ಕೇಂದ್ರ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣನವರ ‘ಮೇಲ್ಜಾತಿಯವರನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ ಮಾಡಲಾಗುತ್ತಿದೆ ಎಂಬ ಆರೋಪದ ಹಿಂದೆ ಮಹಾ ಮೋಸ ಅಡಗಿದೆ. ಮೇಲ್ಜಾತಿ ಅನ್ನೊ ಮಾತಿನ ಹಿಂದೆ ಬಹುದೊಡ್ಡ ರಾಜಕೀಯ ಮತ್ತು ಸಾಂಸ್ಕೃತಿಕ ದಾಳಿಯೂ ಇದೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಹೆತ್ತೇನಹಳ್ಳಿ ಹೇಳಿದರು.
ತುಮಕೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಸಂಖ್ಯೆಯಲ್ಲಿ ಸವರ್ಣೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಸುಳ್ಳನ್ನೇ ಇಲ್ಲೀವರೆಗೂ ನಂಬಿಸಿ ಅಧಿಕಾರ ಹಿಡಿದಿದ್ದಾರೆ. ಅದನ್ನೇ ಇನ್ನೂ ಮುಂದುವರೆಸಲು ಸಾಧ್ಯವಿಲ್ಲ. ಇವರ ನಿಜ ಬಣ್ಣ ಸಮೀಕ್ಷೆಯಿಂದ ಬಯಲಾಗಲಿದೆ ಎಂಬ ಆತಂಕ ಸಂಸದ ಸೋಮಣ್ಣ ಅವರ ಹೇಳಿಕೆಯಿಂದ ಹೊರಬಿದ್ದಿದೆ ಎಂದರು.
ಬ್ರಾಹ್ಮಣರಿಗೆ ಇಡಬ್ಲ್ಯುಎಸ್ ನೀಡಿದಾಗ ಸೊಲ್ಲೆತ್ತದ ಸೋಮಣ್ಣ ಈಗ ಬಾಯಾಡಿಸಲು ಮುತುವರ್ಜಿ ವಹಿಸಿದ್ದಾರೆ. ಸರ್ವರಿಗೂ ಸಮಾನ ಗೌರವ ದೊರಕಲೆಂಬ ಬಸವಾದಿ ಶರಣರ ತತ್ವದ ವಿರುದ್ಧ ಸೋಮಣ್ಣನವರು ಮಾತನಾಡಿದ್ದಾರೆ. ತಾವು ಪ್ರತಿನಿಧಿಸುವ ಲಿಂಗಾಯತರೂ ಶೂದ್ರವರ್ಗಕ್ಕೆ ಸೇರಿದವರು ಎಂಬುದನ್ನು ಮೆರೆಯಬಾರದು. ಲಿಂಗಾಯತ ಪರಂಪರೆಯನ್ನು ಅರ್ಥಮಾಡಿಕೊಂಡಿದ್ದಾರೆಂದು ಭ್ರಮಿಸಿ ಹಿಂದುಳಿದ ವರ್ಗದ ಜನ ನಿಮ್ಮನ್ನು ಗೆಲ್ಲಿಸಿ ತಪ್ಪು ಮಾಡಿರುವ ಬಗ್ಗೆ ಈಗ ಜನರಿಗೆ ಮನವರಿಕೆಯಾಗುತ್ತಿದೆ ಎಂದು ಹೇಳಿದರು.
ಸೋಮಣ್ಣನವರೇ ನೀವು ವಚನ ಪರಂಪರೆಯನ್ನು ಸರಿಯಾಗಿ ಓದಿಕೊಳ್ಳಬೇಕು. ಆಗ ನೀವು ಜನದನಿಯ ಸಾರಥಿಯಾಗುವಿರಿ. ಇಲ್ಲದಿದ್ದರೆ ಹೀಗೆ ನಿಮ್ಮ ನಯ ವಂಚಕತನ ಆಗಾಗ ಪ್ರದರ್ಶಿಸುತ್ತಲೇ ಇರಬೇಕಾಗುತ್ತದೆ. ಹಾಗಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದು ಸಮೀಕ್ಷೆ ಪರವಾದ ನಿಲುವು ತಳೆಯುವಂತೆ ಮಂಜುನಾಥ್ ಒತ್ತಾಯಿಸಿದರು.





