವರನ್ನು ಸನ್ಮಾನಿಸಲಾಯಿತು. . ಮಿಡಿತ ಹಾರ್ಟ್ ಸೆಂಟರ್ನ ಮುಖ್ಯಸ್ಥ ಡಾ.ಭಾನುಪ್ರಕಾಶ್ ಹಾಗೂ ಕುಮಾರಸ್ವಾಮಿಅವರನ್ನು ಈ ವೇಳೆ ವಿಶೇಷವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್ ಮಾತನಾಡಿ ಕಳೆದ ಅವಧಿಯಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳು ಪುರುಷೋತ್ತಮ್, ರಘುರಾಮ್ ಸಾರಥ್ಯದಲ್ಲಿ ನಡೆದವು. ಈ ಬಾರಿ ಅವರುಗಳು ಮರು ಆಯ್ಕೆಯಾಗಿದ್ದು, ಇಂದಿನ ಗೌರವ ಸನ್ಮಾನಕ್ಕೆ ಆ ತಂಡ ಈ ತಂಡ ಎಂದೆಣಿಸದೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಪತ್ರಕರ್ತರು ಒಂದೇ ಎಂಬ ಪರಿಭಾವನೆಯಲ್ಲಿ ನಾವಂತೂ ಇದ್ದು, ಆಡಳಿತ ನಡೆಸುವವರು ಇದನ್ನು ಅರ್ಥೈಸಿಕೊಂಡು ಜೊತೆಗೂಡಿ ಹೋಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿ ನೂತನ ಪದಾಧಿಕಾರಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.





