ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪ್ರಗತಿಪರ ರೈತ ಮಹಿಳೆ ಗಂಗಾಲಕ್ಷ್ಮಿ ಕೆ ಎಲ್ ಅವರು ಅಣಬೆ ಕೃಷಿ ಹಾಗೂ ಸಾವಯವ ಬೇಸಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಣಬೆ ಬೇಸಾಯ ಜತೆಗೆ ಮಿಶ್ರ ಕೃಷಿ ಮಾಡಿ ಆರ್ಥಿಕವಾಗಿಯೂ ಸ್ವಾವಲಂಬಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಟ್ಯಾಕ್ಸಿ ಒಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಕ್ಕೆ ಟ್ಯಾಕ್ಸಿಯಿಂದ ಬರುತ್ತಿದ್ದ ಆದಾಯದಿಂದ ಬದುಕು ಸಾಗಿಸುವುದು ಕಷ್ಟವಾಗಿತ್ತು. ಹಾಗಾಗಿ ಬೆಂಗಳೂರಿನಿಂದ ಊರಿಗೆ ಬಂದು ಅಣಬೆ ಕೃಷಿಗೆ ಕೈಹಾಕಿದಾಗ ಅಣಬೆ ಕೃಷಿ ಕೈಹಿಡಿದಿರುವುದಾಗಿ ರೈತ ಮಹಿಳೆ ಗಂಗಾಲಕ್ಷ್ಮಿ ನೆನಪಿಸಿಕೊಂಡರು.
ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿ, ಅರಳೇಕಟ್ಟೆ ಲಂಬಾಣಿ ತಾಂಡ್ಯ ಗ್ರಾಮಕ್ಕೆ ಬಂದ ಗಂಗಾಲಕ್ಷ್ಮಿ ಅವರ ಕುಟುಂಬ ಸಾವಯವ ಕೃಷಿ ಮಾಡಲು ಮುಂದಾಗಿದೆ. ಇವರು ಬೆಂಗಳೂರಿನಲ್ಲಿರುವಾಗ ಜೈಮಾರುತಿ ಮಶ್ರೂಮ್ ಸೆಂಟರ್ನಲ್ಲಿ ತರಬೇತಿ ಪಡೆದಿದ್ದರಿಂದ ಸ್ವಂತ ಗ್ರಾಮದಲ್ಲಿ ಅಣಬೆ ಕೃಷಿ ಪ್ರಾರಂಭ ಮಾಡಲು ನೆರವಾಗಿದೆ.

ಅಣಬೆ ಬೇಸಾಯ : ಪ್ರತಿದಿನ 5 ಕೆಜಿ ಅಣಬೆಯನ್ನು ಬೆಳೆಯುತ್ತಿದ್ದಾರೆ. ಅಣಬೆಗೆ ಪ್ರತಿನಿತ್ಯ ಮನೆಯ ಹತ್ತಿರ ಅಕ್ಕಪಕ್ಕದ ಗ್ರಾಮಸ್ಥರೇ ಗ್ರಾಹಕರಾಗಿದ್ದಾರೆ. ಒಂದು ಕೆಜಿ ಅಣಬೆಯನ್ನು ₹250ಕ್ಕೆ ಮಾರಾಟ ಮಾಡುತ್ತಿದ್ದಾರೆ.
