ನಗರೀಕರಣದಲ್ಲಿ ಸ್ಲಂಗಳ ವಾತಾವರಣ ಬದಲಾಗಬೇಕು. ಹಾಗಾಗಿ ಕಾಂಗ್ರೆಸ್ ಸರ್ಕಾರ ಸ್ಲಂ ಜನರಿಗೆ ಭೂ ಒಡೆತನ ನೀಡುತ್ತಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರು ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದರು.
ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ʼಸ್ಲಂ ಜನರಿಗೆ ಇ-ಸ್ವತ್ತು ವಿತರಣೆ ಹಾಗೂ ವಿವಿಧ ಸ್ಲಂಗಳ ಜನರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ತುಮಕೂರಿನ ಘೋಷಿತ 32 ಸ್ಲಂಗಳಲ್ಲಿ ಹಕ್ಕುಪತ್ರಗಳಿಲ್ಲದ 3,643 ಕುಟುಂಬಗಳ ಸಮೀಕ್ಷೆ ಮಾಡಿ ಅರ್ಹತೆಯಿರುವ 1,493 ಕುಟುಂಬಗಳಲ್ಲಿ ನೈಜತೆಯಿರುವ 120 ಕುಟುಂಬಗಳಿಗೆ ಹಕ್ಕುಪತ್ರ ನೋಂದಣಿ ಕರಾರಿನ ಜತೆಗೆ ನಗರ ಪಾಲಿಕೆಯಿಂದ 53 ಇ-ಸ್ವತ್ತು ನೀಡಲಾಗಿದೆ. ಇದಕ್ಕೆ ಅಧಿಕೃತವಾಗಿ ಜಿಲ್ಲಾಡಳಿತದಿಂದ ಚಾಲನೆ ನೀಡಲಾಗಿದೆ” ಎಂದು ಹೇಳಿದರು.
“ನಾಗರಿಕ ಸಮಾಜದಲ್ಲಿ ಸ್ಲಂಗಳಿರುವುದು ನಮ್ಮ ಅಸಮಾನತೆಯ ಸೂಚಕವಾಗಿದೆ. ಬಹುದಿನಗಳ ಜನರ ಕನಸನ್ನು ಈಡೇರಿಸಿದ ತೃಪ್ತಿ ಸಿಕ್ಕಿದೆ. ಈ ನಗರೀಕರಣದಲ್ಲಿ ಸ್ಲಂಗಳ ವಾತಾವರಣ ಬದಲಾಗಿ ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕು. ಕೊಳಚೆ ಪ್ರದೇಶಗಳಲ್ಲೇ ಕಟ್ಟಕಡೆಯದಾಗಿ ಜೀವಿಸುವ ಪೌರಕಾರ್ಮಿಕರ ಬದುಕೂ ಕೂಡ ಬದಲಾಗಬೇಕು. ಗ್ರೇಟರ್ ಬೆಂಗಳೂರಿನಲ್ಲಿ ಮನುಷ್ಯನ ವಾಸಕ್ಕೆ ಯೋಗ್ಯವಲ್ಲದ ವಾತಾವರಣದಲ್ಲಿ ಸ್ಲಂಗಳ ಚಿಕ್ಕ ಮನೆಗಳಲ್ಲಿ 8 ರಿಂದ 10 ಜನ ಬದುಕುತ್ತಿರುವುದರಿಂದ ಆ ಪ್ರಮಾಣಕ್ಕೆ ಸರ್ಕಾರ ಸೌಲಭ್ಯಗಳನ್ನು ಕೊಡಬೇಕಿದೆ. ಗ್ರೇಟರ್ ತುಮಕೂರು ಮಾಡಲು ನಾವು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಅಡಿ ತುಮಕೂರು ನಗರವನ್ನು ಅಭಿವೃದ್ಧಿ ಮಾಡಿದ್ದೇವೆ. ನಗರಗಳ ಮೇಲೆ ಜನರು ಅವಲಂಬಿತರಾಗಿ ಹೆಚ್ಚೆಚ್ಚು ವಲಸೆ ಬರುತ್ತಿರುವುದರಿಂದ ನಗರದಲ್ಲಿ ಶೇ.40ರಷ್ಟು ಜನರು ವಾಸ ಮಾಡುತ್ತಿದ್ದು, ಇದರಲ್ಲಿ ಕನಿಷ್ಠ 20ರಷ್ಟು ಜನಸಂಖ್ಯೆ ಸ್ಲಂ ಪ್ರದೇಶಗಳಲ್ಲಿದೆ. ಸ್ಲಂ ಚಿತ್ರಣವನ್ನು ಬದಲಾಯಿಸಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಈಗಾಗಲೇ 2023ರ ಪ್ರಣಾಳಿಕೆಯಲ್ಲಿ ಹಲವಾರು ಘೋಷಣೆಗಳನ್ನು ಮಾಡಿದೆ. ಸ್ಲಂ ಜನರಿಗೆ ವಸತಿ ಮತ್ತು ಭೂ ಒಡೆತನ ನೀಡಿ ಸಂವಿಧಾನದ ಘನತೆಯ ಬದುಕನ್ನು ಇಲ್ಲಿರುವ ಜನರಿಗೆ ಖಾತ್ರಿ ಮಾಡಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ” ಎಂದರು.
“ಇಂದು ಬಡವರ ಮುಖದಲ್ಲಿ ನಗು ಕಾಣುತ್ತಿರುವುದು ಅವರಿಗೆ ಒಂದು ಶಾಶ್ವತ ಸೂರು ಮತ್ತು ಭೂಮಿ ತಮ್ಮದಾಗಿರುವ ಖುಷಿ ಇದೆ. ಇದೇ ಸಂವಿಧಾನದಿಂದ ಬದಲಾವಣೆ ಬರಲು ಸಾಧ್ಯವಾಗಿರುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಈಡೇರಿದಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಭಾರತದಲ್ಲಿ ಅಲ್ಪಸಂಖ್ಯಾತರ ʼಸಾಂವಿಧಾನಿಕ ಹಕ್ಕುಗಳು – ದಾಳಿಗಳುʼ ಕುರಿತ ವಿಚಾರ ಸಂಕಿರಣ
ವೇದಿಕೆಯಲ್ಲಿ ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು, ಬಿಎಂಟಿಸಿ ಉಪಾಧ್ಯಕ್ಷ ನಿಖಿತ್ ರಾಜ್ ಮೌರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್, ನಗರಪಾಲಿಕೆ ಆಯುಕ್ತ ಯೋಗಾನಂದ್, ಸ್ಲಂ ಬೋರ್ಡ್ ಎಇಇ ಬಾನುಪ್ರತಾಪ್ ಸಿಂಹ, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಸ್ಲಂ ಸಮಿತಿಯ ಪದಾಧಿಕಾರಿ ಅನುಪಮಾ, ಅರುಣ್, ಶಂಕ್ರಯ್ಯ, ತಿರುಮಲಯ್ಯ ಇದ್ದರು.





