ಹೇಮಾವತಿ ನಾಲೆಯಿಂದ ಮಾಗಡಿಗೆ ನೀರು ಹರಿಸುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ವಿರುದ್ಧ ತುಮಕೂರು ಜಿಲ್ಲೆಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ, ಪೋಲೀಸರ ಸರ್ಪಗಾವಲಿನ ನಡೆಯುವೆಯೇ ಜೆಸಿಬಿ ಬಳಸಿ, ನಾಲೆಗೆ ಮಣ್ಣು ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಚನ್ನೇನಹಳ್ಳಿ ಗ್ರಾಮದ ಬಳಿ ಕಾಮಗಾರಿ ನಡೆಯುತ್ತಿರುವ ಹೊಸ ನಾಲೆಗೆ ರೈತರು ಮಣ್ಣು ಸುರಿದಿದ್ದಾರೆ.
ಈ ಹಿಂದೆ, ಸಾವಿರಾರು ರೈತರು ಪ್ರತಿಭಟನೆ ನಡೆಸಿ, ಕಾಮಗಾರಿ ನಿಲ್ಲಿಸುವಂತೆ ಆರು ದಿನಗಳ ಗಡುವು ನೀಡಿದ್ದರು. ಆದರೂ, ಕಾಮಗಾರಿ ಮುಂದುವರೆದಿದ್ದು, ರೈತರು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, “ಭೂ ಸ್ವಾಧೀನದ 41 ಹಾಗೂ 61 ಪ್ರಕ್ರಿಯೆ ಯಾವುದೇ ನಡೆದಿಲ್ಲ. ಕಾಮಗಾರಿಯ ಡಿಪಿಆರ್ ಗೊತ್ತಿಲ್ಲ. ರೈತರಿಗೆ ನೋಟಿಸ್ ನೀಡಿಲ್ಲ. ಸರ್ಕಾರಿ ಜಾಗದಲ್ಲಿ ಕೆಲಸ ಆರಂಭಿಸೋದಕ್ಕೆ ಕಂದಾಯ ಇಲಾಖೆ ಅನುಮತಿ ಸಿಕ್ಕಿಲ್ಲ. ಇವೆಲ್ಲವನ್ನೂ ಜಿಲ್ಲಾಧಿಕಾರಿ ತಹಶೀಲ್ದಾರ್ ಗಮನಿಸಬೇಕಿತ್ತು. ಜಾಣ ಮೌನ ತಾಳಿರುವ ಮೇಲಾಧಿಕಾರಿಗಳು ಸರ್ಕಾರದ ಕೈ ಗೊಂಬೆ ಎನ್ನುವುದು ಇಲ್ಲಿ ತಿಳಿಯುತ್ತದೆ. ಈಗ ಸಾಂಕೇತಿಕವಾಗಿ ಮಣ್ಣು ಮುಚ್ಚುವ ಕೆಲಸ ಮಾಡಿದ್ದೇವೆ. ಶೀಘ್ರದಲ್ಲಿ ಗುತ್ತಿಗೆದಾರರು ಕೆನಾಲ್ ಮುಚ್ಚಬೇಕು. ಇಲ್ಲವಾದಲ್ಲಿ ಹೋರಾಟದ ಕಿಚ್ಚು ಯಾವುದೇ ಅನಾಹುತಕ್ಕೆ ಕಾರಣವಾದರೂ ಸರ್ಕಾರ ನೇರ ಹೊಣೆ” ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, “ಬೃಹತ್ ಪೈಪ್ ಅಳವಡಿಸಿದರೆ ಈ ರೈತರಿಗೆ ಮರಣ ಶಾಸನ ಬರೆದಂತೆ. 14 ಅಡಿ ವ್ಯಾಸದ ಪೈಪ್ ಏಕಕಾಲದಲ್ಲಿ 900 ಕ್ಯೂಸೆಕ್ಸ್ ನೀರು ಸೆಳೆಯುವ ತಾಕತ್ತು ಇರುತ್ತದೆ. ಒಂದು ತೊಟ್ಟು ನೀರು ನಮಗೆ ಸಿಗೋದಿಲ್ಲ. ಈಗಾಗಲೇ ಮುಖ್ಯ ನಾಲೆ ಆಧುನೀಕರಣ ಗೊಂಡಿದೆ. ಕುಣಿಗಲ್ ಭಾಗಕ್ಕೆ ಸರಾಗವಾಗಿ ನೀರು ಹೋಗುತ್ತಿದೆ. ಯಾವ ತೊಂದರೆ ಇಲ್ಲದಿದ್ದರೂ ಈ ಯೋಜನೆ ರೂಪಿಸಿರೋದು ರಾಮನಗರ ಕಡೆ ನೀರು ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ. ಈ ಜೊತೆಗೆ ಯಾವ ಇಲಾಖೆ ಅನುಮತಿ ಇಲ್ಲದೆ ಸರ್ಕಾರಿ ಜಾಗ ಕಬಳಿಕೆ, ದೊಡ್ಡ ಮರಗಳು ಕತ್ತರಿಸಿದ್ದಾರೆ ಎಂದ ಅವರು ಜಿಲ್ಲೆಯ ಸಚಿವರು ಕಾಮಗಾರಿ ರದ್ದು ಮಾಡಿಸಲು ಆಗದಿದ್ದರೆ ರಾಜೀನಾಮೆ ನೀಡಿ ಹೋರಾಟಕ್ಕೆ ಬರಲಿ” ಎಂದು ಆಹ್ವಾನ ನೀಡಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, “ಕೆರೆ ಜಾಗ ಬಳಸಲು ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆದಿಲ್ಲ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಇಲ್ಲ, ಕಂದಾಯ ಇಲಾಖೆಯಿಂದ ಭೂಮಿ ಹಸ್ತಾಂತರ ನಡೆದಿಲ್ಲ. ಹೀಗೆ ಎಲ್ಲಾ ಕಾನೂನು ಗಾಳಿಗೆ ತೂರಿ ಪ್ರಜಾಪ್ರಭುತ್ವ ಕೈಗೆತ್ತಿಕೊಂಡು ಸರ್ವಾಧಿಕಾರ ಧೋರಣೆ ತೋರಿದ್ದಾರೆ. ಕುಣಿಗಲ್ ಗೆ ನೀರು ಕೊಡಲು ನಮ್ಮ ಅಡ್ಡಿ ಇಲ್ಲ. ನಮ್ಮ ನೀರು ಮುಂದುವರೆದು ಮಾಗಡಿ ಕಡೆ ಹರಿಸಲು ನಮ್ಮ ವಿರೋಧವಿದೆ. ಮಾಗಡಿ ರಾಮನಗರಕ್ಕೆ ಕಾವೇರಿ ನೀರು ಹರಿಸಿಕೊಳ್ಳಲಿ ಎಂದ ಅವರು ನಮ್ಮ ಹೋರಾಟ ನಿರಂತರ ನಡೆಯಲಿದೆ. ಯೋಜನೆ ಕೈ ಬಿಡಬೇಕು. ಇಲ್ಲವಾದಲ್ಲಿ ಹೋರಾಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ” ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, “ಬೃಹತ್ ಪೈಪ್ ಲೈನ್ ಗುರುತ್ವಾಕರ್ಷಣೆಗೆ ಅನುಗುಣವಾಗಿ ಅಳವಡಿಸಿ ನಮ್ಮ ನಾಲೆಯಿಂದ ಎಲ್ಲಾ ನೀರು ಸೆಳೆಯುವ ಹುನ್ನಾರ ನಡೆದಿದೆ. ಮೂರು ತಿಂಗಳು ಹರಿದರೆ 11 ಟಿಎಂಸಿ ನೀರು ಕುಣಿಗಲ್ ನತ್ತ ಹೋಗಲಿದೆ. ಅವರ ಮೂರು ಟಿಎಂಸಿ ಆಧುನೀಕರಣಗೊಂಡ ನಾಲೆಯ ಮೂಲಕ ಪಡೆಯಲಿ. ಪೈಪ್ ಲೈನ್ ಮೂಲಕ ಯಾವ ಕಡೆ ನೀರು ಹೋಗಲಿದೆ ಎಂಬುದು ಇಲ್ಲಿನ ಎಲ್ಲಾ ರೈತರಿಗೆ ತಿಳಿದಿದೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ತುಟಿ ಬಿಚ್ಚದ ಕಾರಣ ಕೂಡಾ ತಿಳಿದಿದೆ. ನಮ್ಮ ಹೋರಾಟ ನಿರಂತರಕ್ಕೆ ನನ್ನದೇ ಜೆಸಿಬಿ ಯಂತ್ರ ಕಳುಹಿಸುತ್ತೇನೆ. ಕೆನಾಲ್ ಮುಚ್ಚಿಯೇ ಹೋರಾಟ ನಡೆಸೋಣ. ಜೈಲು ಸೇರಿದರೂ ಸರಿ ಯೋಜನೆ ಸ್ಥಗಿತಗೊಳಿಸೋಣ” ಎಂದರು.
ಈ ಸಂದರ್ಭದಲ್ಲಿ ಶಾಸಕ ಕೃಷ್ಣಪ್ಪ ಅವರ ಪುತ್ರ ವೆಂಕಟೇಶ್, ಮುಖಂಡರಾದ ಚನ್ನೇನಹಳ್ಳಿ ನರಸಿಂಹಮೂರ್ತಿ, ಬೋರಪ್ಪನಹಳ್ಳಿ ಕುಮಾರ್, ಜಗದೀಶ್, ತಾಪಂ ಮಾಜಿ ಸದಸ್ಯ ಭಾನುಪ್ರಕಾಶ್, ಸುಶಾಂತ್, ರಾಮಲಿಂಗೇಗೌಡ, ನವೀನ್, ಸದಾಶಿವ, ರಘು ಇತರರು ಇದ್ದರು.




