ಅಧಿಕಾರಿಗಳಿಗೆ ಲಂಚ ಕೊಡಲು ನನ್ನ ಬಳಿ ಹಣವಿಲ್ಲವೆಂದು ರೈತರೊಬ್ಬರು ತಾವು ಬೆಳೆದಿದ್ದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಮೂಲಂಗಿಯನ್ನೇ ಲಂಚವಾಗಿ ನೀಡುವುದಾಗಿ ಧ್ವನಿವರ್ಧಕದಲ್ಲಿ ಘೋಷಿಸಿದ್ದಾರೆ.
ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ನಿವಾಸಿ ಪ್ರಸನ್ನ ಕುಮಾರ್ ಅವರು ಅಧಿಕಾರಿಗೆ ಲಂಚವಾಗಿ ಮೂಲಂಗಿ ಕೊಡಲು ಮುಂದಾಗಿದ್ದಾರೆ. ಅವರು ತಮ್ಮ ಗ್ರಾಮದಲ್ಲಿ ತನ್ನ ಜಮೀನಿಂದ ಹೆದ್ದಾರಿವರೆಗೆ ಸಂಪರ್ಕ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ಕಂದಾಯ ಅಧಿಕಾರಿ ತಿಸ್ಕರಿಸಿದ್ದರು ಎಂದು ಹೇಳಲಾಗಿದೆ. ಶಿವನಗೆರೆ ಗ್ರಾಮ ಲೆಕ್ಕಪತ್ರಗಾರರು ಹಣಕ್ಕಾಗಿ ತಮಗೆ ಕಿರುಕುಳ ನೀಡುತ್ತಿದ್ದರು. ನಾನು ಲಂಚ ಕೊಡದ ಕಾರಣಕ್ಕಾಗಿ ತಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ರೈತ ಪ್ರಸನ್ನ ಆರೋಪಿಸಿದ್ದಾರೆ.
ಮೂಲಂಗಿಯನ್ನು ತಾಲೂಕು ಕಚೇರಿಗೆ ತಂದ ರೈತ, “ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸುವಂತೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ. ಆದರೂ, ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ರಸ್ತೆ ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆ. ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರಿಗೆ ಲಂಚ ನೀಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ, ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ” ಎಂದು ಹೇಳಿದ್ದಾರೆ.
“ಹೆದ್ದಾರಿಯಿಂದ ನಮ್ಮ ರಸ್ತೆಗೆ ಸಂಪರ್ಕ ಒದಗಿಸುವ ಈಗಿರುವ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ. ಆ ಅತಿಕ್ರಮಣವನ್ನು ತೆರವುಗೊಳಿಸಬೇಕು. ಪಕ್ಕಾ ರಸ್ತೆ ನಿರ್ಮಿಸಬೇಕು ಎಂಬ ನನ್ನ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಾನು ಲೋಕಾಯುಕ್ತ ನ್ಯಾಯಾಲಯವನ್ನು ಸಂಪರ್ಕಿಸಿದ್ದೆ. ಲೋಕಾಯುಕ್ತರು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ. ಆದರೂ, ಕಾಮಗಾರಿ ಆರಂಭವಾಗಿಲ್ಲ” ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ





