ತುಮಕೂರಿನ ಜಯನಗರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದರೂ, ಇನ್ನೂ ನಿರ್ಮಾಣವಾಗಿಲ್ಲ. ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ರಾಜ್ಯಾಧ್ಯಕ್ಷ ಸಾಧಿಕ್ ಪಾಷ ಅವರ ನೇತೃತ್ವದಲ್ಲಿ ಸಂಘಟನೆಯ ಹಲವು ಕಾರ್ಯಕರ್ತರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಾಗ ಮಂಜೂರಾಗಿರುವ ಸಪ್ತಗಿರಿ ಬಡಾವಣೆಯ ಸಿ.ಎ ನಿವೇಶನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. “ಜಯನಗರ ಪೊಲೀಸ್ ಠಾಣೆ 2015ರಲ್ಲಿ ಜಯನಗರ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಉದ್ಘಾಟನೆಗೊಂಡಿದ್ದು, ಈವರೆಗೂ ಸ್ವಂತ ಕಟ್ಟಡವಿಲ್ಲ. ಇರುವ ಕಟ್ಟಡ ಶಿಥಿಲಗೊಂಡಿದ್ದು, ಸಣ್ಣ ಮಳೆ ಬಂದರೂ ನೀರು ಸೋರುವುದಲ್ಲದೆ, ಯಾವಾಗ ಕರ್ತವ್ಯ ನಿರತರ ಮೇಲೆ ಬೀಳುತ್ತದೆಯೋ ಎಂಬ ಜೀವಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ” ಎಂದು ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ರಾಜ್ಯಾಧ್ಯಕ್ಷ ಸಾಧಿಕ್ ಪಾಷ ಹೇಳಿದರು.
“ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ(ಟುಡಾ)ದಿಂದ ಮಂಜೂರಾಗಿರುವ ನಿವೇಶನದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರದ ಒಳಾಡಳಿತ ಇಲಾಖೆ ಮತ್ತು ಪೊಲೀಸ್ ಇಲಾಖೆಯ ವಸತಿಗೃಹ ಮತ್ತು ಮೂಲ ಸೌಕರ್ಯ ವಿಭಾಗದಿಂದ ಅನುದಾನ ನೀಡಬೇಕಾಗಿದೆ” ಎಂದರು.
“ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿ ದೊಡ್ಡದಿದ್ದು, ಎಸ್ಎಸ್ಐಟಿಯಿಂದ ಬಡ್ಡಿಹಳ್ಳಿಯವರೆಗೆ ವಿಸ್ತರಿಸಿದೆ. ನಗರದ ಹೊರವಲಯವನ್ನೇ ಹೆಚ್ಚಾಗಿ ಹೊಂದಿದ್ದು, ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಹಾಲಿ ಇರುವ ಪೊಲೀಸ್ ಠಾಣೆಯನ್ನು ಅಂದು ಗೃಹ ಸಚಿವರಾಗಿದ್ದ, ಹಾಲಿ ಗೃಹಸಚಿವ ಡಾ ಜಿ ಪರಮೇಶ್ವರ್ ಅವರು ಉದ್ಘಾಟಿಸಿದ್ದರು. ಟುಡಾದಿಂದ 2017ರಲ್ಲಿ ಸಪ್ತಗಿರಿ ಬಡಾವಣೆ ಗೆದ್ದಲಹಳ್ಳಿ ಗ್ರಾಮದ ಸರ್ವೆ ನಂಬರ್ 39/4 ಮತ್ತು 30/05ರಲ್ಲಿ ಸುಮಾರು 1196*116 ನಿವೇಶನ ಮಂಜೂರು ಮಾಡಿ ₹20 ಲಕ್ಷ ಹಣವನ್ನು ಪಡೆದಿದೆ. ನಿವೇಶನ ಮಂಜೂರಾಗಿ ಸುಮಾರು 8 ವರ್ಷ ಕಳೆಯುತ್ತಾ ಬಂದಿದ್ದರೂ ಈವರೆಗೂ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಇದರಿಂದ ಸಿಬ್ಬಂದಿಗಳು ಶಿಥಿಲಗೊಂಡ ಕಟ್ಟಡದಲ್ಲಿಯೇ ಜೀವ ಭಯದಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕನಿಷ್ಠ ₹50 ಲಕ್ಷ ಅನುದಾನ ನೀಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ನಗರಾಭಿವೃದ್ದಿ ಪ್ರಾಧಿಕಾರ ಮಂಜೂರು ಮಾಡಿರುವ ನಿವೇಶನದಲ್ಲಿ ಜಯನಗರ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಸಚಿವರು, ಹಣಕಾಸು ಇಲಾಖೆ, ಒಳಾಡಳಿತ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಪೊಲೀಸ್ ಮಹಾನಿರ್ದೇಶಕರಿಗೆ 2023ರ ಜುಲೈ 28 ಮತ್ತು ಆಗಸ್ಟ್ 22ರಂದು ಪತ್ರ ಬರೆದು ಒತ್ತಾಯಿಸಿದ್ದರೂ ಈವರೆಗೂ ನಮ್ಮ ಪತ್ರಗಳಿಗೆ ಇಲಾಖೆಯಿಂದ ಯಾವುದೇ ಉತ್ತರ ಬಂದಿಲ್ಲ. ಆದ ಕಾರಣ, ಮಾನವ ಹಕ್ಕುಗಳ ರಕ್ಷಣಾ ಕೇಂದ್ರದಿಂದ ಉದ್ದೇಶಿತ ನಿವೇಶನದಲ್ಲಿ ಸರ್ಕಾರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಅನುದಾನ ನೀಡುವವರೆಗೂ ಅಮರಣಾಂತ ಉಪವಾಸ ಆರಂಭಿಸಿದ್ದೇವೆ. ಕೂಡಲೇ ಪೊಲೀಸ್ ಇಲಾಖೆ ಅನುದಾನ ನೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮುಂದುವರೆಯಲಿದೆ” ಎಂದು ಸಾಧಿಕ್ ಪಾಷ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸರ್ಕಾರಿ ಶಾಲೆ ಆಟದ ಮೖದಾನ ಉಳಿಸಲು ಮೌನ ಪ್ರತಿಭಟನೆ
ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ಕೃಷ್ಣಮೂರ್ತಿ, ಹನುಮಂತರಾಜು, ತಬರೇಜ್, ಮಹಬೂಬ್, ವಾಸಿಮ್, ಮೋಹನ್, ಜಾಕಿರ್, ಅಜ್ಗರ್ ಅಲಿ, ಅಯಾಜ್, ಇರ್ಫಾನ್ ಅಹಮದ್, ಸೈಯದ್ ಇಸ್ತಾಕ್, ಖಾದರ್ ಸೇರಿದಂತೆ ಹಲವರು ಇದ್ದರು.