ಅಣಬೆ ಕೃಷಿ ವಿಧಾನ
ಒಂದೊಂದು ಇಂಚಿನಷ್ಟು ಅಳೆತೆಯ ನೆಲ್ಲು ಹುಲ್ಲನ್ನು ಕತ್ತರಿಸಿಕೊಂಡು, ಫಾರ್ಮಾಲಿನ್ ಹಾಗೂ ಕಾರ್ಬನ್ ಡೈಜಿನ್ ಮಿಶ್ರಿತ ನೀರಿನಲ್ಲಿ ಕನಿಷ್ಠ 12 ಗಂಟೆಯವರೆಗೆ ನೆನೆಸಿರುತ್ತಾರೆ. ಸ್ವಲ್ಪ ತೇವಾಂಶ ಇರುವಂತೆ 18 ರಿಂದ 20 ಇಂಚಿನಷ್ಟು ಉದ್ದದ ಪಾಲಿಥಿನ್ ಕವರಿನ ಚೀಲಗಳಲ್ಲಿ ಒಂದು ಇಂಚು ಹುಲ್ಲಿಗೆ ಅಣಬೆ ಬೀಜಗಳನ್ನು ಹಾಕಲಾಗುತ್ತದೆ. ಅದೇ ರೀತಿ ಪ್ರತಿ ಚೀಲಗಳಲ್ಲಿಯೂ 3- 4 ಲೇಯರ್ಗಳನ್ನು ಹಾಕಲಾಗುತ್ತದೆ. ದಿನಂಪ್ರತಿ ಮೂರು ಬಾರಿಯಂತೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಇದಾಗಿ ನಾಲ್ಕೈದು ದಿನಕ್ಕೆ ಅಣಬೆ ಕಟಾವಿಗೆ ಸಿದ್ದವಾಗುತ್ತದೆ. ಪ್ರಾರಂಭದಲ್ಲಿ ಮಾತ್ರ ಒಂದು ತಿಂಗಳಷ್ಟು ಸಮಯ ತೆಗೆದುಕೊಳ್ಳುತ್ತದೆ, ಆದರೂ ತಿಂಗಳಿಗೆ ಮೂರು ಬಾರಿ ಫಸಲು ದೊರೆಯುತ್ತದೆ.

ಲಾಭದ ಲೆಕ್ಕಾಚಾರ
“ಪಾಲಿಥೀನ್ ಬ್ಯಾಗ್ ಸಿದ್ಧಪಡಿಸುವುದು, ಹುಲ್ಲು ಕತ್ತರಿಸಿ ನೆನೆಸಿಡುವುದು, ಒಣಗಿಸಿ ಬೀಜ ಬಿತ್ತುವುದು, ನೀರು ಸಿಂಪಡಣೆ ಮುಂತಾದ ಸಣ್ಣಸಣ್ಣ ಕೆಲಸಗಳಿಗಾಗಿ ತಿಂಗಳಿಗೆ ಸುಮಾರು ₹5,000ದಿಂದ ₹6,000 ಗಳಷ್ಟು ಖರ್ಚು ಬರುತ್ತದೆ. ದಿನಕ್ಕೆ ನಾಲ್ಕರಿಂದ ಆರು ಕಿಲೋಗಳಷ್ಟು ಆಯಿಸ್ಟರ್ ಅಣಬೆಯನ್ನು ಉತ್ಪಾದಿಸುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ₹250 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಒಟ್ಟಾರೆ ತಿಂಗಳಿಗೆ ಸುಮಾರು ₹15,000ಗಳಷ್ಟು ಖರ್ಚಾಗುತ್ತಿದೆ. ತಿಂಗಳಿಗೆ ₹22,500 ಲಾಭ ಸಿಗುತ್ತದೆ” ಎಂದು ಗಂಗಾಲಕ್ಷ್ಮಿ ಹೇಳುತ್ತಾರೆ.
ನಾಟಿ ಕೋಳಿ ಸಾಕಾಣಿಕೆ: ಬಯಲಿನಲ್ಲಿ 50 ನಾಟಿ ಕೋಳಿಗಳನ್ನು ಸಾಕಿದ್ದಾರೆ. ನಾಟಿ ಕೋಳಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುವುದರಿಂದ ಕೆಲವರು ಫೋನ್ ಮೂಲಕ ಆರ್ಡರ್ ಮಾಡಿ ಖರೀದಿಸುತ್ತಿದ್ದಾರೆ” ಎಂದು ಗಂಗಾಲಕ್ಷ್ಮಿ ಮಾಹಿತಿ ನೀಡಿದರು.

