ಮೈಕ್ರೋ ಫೈನಾನ್ಸ್ ಕಂಪನಿಗಳು ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಾಂತ ಹಾಗೂ ರಾಜ್ಯ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಅಲ್ಪಸಂಖ್ಯಾತ ಸಂಘಟನೆ, ಅಲೆಮಾರಿ ಹಾಗೂ ಬುಡಕಟ್ಟು ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಸೋಮವಾರ ಕೆಂಪಮ್ಮ ದೇವಿ ದೇವಸ್ಥಾನದ ಆವರಣದಿಂದ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಧರಣಿ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, “ನಾಡಿನ ಉದ್ದಗಲಕ್ಕೂ ದಲಿತರ ಮತ್ತು ಜನಸಾಮಾನ್ಯರ ಮೇಲೆ ಮೈಕ್ರೋ ಫೈನಾನ್ಸ್ನವರು ಪಟ್ಟಭದ್ರ ಗೂಂಡಾಗಳನ್ನು ಮುಂದೆ ಇಟ್ಟುಕೊಂಡು ಪುಂಡಾಟಿಕೆ ನಡೆಸಿ ಸಾಲ ಪಡೆದವರನ್ನು ಒಕ್ಕಲಿಬ್ಬಿಸುತ್ತಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಜನಸಾಮಾನ್ಯರ ರಕ್ಷಣೆ ಮಾಡಬೇಕು” ಎಂದು ಆಗ್ರಹಿಸಿದರು.
“ದೌರ್ಜನ್ಯ ಹಾಗೂ ದಬ್ಬಾಳಕೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಲೈಸೆನ್ಸ್ ರದ್ದು ಮಾಡಬೇಕು. ಮೈಕ್ರೋ ಫೈನಾನ್ಸ್ ಅವರ ದೌರ್ಜನ್ಯ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಬೇಕು. ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್ನವರ ಹೆಚ್ಚುವರಿ ಬಡ್ಡಿ ಕಟ್ಟಲಾಗದ ಜನರಿಗೆ ಸೂಕ್ತ ರಕ್ಷಣೆ ನೀಡಬೇಕು. ಮೈಕ್ರೋ ಫೈನಾನ್ಸ್ ಮಾಲೀಕರ ಮತ್ತು ಪುಂಡರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಇತ್ತೀಚೆಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಅರಳಗುಪ್ಪೆ ಗ್ರಾಮದ ಭಾಗ್ಯಮ್ಮ ಎಂಬವರು ಮೈಕ್ರೋಫೈನಾನ್ಸ್ನವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರಣಯ್ಯ ಎಂಬುವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಮೈಕ್ರೋ ಫೈನಾನ್ಸ್ನವರ ಕಿರುಕುಳ ತಾಳಲಾರದೆ ಸಾಲು ಸಾಲು ಆತ್ಮಹತ್ಯೆಗಳು ನಡೆಯುತ್ತಿವೆ. ಜನಸಾಮಾನ್ಯರಿಗೆ ತೊಂದರೆ ಕೊಟ್ಟು ವಸೂಲಿ ಮಾಡಬಾರದೆಂದು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಜಿಲ್ಲಾಧಿಕಾರಿಯವರು ಆದೇಶ ಮಾಡಿದ್ದರೂ ಕೂಡಾ ಮೈಕ್ರೋ ಫೈನಾನ್ಸ್ ಕಂಪನಿಗಳು ಆದೇಶ ಪಾಲಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕು” ಎಂದು ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಉಪವಿಭಾಗಧಿಕಾರಿ, “ಮನವಿ ಪತ್ರದ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಎಸ್ಎಫ್ಸಿ ವಿಶೇಷ ಅನುದಾನ ಅವೈಜ್ಞಾನಿಕ ಬಳಕೆ; ಸಂತೋಷ್ ಹಿರೇಮನಿ ತನಿಖೆಗೆ ಆಗ್ರಹ
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಚನ್ನಬಸವಣ್ಣ, ರಾಜ್ಯ ರೈತ ಸಂಘಟನೆಯ ದೇವರಾಜು ತಿಮ್ಲಾಪುರ, ಕರ್ನಾಟಕ ರಕ್ಷಣಾ ವೇದಿಕೆ ವಿಜಯ್ಕುಮಾರ್, ಅಲ್ಪಸಂಖ್ಯಾತ ಸಂಘಟನೆಯ ಇಮ್ರಾನ್, ಅಲೆಮಾರಿ ಸಂಘಟನೆಯ ಇಂದ್ರಮ್ಮ ಹಾಗೂ ಬುಡಕಟ್ಟು ಸಂಘಟನೆಯ ಉಜ್ಜಜ್ಜಿ ರಾಜಣ್ಣ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಜಕ್ಕನಹಳ್ಳಿ ಮೋಹನ್, ಮಹಿಳಾ ಘಟಕದ ಸಂಚಾಲಕರಾದ ಮಂಜುಳಾ, ನಂದಿನಿ, ಸಂಘಟನಾ ಸಂಚಾಲಕರಾದ ಸುರೇಶ್, ಅಣ್ಣಪ್ಪ, ರಮೇಶ್ ಎಸ್ ಸಿ ಶಿವಪುರ, ಕೀರ್ತಿ ಹತ್ಯಾಳು, ರಘು ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ ನೂರಾರು ಮಹಿಳೆಯರು ಇದ್ದರು.





