ವಶಪಡಿಸಿಕೊಂಡ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಚೇತನ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಪಿಎಸ್ಪಿ ಚೇತನ್ ಕುಮಾರ್ ಕುಮಾರ್ ಎಸ್ಎಸ್ ಅವರು ರೆಡೆಹ್ಯಾಂಡ್ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಬೆಂಗಳೂರಿನ ನಾಗದೇವನಹಳ್ಳಿ ನಿವಾಸಿ ನಾಗೇಶ್ ಎಸ್.ಕೆ ಅವರ ಕಾರನ್ನು ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ವಾಹನವನ್ನು ಮಾಲೀಕರಿಗೆ ಬಿಡುಗಡೆ ಮಾಡಬೇಕೆಂದರೆ 5 ಲಕ್ಷ ರೂ. ಕೊಡಬೇಕೆಂದು ಪಿಎಸ್ಐ ಚೇತನ್ ಕುಮಾರ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ದುಬಾರಿ ಲಂಚಕ್ಕೆ ಬೇಡಿಕೆ ಇಟ್ಟ ಚೇತನ್ ಕುಮಾರ್ ವಿರುದ್ಧ ನಾಗೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರು, ಚೇತನ್ ಅವರನ್ನು ‘ರೆಡ್ಹ್ಯಾಂಡ್’ಆಗಿ ಹಿಡಿಯಲು ಬಲೆ ಬೀಸಿದ್ದರು.
ಈ ಲೇಖನ ಓದಿದ್ದೀರಾ?: ಅಂದು ಸಿದ್ಧಾರ್ಥ, ಇಂದು ರಾಯ್; ಸಾಲು ಸಾಲು ಉದ್ಯಮಿಗಳ ಆತ್ಮಹತ್ಯೆ ಹಿಂದಿರುವ ಸತ್ಯವೇನು?
ಆದಾಗ್ಯೂ, ನೇರವಾಗಿ ಲಂಚ ಪಡೆಯದ ಪಿಎಸ್ಐ ಚೇತನ್, ಕ್ಯಾತಸಂದ್ರ ಬಳಿಕ ಸ್ಥಳೀಯ ಹೋಟೆಲ್ ಸಿಬ್ಬಂದಿಗೆ 40,000 ರೂ. ಹಣವನ್ನು ಕೊಡುವಂತೆ ನಾಗೇಶ್ ಅವರಿಗೆ ಸೂಚಿಸಿದ್ದರು. ಅವರು ಹೋಟೆಲ್ ಸಿಬ್ಬಂದಿಗೆ ಹಣ ನೀಡಿದಾಗ ಲೋಕಾಯುಕ್ತ ಅಧಿಕಾರಿಗಳು ಹೋಟೆಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆಯ ನಂತರ, ಹೋಟೆಲ್ ಸಿಬ್ಬಂದಿಯು ತಾವು ಪಿಎಸ್ಐ ಪರವಾಗಿ ಹಣವನ್ನು ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಸುಳಿವು ದೊರೆತ ನಂತರ, ಶನಿವಾರ ಚೇತನ್ ಕುಮಾರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