ಕುರಿ ಸಾಕಣಿಕೆ: “ಕುರಿ ಸಾಕಾಣಿಕೆಗಾಗಿ ಶೆಡ್ ಮಾಡಿ ಕುರಿ ಹಾಗೂ ಮೇಕೆಯನ್ನು ಸಾಕಿದ್ದಾರೆ. ಆವುಗಳಿಂದ ಬರುವ ಹಿಕ್ಕೆಯನ್ನು ಸ್ವಂತ ಜಮೀನಿಗೆ ಬಳಸಿ ರಾಸಾಯನಿಕ ಮುಕ್ತ ಕೃಷಿ ಮಾಡಲು ಮುಂದಾಗಿದ್ದೇನೆ” ಎಂದು ಹೇಳುತ್ತಾರೆ.
ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು ಇವುಗಳ ಜೊತೆಯಲ್ಲಿ ಹಣ್ಣಿನ ಗಿಡಗಳಾದ ಪಪ್ಪಾಯ, ಲಿಚ್ಚಿ ಹನುಮಫಲ, ಸೀಬೆ, ಇನ್ನು ಮುಂತಾದ ಹಣ್ಣಿನ ಗಿಡಗಳನ್ನು ಮನೆಯ ಉಪಯೋಗಕ್ಕೆ ಬೆಳೆಸಿದ್ದಾರೆ. ಮತ್ತು ಅರಣ್ಯ ಸಸಿಗಳಾದ ಸಿರ್ಲ್ವರ್, ಓಕ್, ಸಾರ್ವೆ, ತೇಗ ಇವುಗಳನ್ನು ಜಮೀನಿನ ಬದುಗಳಲ್ಲಿ ಹಾಕಲಾಗಿದೆ.
ಇದನ್ನೂ ಓದಿದ್ದೀರಾ? ಅಲೆಮಾರಿ-ಜಾಗರಣೆ | ರಾಜ್ಯಕ್ಕೇ ಮಾದರಿಯಾದ ಚಿಕ್ಕನಾಯಕನ ಸೀಮೆಯ ಅಲೆಮಾರಿ ಹಕ್ಕುಗಳ ಹೋರಾಟ!
ಹೆಚ್ಚಿನ ವಿವರಗಳಿಗೆ ಗಂಗಾಲಕ್ಷ್ಮಿ ಕೆ ಎಲ್ ಅವರನ್ನು ಸಂಪರ್ಕಿಸಬಹುದು 9916332925.
“ಸಸ್ಯಾಹಾರಿಗಳಿಗೆ ಮಾಂಸಕ್ಕೆ ಬದಲಾಗಿ ಅಣಬೆಯು ಉತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ. ಅಣಬೆಯನ್ನು ಆಹಾರವಾಗಿಯೂ ಔಷಧಿಯಾಗಿಯೂ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದು ಅನೇಕ ವಿಧದ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್-ಬಿ1, ಬಿ2, ಬಿ9, ಬಿ12, ವಿಟಮಿನ್-ಸಿ ಮತ್ತು ವಿಟಮಿನ್-ಡಿ2 ಅಂಶಗಳು ಅಡಕವಾಗಿದೆ. ಸಮತೋಲನ ಆಹಾರವಾಗಬೇಕಾದರೆ ಅಣಬೆಯು ಮುಖ್ಯ, ಅಣಬೆ ಸೇವನೆಯಿಂದ ತೂಕ ನಿರ್ವಹಣೆ ಮಾಡಬಹುದು. ಹೃದಯ ರೋಗ, ಬೊಜ್ಜು ಕಡಿಮೆ ಮಾಡಬಹುದು” ಎನ್ನುತ್ತಾರೆ ಕೆವಿಕೆ ಕೊನೇಹಳ್ಳಿಯ ವಿಜ್ಞಾನಿ(ಗೃಹ ವಿಜ್ಞಾನಿ) ಡಾ. ಪಿ ಬಿ ಸಿಂಧು.





